‘ಆಟಿ’ ತಿಂಗಳಾರಂಭ..: ಪ್ರಾಕೃತಿಕ ಆಹಾರಗಳತ್ತ ತುಳುವರ ‘ಮೊರೆ’

ಪುತ್ತೂರು; ತುಳುನಾಡಿನ ಜನತೆಯ ಪಾಲಿಗೆ ‘ಆಟಿ’ಯ ಆಗಮನವಾಗಿದೆ. ಇನ್ನು ತುಳುನಾಡಿನಲ್ಲಿ ಹಬ್ಬ ಹರಿದಿನಗಳಿಲ್ಲ. ಆಟಿ ಅಮಾವಾಸ್ಯೆ ಹೊರತುಪಡಿಸಿದರೆ ದೈವಗಳಿಗೆ ಅಗೇಲು ಇಲ್ಲ. ಶುಭಕಾರ್ಯಗಳಿಲ್ಲ. ಪ್ರಕೃತಿಜನ್ಯವಾದ ಆಹಾರಗಳ ಮೊರೆ ಹೋಗುವ ಸಮಯವೇ ಆಟಿ ತಿಂಗಳು.
ದಕ್ಷಿಣಕನ್ನಡ, ಉಡುಪಿ ಹಾಗೂ ಕಾಸರಗೋಡು ಜಿಲ್ಲೆಗಳನ್ನು ಒಳಗೊಂಡ ವ್ಯಾಪ್ತಿಯ ತುಳುನಾಡಿನಲ್ಲಿ ಜೂನ್ ೨೩ರಿಂದ ಜುಲೈ ೨೪ತನಕದ ತಿಂಗಳು ಆಟಿ. ಕೆಲವೊಂದು ವಿಶಿಷ್ಟಾಚರಣೆಗಳನ್ನು ಹೊರತು ಪಡಿಸಿದರೆ ಈ ತಿಂಗಳಲ್ಲಿ ಮನೋರಂಜನೆಗಳ ಕಾರ್ಯಗಳಿಲ್ಲ. ತುಳುನಾಡಿನ ಗಂಡುಕಲೆ ಎಂದು ಖ್ಯಾತಿ ಪಡೆದಿರುವ ಯಕ್ಷಗಾನಕ್ಕೂ ಆಟಿ ನಿಷಿದ್ಧವಾದ ತಿಂಗಳು. ಹಿಂದೆ ಆಟಿ ಎಂದರೆ ವರುಣನ ಅಬ್ಬರದ ದಿನಗಳು. ಧಾರಾಕಾರವಾಗಿ ಸುರಿಯುವ ಮಳೆಯ ನಡುವೆ ಬದುಕುವ ಸಂಕಷ್ಟದ ದಿನಗಳು. ವಾರಗಟ್ಟಲೆ ಸೂರ್ಯನನ್ನು ಕಾಣಲಾರದ ದಿನಗಳು. ಹಾಗಾಗಿ ಪ್ರಕೃತಿಯಲ್ಲಿ ಸಿಗುವ ವಿವಿಧ ಬಗೆಯ ಸೊಪ್ಪುಗಳೇ ಆಗಿನ ಆಹಾರ. ಆದರೆ ಈಗ ಕಾಲ ಬದಲಾಗಿದೆ. ಈಗ ಅಂತಹ ಸ್ಥಿತಿ ಇಲ್ಲವಾದರೂ ಗ್ರಾಮೀಣ ಭಾಗದಲ್ಲಿ ಆಟಿ ಆಚರಣೆ ಮರೆಯಾಗಿಲ್ಲ.
ಪತ್ರೊಡೆ ಆಟಿ ಸ್ಪೆಷಲ್..
