ಬ್ರಹ್ಮನಗರದಲ್ಲಿ ೨೦ ಮಕ್ಕಳು ಶಾಲೆಗೆ ಗೈರು…! ಎಸಿ ಅಧ್ಯಕ್ಷತೆಯ ಸಭೆಯಲ್ಲಿ ಬಹಿರಂಗ
ಪುತ್ತೂರು; ನಗರಸಭಾ ವ್ಯಾಪ್ತಿಯ ಬ್ರಹ್ಮನಗರ ಪ್ರದೇಶದಲ್ಲಿ ೧೫ರಿಂದ ೨೦ ಮಕ್ಕಳು ಶಾಲೆಗೆ ಗೈರುಹಾಜರಾಗುತ್ತಿರುವ ಗಂಭೀರ ವಿಚಾರವೊಂದು ಸಹಾಯಕ ಆಯುಕ್ತರ ಅಧ್ಯಕ್ಷತೆಯಲ್ಲಿ ಉಪವಿಭಾಗ ಮಟ್ಟದ ಸಫಾಯಿ ಕರ್ಮಚಾರಿಗಳ ಪುನರ್ವಸತಿ ಸಮಿತಿ ಸಭೆಯಲ್ಲಿ ಬಹಿರಂಗಗೊಂಡಿದೆ.
ಬುಧವಾರ ನಡೆದ ಈ ಸಭೆಯಲ್ಲಿ ಈ ಮಾಹಿತಿಯನ್ನು ಡಿವೈಎಸ್ಪಿ ನಾಗೇಗೌಡ ಅವರು ಸಭೆಗೆ ಮಾಹಿತಿ ನೀಡಿದರು.
ಈ ಬಗ್ಗೆ ಸಹಾಯಕ ಆಯುಕ್ತರಾದ ಸ್ಟೆಲ್ಲಾ ವರ್ಗೀಸ್ ಅವರು ಮಾತನಾಡಿ, ತಕ್ಷಣ ಸಮಾಜ ಕಲ್ಯಾಣ ಇಲಾಖೆ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿ ಇಲಾಖೆ ಸ್ಥಳಕ್ಕೆ ಭೇಟಿ ನೀಡಿ ಮಕ್ಕಳು ಶಾಲೆಗೆ ಗೈರು ಹಾಜರಾಗುವ ಸಮಸ್ಯೆಯನ್ನು ಪರಿಹರಿಸಬೇಕು. ಈರೀತಿಯಲ್ಲಿ ಒಂದೇ ಪ್ರದೇಶದಲ್ಲಿ ಸಾಮೂಹಿಕವಾಗಿ ಮಕ್ಕಳು ಗೈರು ಹಾಜರಾಗುವುದಕ್ಕೆ ಕಾರಣ ಪತ್ತೆ ಮಾಡಬೇಕು. ಈ ಮಕ್ಕಳು ವಿದ್ಯಾಭ್ಯಾಸದಿಂದ ವಂಚಿತರಾಗದಂತೆ ನೋಡಿಕೊಳ್ಳಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಪೌರಕಾರ್ಮಿಕರಿಗೆ ಉತ್ತಮ ಗುಣಮಟ್ಟದ ಆಹಾರವನ್ನು ಹೋಟೇಲ್ಗಳಿಂದ ಪೂರೈಕೆ ಮಾಡುವುದು ಬೇಡ. ಸುತ್ತೋಲೆ ಪ್ರಕಾರ ಸ್ವಸಹಾಯಸಂಘಗಳಿಗೆ ಊಟ ತಯಾರಿಸುವ ಜವಾಬ್ದಾರಿ ನೀಡಬೇಕು ಎಂಬ ಸೂಚನೆಯನ್ನು ತಕ್ಷಣದಿಂದಲೇ ಪಾಲಿಸಬೇಕು. ಸ್ಥಳೀಯವಾಗಿ ಸ್ತ್ರೀಶಕ್ತಿ ಅಥವಾ ಸ್ವಸಹಾಯ ಗುಂಪುಗಳನ್ನು ಇದಕ್ಕೆ ಬಳಿಸಿಕೊಳ್ಳಬೇಕು. ಇದು ಮಹಿಳೆಯರಿಗೆ ಉದ್ಯೋಗದ ಅವಕಾಶವನ್ನು ನೀಡುತ್ತದೆ. ಇದನ್ನು ಕಡ್ಡಾಯವಾಗಿ ಪಾಲಿಸುವಂತೆ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಸ್ವಚ್ಛತಾ ಸಿಬಂದಿಗಳ ಆರೋಗ್ಯ ತಪಾಸಣೆಯನ್ನು ಸರ್ಕಾರಿ ಆಸ್ಪತ್ರೆಗಳಲ್ಲಿ ನಡೆಸುವ ಮೂಲಕ ಓರ್ವ ವ್ಯಕ್ತಿಗೆ ಆರೋಗ್ಯ ತಪಾಸಣೆಗೆ ವೆಚ್ಚಮಾಡುವ ರೂ.೪೫೦ ರಷ್ಟು ಹಣವನ್ನು ಹೆಚ್ಚಿನ ಆರೋಗ್ಯ ಸಮಸ್ಯೆಗಳಿರುವ ವ್ಯಕ್ತಿಗಳ ಆರೋಗ್ಯ ಚಿಕಿತ್ಸೆಗೆ ಬಳಸುವಂತಾಗಬೇಕು. ಸ್ಥಳೀಯಾಡಳಿತದಲ್ಲಿ ಈ ಫಂಡ್ ಈ ರೀತಿಯಲ್ಲಿ ಉಪಯೋಗವಾಗುವಂತೆ ಮಾಡುವ ಚಿಂತನೆ ನಡೆಸಬೇಕು ಎಂದು ಅವರು ಸೂಚಿಸಿದರು.
