ಸಂಜೆವಾಣಿ ನ್ಯೂಸ್
ಮೈಸೂರು.ಜೂ.26:- ಪಾರಂಪರಿಕ ನಗರಿ ಮೈಸೂರಿನಲ್ಲಿ ನಿರಂತರವಾಗಿ ಪ್ರವಾಸೋದ್ಯಮ ಹಾಗೂ ಹೋಟೆಲ್ ಮಾಲೀಕರು ಹಾಗೂ ಉದ್ಯಮಿಗಳ ಹಿತ ಕಾಯುತ್ತಾ ಬಂದಿರುವ ನಮ್ಮ ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ನಾರಾಯಣಗೌಡ ರವರಿಗೆ ರಾಜ್ಯಮಟ್ಟದ ಅತಿಥ್ಯ ರತ್ನ ಪ್ರಶಸ್ತಿ ಬಂದಿರುವುದು ಮೈಸೂರಿಗರಿಗೆ ಹೆಮ್ಮೆಯ ವಿಚಾರ ಎಂದು ಶಾಸಕ ಟಿ.ಎಸ್.ಶ್ರೀವತ್ಸ ಹೇಳಿದರು.
ವಿಶ್ವೇಶ್ವರ ನಗರದಲ್ಲಿರುವ ಖಾಸಗಿ ಹೋಟೆಲ್ನಲ್ಲಿ ಹೋಟೆಲ್ ಮಾಲೀಕರ ಸಂಘದ ವತಿಯಿಂದ ಆಯೋಜಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಇತ್ತೀಚಿಗೆ ಬೆಂಗಳೂರಿನಲ್ಲಿ ನಡೆದ ಕರ್ನಾಟಕ ರಾಜ್ಯ ಹೋಟೆಲ್ಗಳ ಸಂಘದ 70ನೇ ವಾರ್ಷಿಕೋತ್ಸವದ ಸಮಾರಂಭದಲ್ಲಿ ಉದ್ಯಮ ಕ್ಷೇತ್ರದಲ್ಲಿ ರಾಜ್ಯಮಟ್ಟದ ಆತಿಥ್ಯ ರತ್ನ ಪ್ರಶಸ್ತಿ ಸ್ವೀಕರಿಸಿದ ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ನಾರಾಯಣಗೌಡ ಅವರಿಗೆ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದ ಅವರು, ವಿಶ್ವ ಪ್ರವಾಸೋದ್ಯಮ ದಿನಾಚರಣೆ, ಅಂತರಾಷ್ಟ್ರೀಯ ಯೋಗ ದಿನಾಚರಣೆ ಸೇರಿದಂತೆ ಸಾಕಷ್ಟು ಸಮಾಜಮುಖಿ ಸಂದೇಶ ಸಾರುವ ದಿನಗಳನ್ನು ಮೈಸೂರಿನಲ್ಲಿ ಯಶಸ್ವಿಯಾಗಿ ನೆರವೇರಲು ಸ್ಥಳೀಯ ಸಂಘ ಸಂಸ್ಥೆಗಳು ಉದ್ಯಮಿಗಳು ಹಾಗೂ ಜಿಲ್ಲಾಡಳಿತದೊಂದಿಗೆ ಸೇತುವೆಯಾಗಿ ಕೆಲಸ ಮಾಡಿ ಮೈಸೂರಿನ ಹಿರಿಮೆ ಹೆಚ್ಚಿಸುವಲ್ಲಿ ನಾರಾಯಣ ಗೌಡ ಅತ್ಯುತ್ತಮ ಸೇವೆ ಸಲ್ಲಿಸಿದ್ದಾರೆ. ಕೋವಿಡ್ ಸಂದರ್ಭದಲ್ಲಿ ಹೊಟೇಲುಗಳಲ್ಲಿ ಕೆಲಸ ಮಾಡುವ ಕಾರ್ಮಿಕರಿಗೆ ದಿನಸಿ ಸಾಮಗ್ರಿಗಳು ಮತ್ತು ವೈದ್ಯಕೀಯ ನೆರವು ಕಾರ್ಮಿಕ ಇಲಾಖೆಯಿಂದ ಸಾಹಯಧನ ಕಲ್ಪಿಸಿದರು. ಆರ್ಥಿಕವಾಗಿ ತೊಂದರೆಯಲ್ಲಿದ್ದ ಸಣ್ಣಪುಟ್ಟ ಹೊಟೇಲು ಮಾಲೀಕರಿಗೆ ಯಾವುದೇ ತೊಂದರೆ ಬಾರದಂತ ಬೆನ್ನೆಲುಬಾಗಿ ನಿಂತು ಮಾರ್ಗದರ್ಶನ ಮಾಡಿ ನೂರಾರು ಮಂದಿಯನ್ನು ಮೈಸೂರಿನ ಗಣ್ಯ ವ್ಯಕ್ತಿಯಾಗಿ ಮುಖ್ಯವಾಹಿನಿಗೆ ತರುವಲ್ಲಿ ಶ್ರಮಿಸಿದ್ದಾರೆ. ಅವರಿಗೆ ಅತಿಥ್ಯ ಪ್ರಶಸ್ತಿ ಬಂದಿರುವುದು ಸಂತಸ ತಂದಿದೆ ಎಂದರು.