ಮಳೆಗಾಲದಲ್ಲಿ ಮರಗಳ ಮೇಲೆ ಬೆಳೆಯುವ ಮರಕೆಸುವಿನ ಎಲೆಗಳನ್ನು ಹಾಕಿ ಮಾಡುವ ತಿಂಡಿ ಪತ್ರೊಡೆ. ಇದು ಆಟಿ ತಿಂಗಳ ವಿಶೇಷ ತಿನಿಸು. ಮರಕೆಸು ಸಿಗದಿದ್ದರೆ ಭೂಮಿಯಲ್ಲಿ ಬೆಳೆಯುವ ಕೆಸುವಿನ ಎಲೆಗಳನ್ನು ಹಾಕಿ ಅಕ್ಕಿಯೊಂದಿಗೆ ರುಬ್ಬಿ ಪತ್ರೊಡೆ ತಯಾರು ಮಾಡುತ್ತಾರೆ. ಇದರ ಜತೆಗೆ ತಜಂಕ್ ಎಲೆ, ಬಿದಿರಿನ ಕಣಿಲೆಗಳು ತುಳುವರ ವಿಶೇಷ ಖಾದ್ಯಗಳು. ಆಟಿ ತಿಂಗಳಲ್ಲಿ ಕಣಿಲೆ ತಜಂಕ್ ಸೊಪ್ಪು ಖಾದ್ಯ ಮಾಡದ ಮನೆಗಳು ಇರಲಾರದು. ಪತ್ರೊಡೆ ಮಾಡದ ಮನೆಗಳೂ ಇಲ್ಲವೇ ಇಲ್ಲ. ಬದಲಾದ ದಿನಗಳಲ್ಲಿ ವಿವಧ ಸಂಘಟನೆಗಳು ಸಾಮೂಹಿಕ ಆಟಿ ಆಚರಣೆಗಳನ್ನು ನಡೆಸುತ್ತಿದ್ದು, ಅದರಲ್ಲಿಯೂ ವಿಶೇಷ ಗಮನ ಸೆಳೆಯುವುದು ಈ ಖಾಧ್ಯಗಳು ಮತ್ತು ಪತ್ರೊಡೆ.
ಆಟಿ ಅಮಾವಾಸ್ಯೆ..
ಆಟಿ ತಿಂಗಳಲ್ಲಿ ಆಟಿ ಅಮಾವಾಸ್ಯೆ ತುಳುವರಿಗೆ ವಿಶೇಷ ಆಚರಣೆ. ಗ್ರಾಮೀಣ ಭಾಗದಲ್ಲಿ ಆಟಿ ಅಮವಾಸ್ಯೆಯ ದಿನ ತಮ್ಮ ಜಾಗದ ಗಡಿ ಕಾಯುವ ಗುಳಿಗನಿಗೆ ಆಟಿ ಅಗೇಲು ನೀಡುವ ಕ್ರಮ ಈಗಲೂ ಆಚರಣೆಯಲ್ಲಿದೆ. ಜನಾರೋಗ್ಯಕ್ಕೆ ಪೂರಕ ಎನ್ನುವ ಹಿನ್ನಲೆಯಲ್ಲಿ ಪ್ರತಿ ಮನೆಯಲ್ಲಿಯೂ ಆಟಿ ಕಷಾಯ ಸೇವನೆ ಇಂದಿಗೂ ನಡೆಯುತ್ತದೆ. ಆಟಿ ಅಮಾವಾಸ್ಯೆ ದಿನ ಬೆಳ್ಳಂಬೆಳಿಗ್ಗೆ ಹಾಳೆ ಮರದ ತೊಗಟೆ ತಂದು ಅದನ್ನು ಜಜ್ಜಿ ಅದರ ರಸದೊಂದಿಗೆ ಖಾದ್ಯ ಪದಾರ್ಥಗಳಿಗೆ ಹಾಕುವ ಸಾಮಾನುಗಳನ್ನು ಸೇರಿಸಿ ತಯಾರಿಸುವ ಈ ಕಷಾಯ ಸರ್ವರೋಗ ನಿರೋಧಕ ಎಂಬ ನಂಬಿಕೆ ತುಳುವರದ್ದಾಗಿದೆ. ಹೀಗಾಗಿ ಈ ಎರಡೂ ಆಚರಣೆಗಳು ಸಾಮಾನ್ಯವಾಗಿ ಹಳ್ಳಿಗಳಲ್ಲಿ ನಿರಂತರತೆಯನ್ನು ಕಾಪಾಡಿಕೊಂಡು ಬಂದಿವೆ. ಆಟಿ ಅಮಾವಾಸ್ಯೆಯ ದಿನ ದೇವಳಗಳಲ್ಲಿ ತರ್ಪಣ ಬಿಟ್ಟು ತೀರ್ಥಸ್ನಾನ ಮಾಡುವ ಕ್ರಮವನ್ನೂ ಜನತೆ ಆಚರಿಸುತ್ತಿದ್ದಾರೆ. ಈಗ ದೇವಳಗಳಲ್ಲಿಯೂ ಆಟಿ ಕಷಾಯ ವಿತರಣೆ ನಡೆಸಲಾಗುತ್ತಿದೆ.