ಪಾಲನಾವರದಿ ಹೇಗಿರಬೇಕು..
ಮಾಡಲಾಗುವುದು.. ತೀರ್ಮಾನ ಕೈಗೊಳ್ಳಲಾಗಿದೆ ಎಂಬ ಪಾಲನಾವರದಿ ನನಗೆ ಬೇಕಾಗಿಲ್ಲ. ಸೂಚನೆಯನ್ನು ಸ್ಪಷ್ಟವಾಗಿ ನೋಡಿಕೊಂಡು ಪ್ರತಿಯೊಂದು ದಾಖಲೆ ಚಿತ್ರ ಸಮೇತ ನೀಡಬೇಕು. ಪೌರಕಾರ್ಮಿಕರಿಗೆ ನೀಡಲಾಗುವ ಆಹಾರದ ಗುಣಮಟ್ಟ ಜತೆಗೆ ಪ್ರತೀ ದಿನ ಯಾವೆಲ್ಲಾ ಆಹಾರವನ್ನು ನೀಡಲಾಗುತ್ತಿದೆ ಎಂಬ ಮಾಹಿತಿ ನೀಡಬೇಕು. ಮುಂದಿನ ಸಭೆಗೆ ಪೌರಕಾರ್ಮಿಕ ಸಂಘಟನೆಗಳ ಹಾಗೂ ಸ್ವಸಹಾಯ ಸಂಘಗಳ ಪ್ರತಿನಿಧಿಗಳನ್ನು ಕರೆಸುವಂತೆ ಸೂಚಿಸಿದರು. ಸ್ವಚ್ಛತಾ ಸಿಬಂದಿಗಳಿಗೆ ನೀಡಲಾಗುವ ಸುರಕ್ಷಾ ಉಪಕರಣಗಳು, ರೈನ್ ಕೋಟ್ ಗುಣಮಟ್ಟದ್ದಾಗಿರಬೇಕು. ವಿಶ್ರಾಂತಿ ಕೊಠಡಿಯಲ್ಲಿ ಮೂಲಭೂತ ಸೌಕರ್ಯಗಳಿರಬೇಕು. ಪುತ್ತೂರಿನಲ್ಲಿ ಕೆಲಸ ಮಾಡುವ ಪೌರಕಾರ್ಮಿಕರು ಬನ್ನೂರಿನ ಡಂಪಿಂಗ್ ಯಾರ್ಡಿಗೆ ಹೋಗಿ ವಿಶ್ರಾಂತಿ ಪಡೆಯುವಂತೆ ಇರಬಾರದು. ೪ ಕಿಮೀ ದೂರ ಹೋಗಿ ವಿಶ್ರಾಂತಿ ಕೊಠಡಿ ಬಳಿಸಿಕೊಳ್ಳುವುದು ಸಾಧುವಾದ ವಿಚಾರವೇ ಎಂದವರು ಖಾರವಾಗಿಯೇ ಪ್ರಶ್ನಿಸಿದರು.
ಸಭೆಯಲ್ಲಿ ಪುತ್ತೂರು ತಹಶೀಲ್ದಾರ್ ನಾಗರಾಜ್, ತಾಪಂ ಕಾರ್ಯನಿರ್ವಹಣಾಧಿಕಾರಿಗಳಾದ ಸುಳ್ಯದ ಭವಾನಿಶಂಕರ್, ಪುತ್ತೂರಿನ ನವೀನ್ ಭಂಡಾರಿ ಎಚ್, ಸುಳ್ಯದ ರಾಜಣ್ಣ, ವೃತ್ತ ನಿರೀಕ್ಷಕರಾದ ಪುತ್ತೂರಿನ ಜಾನ್ಸನ್ ಡಿಸೋಜ, ಬೆಳ್ತಂಗಡಿಯ ನಾಗೇಶ್ ಕದ್ರಿ, ಸುಳ್ಯ ಸಮಾಜಕಲ್ಯಾಣ ಇಲಾಖಾಧಿಕಾರಿ ಕೃಷ್ಣ, ಪುತ್ತೂರು ಕಸಾಪ ಅಧ್ಯಕ್ಷ ಉಮೇಶ್ ನಾಯಕ್ ಮತ್ತಿತರರು ಭಾಗವಹಿಸಿದ್ದರು.