ಸಂಜೆವಾಣಿ ವಾರ್ತೆ
ಚಾಮರಾಜನಗರ, ಜೂ. 27- ಕೊಳ್ಳೇಗಾಲ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಹೊಮ್ಮ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಧ್ಯಾಹ್ನದ ಬಿಸಿ ಊಟ ಮಾಡುವ ವಿಚಾರದಲ್ಲಿ ಅಸ್ಪೃಶ್ಯತೆ ಆಚರಣೆಯಾಗಿದೆ ಎಂಬ ವಿಚಾರ ತನಿಖೆ ನಡೆಯುತ್ತಿದ್ದು, ಗ್ರಾಮದಲ್ಲಿ ಸಾಮರಸ್ಯ ಹಾಳು ಮಾಡುವುದು ಒಳ್ಳೆಯದಲ್ಲ. ಶಿಕ್ಷಣ ಇಲಾಖೆಯ ಅಧಿಕಾರಿಗಳ ನಿರ್ಲಕ್ಷ್ಯ ಪ್ರಮುಖ ಕಾರಣವಾಗಿದೆ ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷ ಹಾಗೂ ಮಾಜಿ ಸಚಿವ ಎನ್. ಮಹೇಶ್ ತಿಳಿಸಿದರು.
ದಲಿತ ಮಹಿಳೆ ಬಿಸಿಯೂಟ ತಯಾರು ಮಾಡಿದ್ದಾಗಿ ಗ್ರಾಮದ ಶಾಲೆಯಲ್ಲಿ ಮಕ್ಕಳು ಟಿಸಿ ಪಡೆದುಕೊಂಡಿದ್ದಾರೆ ಎಂಬ ವಿಚಾರ ಪತ್ರಿಕೆಗಳನ್ನು ವರದಿಯಾದ ಹಿನ್ನೆಲೆಯಲ್ಲಿ ಗ್ರಾಮಕ್ಕೆ ಭೇಟಿ ನೀಡಿ. ಶಾಲೆಯಲ್ಲಿ ಮಾಹಿತಿ ಪಡೆದುಕೊಂಡರು. ಬಳಿಕ ಅಲ್ಲಿನ ಗ್ರಾಮಸ್ಥರೊಂದಿಗೆ ಸಮಾಲೋಚನೆ ಮಾಡಿದ ಅವರು, ಶಿಕ್ಷಣ ಇಲಾಖೆಯ ನಿರ್ಲಕ್ಷ್ಯದಿಂದ ಇಂಥ ಪ್ರಮಾದವಾಗಿದೆ. ಸರಿಯಾಗಿ ಶಿಕ್ಷಕರು ಪಾಠ ಪ್ರವಚನ ಮಾಡಿದ್ದರೆ, ಮಕ್ಕಳು ಟಿಸಿ ತೆಗೆದುಕೊಳ್ಳುತ್ತಿರಲಿಲ್ಲ. ಬಿಸಿಯೂಟದ ವಿಚಾರವಾಗಿ ಆಗಿಂದಾಗ್ಗೆ ಅಧಿಕಾರಿಗಳು ಶಾಲೆಗೆ ಭೇಟಿ ನೀಡಿ, ಪರಿಶೀಲನೆ ಮಾಡಿ ವರದಿ ಮಾಡಿದ್ದರೆ, ಈ ಸಮಸ್ಯೆ ಉಂಟಾಗುತ್ತಿರಲಿಲ್ಲ ಎಂದರು.