ಹಿಂದೆ ಆಟಿ ತಿಂಗಳಲ್ಲಿ ಪ್ರತೀ ಗ್ರಾಮಗಳಲ್ಲಿಯೂ ಆಟಿಕಳೆಂಜ ಎಂಬ ಆಚರಣೆಯೂ ನಡೆಯುತ್ತಿತ್ತು. ಊರಿಗೆ ಬಂದ ಮಾರಿಯನ್ನು ಹೊಡೆದೋಡಿಸುವ ಆಟಿ ಕಳೆಂಜ ಸಾಂಪ್ರದಾಯಿಕ ಆಚರಣೆ ಈಗ ಅತ್ಯಂತ ವಿರಳವಾಗುತ್ತಿದೆ.
ಆಟಿ ತಿಂಗಳಲ್ಲಿ ಧಾರಾಕಾರವಾಗಿ ಸುರಿಯುವ ಮಳೆಗೆ ಮನುಷ್ಯನ ದೇಹದಲ್ಲಿ ಸಹಜವಾಗಿ ಉಷ್ಣಾಂಶ ಇಳಿಕೆಯಾಗಿ ಶೀತಮಯಗೊಳಿಸುತ್ತದೆ. ಈ ಹಿನ್ನಲೆಯಲ್ಲಿ ದೇಹವನ್ನು ಸಮತೋಲನಗೊಳಿಸಲು ಪ್ರಾಕೃತಿಕವಾಗಿ ಸಿಗುವ ಸೊಪ್ಪುಗಳ ಸೇವನೆ ಅಗತ್ಯ ಎಂಬುವುದನ್ನು ಹಿರಿಯರು ಕಂಡುಕೊಂಡಿದ್ದರು. ಗ್ರಾಮೀಣ ಭಾಗದ ಜನತೆ ಆಟಿ ತಿಂಗಳಲ್ಲಿ ತಿಂಗಳಗಟ್ಟಲೆ ಸಮಯ ಕೃಷಿ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುವುದರಿಂದ ದೇಹ ರಕ್ಷಣೆಗೆ ಬೇಕಾದ ಪ್ರಕೃತಿಜನ್ಯ ಆಹಾರಗಳನ್ನು ಸೇವನೆ ಮಾಡುವುದು ಚಿಂತನೆಯಾಗಿತ್ತು. ಈಗ ಅಂತಹ ವ್ಯವಸ್ಥೆಗಳಿಂದ ಗ್ರಾಮೀಣ ಜನತೆಯೂ ದೂರವಾಗಿದ್ದಾರೆ. ಕೃಷಿ ಚಟುವಟಿಕೆಗಳು ಯಾಂತ್ರೀಕೃತವಾಗಿವೆ. ಹಾಗಿದ್ದರೂ ಆಟಿ ಆಚರಣೆಗಳು ಹೆಚ್ಚು ದೂರವಾಗಿಲ್ಲ. ಆಟಿ ಬಳಿಕ ಬರುವ ಸೋಣ ಅಥವಾ ಶ್ರಾವಣ ಮಾಸ ಮತ್ತೆ ಸಂಭ್ರಮಾಚರಣೆ, ಹಬ್ಬಗಳತ್ತ ಜನತೆಯನ್ನು ಒಯ್ಯುತ್ತವೆ.

ಮೇಘಾ ಪಾಲೆತ್ತಾಡಿ