ಹೂಗ್ಯಂ ವನ್ಯಜೀವಿ ವಲಯದ ಮೀಣ್ಯಂ ಶಾಖೆಯಲ್ಲಿ 5 ಹುಲಿಗಳ ಸಾವು

ಸಂಜೆವಾಣಿ ವಾರ್ತೆ
ಹನೂರು.ಜೂ.27:-
ಮಲೆ ಮಹದೇಶ್ವರ ವನ್ಯಧಾಮದ ಹೂಗ್ಯಂ ವನ್ಯಜೀವಿ ವಲಯದ ಮೀಣ್ಯಂ ಶಾಖೆಯ ಮಹದೇಶ್ವರ ದೇವಸ್ಥಾನ ಅರಣ್ಯ ಪ್ರದೇಶದಲ್ಲಿ ಹೆಣ್ಣು ಹುಲಿ ಹಾಗೂ ಅದರ ಜೊತೆ ನಾಲ್ಕು ಗಂಡು ಹುಲಿಗಳು ಅನುಮಾನಾಸ್ಪದ ರೀತಿಯಲ್ಲಿ ಸಾವನ್ನಪ್ಪಿರುವ ದುರ್ಘಟನೆ ನಡೆದಿದೆ.


ತಾಲೂಕಿನ ಹೂಗ್ಯಂ ವನ್ಯಜೀವಿ ವಲಯ ಅರಣ್ಯ ಪ್ರದೇಶದಲ್ಲಿ ಸತ್ತು ಬಿದ್ದಿರುವ ಹಸುವಿನ ಕಳಬರಕ್ಕೆ ಯಾರೋ ಕಿಡಿಗೇಡಿಗಳು ವಿಷ ಹಾಕಿದ್ದಾರೆ. ಇದನ್ನು ತಿಂದಂತಹ ಹೆಣ್ಣು ಹುಲಿ ಸೇರಿದಂತೆ ನಾಲ್ಕು ಗಂಡು ಹುಲಿಗಳು ಸಾವನ್ನಪ್ಪಿವೆ. ಮೋಲ್ನೋಟಕ್ಕೆ ಈ ಘಟನೆ ಕಿಡಿಗೇಡಿ ಜನರ ದುಷ್ಕೃತ್ಯದಿಂದ ನಡೆದಿರುವ ಶಂಕೆ ವ್ಯಕ್ತವಾಗುತ್ತಿದೆ. ಅರಣ್ಯ ಇಲಾಖೆ ಸಿಬ್ಬಂದಿಗಳು ಗಸ್ತು ತಿರುಗುತ್ತಿದ್ದ ವೇಳೆ ಹುಲಿಗಳು ಸಾವನ್ನಪ್ಪಿ ಬಿದ್ದಿರುವುದು ಕಂಡು ಬಂದಿದೆ. ಹುಲಿ ಮೃತ ದೇಹಗಳು ಬಿದ್ದಿರುವುದನ್ನು ಕಂಡು ತಬ್ಬಿಬ್ಬಾದ ಸಿಬ್ಬಂದಿಗಳು ತಕ್ಷಣ ಮೇಲಾಧಿಕಾರಿಗಳ ಗಮನಕ್ಕೆ ತಿಳಿಸಿದ್ದಾರೆ.


ಘಟನಾ ಸ್ಥಳಕ್ಕೆ ಮಲೈ ಮಹದೇಶ್ವರ ವನ್ಯಜೀವಿ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಚಕ್ರಪಾಣೆ, ಹನೂರು ಉಪ ವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಗಜಾನನ ಹೆಗಡೆ, ಹೂಗ್ಯಂ ವನ್ಯಜೀವಿ ವಲಯದ ವಲಯ ಅರಣ್ಯಾಧಿಕಾರಿ ಮಾದೇಶ ಅವರು ಭೇಟಿ ಮಾಹಿತಿ ಪಡೆದು ಪರಿಶೀಲನೆ ನಡೆಸಿದ್ದಾರೆ.


ಮುಖ್ಯ ಪಶುವೈಧ್ಯಾಧಿಕಾರಿ ಡಾ. ವಾಸೀಂ ಮಿರ್ಜಾ ಹಾಗೂ ಡಾ. ಶಿವರಾಜು.ಎಸ್ ರವರು ಮೃತ ಹುಲಿಗಳ ಮಾರಣೋತ್ತರ ಪರೀಕ್ಷೆ ನಡೆಸಿದ್ದಾರೆ. ಮೃತ ಹುಲಿಗಳಲ್ಲಿ 01 ಹೆಣ್ಣು ಹುಲಿ ಮೇಲ್ನೋಟಕ್ಕೆ ಕಂಡುಬಂದಿರುತ್ತದೆ, ಹುಲಿಗಳ ಸಾವಿಗೆ , 4 ಗಂಡು ಹುಲಿಗಳು ಸಾವು ಸಂಶಯಾಸ್ಪದವಾಗಿದ್ದು ಮರಣೋತ್ತರ ಪರೀಕ್ಷೆಯ ನಂತರ ಖಚಿತ ಮಾಹಿತಿ ತಿಳಿಯಲಿದೆ.