Home ಜಿಲ್ಲೆ ಮಂಗಳೂರು ತುಳು ಅಧಿಕೃತ ಭಾಷೆ : ಆಂಧ್ರಪ್ರದೇಶ ಅಧ್ಯಯನ ವರದಿ ಸರಕಾರಕ್ಕೆ ಸಲ್ಲಿಕೆ

ತುಳು ಅಧಿಕೃತ ಭಾಷೆ : ಆಂಧ್ರಪ್ರದೇಶ ಅಧ್ಯಯನ ವರದಿ ಸರಕಾರಕ್ಕೆ ಸಲ್ಲಿಕೆ

ಮಂಗಳೂರು, ಮಾ.೪: ತುಳು ಭಾಷೆಯನ್ನು ರಾಜ್ಯದ ಎರಡನೇ ಅಧಿಕೃತ ಭಾಷೆಯಾಗಿ ಘೋಷಿಸುವ ಪ್ರಸ್ತಾಪದ ಹಿನ್ನೆಲೆಯಲ್ಲಿ ಆಂಧ್ರಪ್ರದೇಶದಲ್ಲಿ ಹೆಚ್ಚುವರಿ ಅಧಿಕೃತ ಭಾಷೆಯನ್ನು ಘೋಷಿಸುವ ಸಂದರ್ಭದಲ್ಲಿ ಅನುಸರಿಸಿರುವ ಮಾನದಂಡಗಳ ಬಗ್ಗೆ ಅಧ್ಯಯನ ನಡೆಸಲು ಸರಕಾರ ನೇಮಿಸಿರುವ ಸಮಿತಿಯು ತನ್ನ ವರದಿಯನ್ನು ಸರಕಾರಕ್ಕೆ ಸಲ್ಲಿಸಿದೆ.
ಕನ್ನಡ ಮತ್ತು ಸಂಸ್ಕ್ರತಿ ಇಲಾಖೆಯ ಅಂದಿನ ನಿರ್ದೇಶಕಿ ಕೆ.ಎ.. ಗಾಯತ್ರಿ ಅಧ್ಯಕ್ಷತೆಯಲ್ಲಿ ಕರ್ನಾಟಕ ತುಳು ಸಾಹಿತ್ಯ ಅಕಾಡಮಿಯ ಅಧ್ಯಕ್ಷ ತಾರಾನಾಥ ಗಟ್ಟಿ ಕಾಪಿಕಾಡ್ ಉಪಸ್ಥಿತಿಯಲ್ಲಿ ೬ ಮಂದಿ ಸದಸ್ಯರ ಅಧ್ಯಯನ ಸಮಿತಿಯನ್ನು ಸರಕಾರ ನೇಮಿಸಿತ್ತು.
ಈ ಸಮಿತಿಯು ಜ.೧೯ ಹಾಗೂ ೨೦ರಂದು ಆಂಧ್ರಪ್ರದೇಶ ರಾಜ್ಯದ ಸಚಿವಾಲಯ, ವಿವಿಧ ಇಲಾಖೆ, ಕಚೇರಿಗಳಿಗೆ ಭೇಟಿ ನೀಡಿ ಆಂದ್ರಪ್ರದೇಶದಲ್ಲಿ ಉರ್ದು ಭಾಷೆಯನ್ನು ಎರಡನೇ ಅಧಿಕೃತ ಭಾಷೆಯಾಗಿ ಘೋಘಿಸುವ ಸಂದರ್ಭದಲ್ಲಿ ಕೈಗೊಂಡ ಮಾನದಂಡಗಳು ಹಾಗೂ ವಿಧಿವಿಧಾನಗಳ ಬಗ್ಗೆ ಅಧ್ಯಯನ ನಡೆಸಿ ವರದಿ ಸಿಧ್ದಪಡಿಸಿತ್ತು.
ಸಮಿತಿಯು ವರದಿಯನ್ನು ವಿಕಾಸ ಸೌಧದಲ್ಲಿ ಕನ್ನಡ ಮತ್ತು ಸಂಸ್ಕ್ರತಿ ಇಲಾಖೆಯ ಕಾರ್ಯದರ್ಶಿ ಜೆ.ಮಂಜುನಾಥ್‌ಗೆ ಅಧ್ಯಯನ ಸಮಿತಿ ಸದಸ್ಯರು ಸಲ್ಲಿಸಿದರು. ತುಳುಭಾಷೆಯ ಹಿನ್ನೆಲೆ ಹಾಗೂ ಚರಿತ್ರೆಯ ಬಗೆಗಿನ ಪ್ರಸ್ತಾವನೆಯನ್ನು ಕೂಡ ವರದಿ ಜೊತೆಗೆ ಸಲ್ಲಿಸಲಾಯಿತು.
ಈ ಸಂದರ್ಭ ಕನ್ನಡ ಮತ್ತು ಸಂಸ್ಕ್ರತಿ ಇಲಾಖೆಯ ನಿರ್ದೇಶಕ ಡಾ. ಬಿ.ಎಸ್. ಮಂಜುನಾಥ ಸ್ವಾಮಿ, ತುಳು ಅಕಾಡಮಿ ಅಧ್ಯಕ್ಷ ತಾರಾನಾಥ ಗಟ್ಟಿ ಕಾಪಿಕಾಡ್, ಅಧ್ಯಯನ ಸಮಿತಿ ಸದಸ್ಯರಾದ ಸುಧಾಕರ ಶೆಟ್ಟಿ , ಕಾನೂನು ಇಲಾಖೆಯ ಉಪಕಾರ್ಯದರ್ಶಿ ವನಿತಾ, ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಯ ಉಪಕಾರ್ಯದರ್ಶಿ ಮೂರ್ತಿ ಕೆ.ಎನ್., ಕನ್ನಡ ಮತ್ತು ಸಂಸ್ಕ್ರತಿ ಇಲಾಖೆಯ ಅಧೀನ ಕಾರ್ಯದರ್ಶಿ ಕೆ.ಎಂ. ಶುಭಶ್ರೀ, ಕರ್ನಾಟಕ ಸಾಹಿತ್ಯ ಅಕಾಡಮಿಯ ರಿಜಿಸ್ಟ್ರಾರ್ ಕರಿಯಪ್ಪಎನ್. ಉಪಸ್ಥಿತರಿದ್ದರು.