ಗ್ರಾಮದ ಎಲ್ಲಾ ಸಮುದಾಯದ ಮುಖಂಡರು ಮತ್ತು ಶಾಲೆಯ ಶಿಕ್ಷಕರ ಸಮ್ಮುಖದಲ್ಲಿ ಚರ್ಚಿಸಿದಾಗ, ಶಾಲೆಯಲ್ಲಿ ಅಂತಹ ಘಟನೆ ನಡೆದಿಲ್ಲ, ಮಕ್ಕಳನ್ನು ಬೇರೆ ಶಾಲೆಗೆ ಸೇರಿಸಿದ್ದು ಶಾಲೆಯ ಇಬ್ಬರು ಶಿಕ್ಷಕರು ಸರಿಯಾಗಿ ಪಾಠ ಮಾಡುತ್ತಿಲ್ಲ ಎಂದು ತಿಳಿಸಿದ್ದಾರೆ. ಈಗ ಇಬ್ಬರು ಶಿಕ್ಷಕರು ವರ್ಗಾವಣೆಗೊಂಡಿರುವುದರಿಂದ, ಪೆÇೀಷಕರು ವಿದ್ಯಾರ್ಥಿಗಳನ್ನು ಮತ್ತೆ ಶಾಲೆಗೆ ಸೇರಿಸಿ ಎಂಬ ಸÀಲಹೆಯನ್ನು ಎಲ್ಲರೂ ಒಪ್ಪಿಕೊಂಡರು.
ಕಳೆದ 26 ವರ್ಷದಿಂದ ಬಿಸಿಯೂಟ ನೌಕರರಾಗಿರುವ ನಂಜಮ್ಮ ಅವರು ಮಕ್ಕಳ ಸಂಖ್ಯೆ ಕಡಿಮೆಯಾಗಿ ಎಲ್ಲಿ ನನ್ನನ್ನು ಕೆಲಸದಿಂದ ತೆಗೆದು ಹಾಕುತ್ತಾರೆ ಎಂಬ ಭಯದಿಂದ ಇಂಥ ಮಾತುಗಳನ್ನಾಡಿರಬಹುದು. ನಿಜವಾಗಿಯೂ ಅಸ್ಪಶ್ಯತೆ ಆಚರಣೆಯಾಗಿದ್ದರೆ, ಪೋಲಿಸರು ಹಾಗೂ ಶಿಕ್ಷಣ ಇಲಾಖೆಯ ಅಧಿಕಾರಿಗಳು ತನಿಖೆ ಮಾಡಿ, ತಪ್ಪಿಸ್ಥರರ ವಿರುದ್ದ ಕ್ರಮ ಕೈಗೊಳ್ಳಲಿ. ಆದರೆ, ಈ ವಿಚಾರವನ್ನೇ ಮುಖ್ಯವಾಗಿಸಿಕೊಂಡು ಸಾಮರಸ್ಯ ಹಾಳು ಮಾಡುವುದು ಸರಿಯಲ್ಲ. ಎಲ್ಲರು ಸೌಹಾರ್ದತೆಯಿಂದ ಗ್ರಾಮದಲ್ಲಿ ಬಾಳ್ವೆ ಮಾಡುತ್ತಿದ್ದಾರೆ. ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಗೂ ಸರ್ಕಾರ ಕೂಡಲೇ ಶಾಲೆಗೆ ಗುಣಮಟ್ಟದ ಭೋಧನೆ ಮಾಡುವ ಶಿಕ್ಷಕರನ್ನು ನೇಮಕ ಮಾಡಿ, ಮೂಲ ಸೌಲಭ್ಯಗಳನ್ನು ಕಲ್ಪಿಸಿ, ಮಕ್ಕಳ ಶಿಕ್ಷಣದ ಬಗ್ಗೆ ಗಮನ ಹರಿಸಲಿ. ಎಸ್ಡಿಎಂಸಿ ಹಾಗೂ ಪೋಷಕರ ಸಭೆಗಳನ್ನು ನಡೆಸಿ, ಕುಂದುಕೊರತೆಗಳನ್ನು ಬಗೆಹರಿಸುವ ಕೆಲಸ ಮಾಡಲಿ ಎಂದು ಎನ್. ಮಹೇಶ್ ಸಲಹೆ ನೀಡಿದರು.
ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಮೂಡ್ನಾಕೂಡು ಪ್ರಕಾಶ್, ಹೊನ್ನೂರು ಮಹದೇವಸ್ವಾಮಿ, ವೇಣುಗೋಪಾಲ್, ರಾಮುಸಮುದ್ರ ಶಿವಣ್ಣ, ಮುಖಂಡರಾದ ಲೋಕೇಶ್ ಹಾಗೂ ಗ್ರಾಮದ ಮುಖಂಡರು, ಮುಖ್ಯಶಿಕ್ಷಕರು, ಪೋಷಕರು ಇದ್ದರು.