ಕಲಬುರಗಿ,ಜೂ.೨೭- ಮಹಿಳೆಯರು ರಾಜ್ಯ ಸರ್ಕಾರ ಶಕ್ತಿ ಯೋಜನೆಯಡಿ ತಮ್ಮ ಆಧಾರ್ ಕಾರ್ಡ್ ತೋರಿಸಿ ರಾಜ್ಯಾದ್ಯಂತ ಉಚಿತವಾಗಿ ಪ್ರಯಾಣಿಸಬಹುದು.ಇದೀಗ ಕಲಬುರಗಿ ಜಿಲ್ಲೆಯ ವಾಡಿ ಪಟ್ಟಣದಲ್ಲಿ, ಆಧಾರ್ ಕಾರ್ಡ್ ತೋರಿಸಿ ಎಂದ ಕಂಡಕ್ಟರ್ ಮೇಲೆ ಅವರ ಸಂಬಂಧಿಕರು ಹಲ್ಲೆ ನಡೆಸಿದ್ದಾರೆ.
ನಿನ್ನೆ ರಾವೂರ್ ಗ್ರಾಮದಲ್ಲಿ ಮಹಿಳೆಯೊಬ್ಬರು ಕಲಬುರಗಿ ಮತ್ತು ಯಾದಗಿರಿ ನಡುವೆ ಚಲಿಸುವ ಬಸ್ ಹತ್ತಿದ್ದಾರೆ. ಟಿಕೆಟ್ ತೆಗೆದುಕೊಳ್ಳುವಾಗ, ಅವರು ಆಧಾರ್ ಕಾರ್ಡ್ ಜೆರಾಕ್ಸ್ ಪ್ರತಿಯನ್ನು ತೋರಿಸಿದ್ದಾರೆ. ಕಂಡಕ್ಟರ್ ಅರ್ಜುನ್ ನಾಗಪ್ಪ ಕಟ್ಟಿಮನಿ ಅವರು ಮೂಲ ಕಾರ್ಡ ತೋರಿಸಲು ಹೇಳಿ ಇತರರಿಗೆ ಟಿಕೆಟ್ ನೀಡಲು ಹೋಗಿದ್ದಾರೆ. ಅವರು ಮಹಿಳೆಯ ಬಳಿಗೆ ಬಂದು ಆಧಾರ್ ಕಾರ್ಡ್ ತೋರಿಸಲು ಕೇಳಿದ್ದಾಗ ಅವರು ಬೇರೆಯವರ ಆಧಾರ್ ಕಾರ್ಡ್ ತೋರಿಸಿದ್ದಾರೆ.
ಇದರಿಂದಾಗಿ ಕಂಡಕ್ಟರ್, ಹಣ ಪಾವತಿಸಿ ಟಿಕೆಟ್ ಪಡೆಯಿರಿ ಅಥವಾ ಬಸ್ನಿಂದ ಇಳಿಯಿರಿ ಎಂದು ಹೇಳಿದ್ದಾರೆ .ಟಿಕೆಟ್ಗೆ ಹಣ ನೀಡಿದ ಮಹಿಳೆ ತನ್ನ ಸಂಬಂಧಿಕರಿಗೆ ಕರೆ ಮಾಡಿ ಘಟನೆಯ ಬಗ್ಗೆ ತಿಳಿಸಿದ್ದಾರೆ .ಬಸ್ ವಾಡಿ ಪಟ್ಟಣದ ಬಳಿ ತಲುಪಿದ ತಕ್ಷಣ, ಮಹಿಳೆಯ ಸಂಬಂಧಿ ಯುವಕರು ಕಂಡಕ್ಟರ್ಗೆ ಹಿಗ್ಗಾಮುಗ್ಗಾ ಥಳಿಸಿದ್ದಾರೆ.
ಕಂಡಕ್ಟರ್ಗೆ ಉಸಿರಾಟದ ತೊಂದರೆ ಉಂಟಾಗಿ ಮೂರ್ಛೆ ಹೋಗಿದ್ದಾರೆ. ಪಿಎಸ್ಐ ಕೆ. ತಿರುಮಲೇಶ್ ಅವರ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಸ್ಥಳೀಯ ಆಸ್ಪತ್ರೆಯಲ್ಲಿ ಕಂಡಕ್ಟರ್ಗೆ ಪ್ರಥಮ ಚಿಕಿತ್ಸೆ ನೀಡಿ ನಂತರ ಜಿಲ್ಲಾ ಆಸ್ಪತ್ರೆಗೆ ದಾಖಲಿಸಿದ್ದಾರೆ. ಬಸ್ ಚಾಲಕ ಹಲ್ಲೆಕೋರರ ವಿರುದ್ಧ ದೂರು ದಾಖಲಿಸಿದ್ದಾನೆ ಎನ್ನಲಾಗಿದೆ.