ಶಾಸಕ ಕೆ.ಹರೀಶ್ ಗೌಡ ಮಾತನಾಡಿ, ಮೈಸೂರಿನ ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡುವಲ್ಲಿ ಹೋಟೆಲು ಮಾಲೀಕರ ಸಂಘದ ಅಧ್ಯಕ್ಷ ನಾರಾಯಣ ಗೌಡ ಪಾತ್ರ ಮಹತ್ವವಾದುದು. ಕಳೆದ ನಾಲ್ಕು ದಶಕಗಳಿಂದ ಮೈಸೂರು ದಸರಾ ಮತ್ತು ಹೊಸ ವರ್ಷದ ಆಚರಣೆ, ಆಷಾಢ, ದೀಪಾವಳಿ ಬೇಸಿಗೆ ಮಾಸದ ಸಂದರ್ಭದಲ್ಲಿ ಲಕ್ಷಾಂತರ ಪ್ರವಾಸಿಗರು ಮೈಸೂರಿಗೆ ಬರುತ್ತಾರೆ. ಸ್ಥಳೀಯರಿಗೆ ಉದ್ಯೋಗ ಸೃಷ್ಠಿ ಮತ್ತು ಮೈಸೂರಿನ ಪರಂಪರೆ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಸಹಕಾರ ನೀಡಿ ಸಾಕಷ್ಟು ಸಂಘ ಸಂಸ್ಥೆಗಳಿಂದ ಸರ್ಕಾರಕ್ಕೆ ನೆರವು ತಂದುಕೊಡಲು ಹಲವಾರು ಯೋಜನೆಗಳನ್ನು ಮಾರ್ಗದರ್ಶನ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಮೈಸೂರು ದಸರಾ ಸಂದರ್ಭದಲ್ಲಿ ಪ್ರವಾಸಿಗರಿಗಾಗಿ ಆಹಾರ ಮೇಳ ಪರಿಕಲ್ಪನೆ ಆಯೋಜನೆ ಜಾರಿಗೆ ತರಲು ನಾರಾಯಣಗೌಡ ಅವರೇ ಮುಖ್ಯ ಕಾರಣ ಎಂದರು.
ಕಾರ್ಯಕ್ರಮದಲ್ಲಿ ಹೋಟೆಲ್ ಮಾಲೀಕರ ಸಂಘದ ರಾಜ್ಯಾಧ್ಯಕ್ಷ ಜಿ.ಕೆ.ಶೆಟ್ಟಿ, ನಿಕಟಪೂರ್ವ ರಾಜ್ಯಾಧ್ಯಕ್ಷ ಎಂ.ರಾಜೇಂದ್ರ, ರಾಜ್ಯ ಉಪಾಧ್ಯಕ್ಷ ರವಿ ಶಾಸ್ತ್ರಿ, ಕಾರ್ಯದರ್ಶಿ ಎ.ಆರ್.ರವೀಂದ್ರ ಭಟ್, ಸುರೇಶ್ ಉಗ್ರಯ್ಯ, ಅಶೋಕ್.ಜಿ, ಸುಬ್ರಹ್ಮಣ್ಯ ತಂತ್ರಿ, ಅರುಣ್.ಕೆ.ಎಸ್, ಭಾಸ್ಕರ್ ಶೆಟ್ಟಿ.ಕೆ, ಪಿ.ಎಸ್.ಶೇಖರ್ ಸೇರಿದಂತೆ ಹಲವರು ಇದ್ದರು.