
ಸಂಜೆವಾಣಿ ವಾರ್ತೆ
ಬಳ್ಳಾರಿ, ಮಾ.18: ಭಾರತೀಯ ಜನತಾ ಪಾರ್ಟಿಯ ಬಳ್ಳಾರಿ ಜಿಲ್ಲಾ ಕೌಲ್ ಬಜಾರ್ ಮಂಡಲದಲ್ಲಿ ನಡೆದ ಹೊಸ ನೇಮಕಾತಿಗಳು ಪಕ್ಷದ ಸಂಘಟನೆಗೆ ಹೊಸ ಚೈತನ್ಯ ತುಂಬುವಂತಾಗಿದ್ದು, ಖಜಾಂಚಿಯಾಗಿ ಜಿ. ಅಭಿಲಾಶ್ ನಾಯ್ಡು ಹಾಗೂ ಪ್ರಧಾನ ಕಾರ್ಯದರ್ಶಿಯಾಗಿ ಜಿ. ಅವಿನಾಶ್ ನಾಯ್ಡು ಅವರು ನೇಮಕವಾಗಿದ್ದಾರೆ.
ಮಂಡಲ ಅಧ್ಯಕ್ಷ ಎ. ನಾಗರಾಜ ರೆಡ್ಡಿ ಅವರು ಹೊರಡಿಸಿದ ಆದೇಶದಂತೆ ಮಂಡಲ ಮತ್ತು 7 ಮೋರ್ಚಾಗಳಿಗೆ ವಿವಿಧ ಹುದ್ದೆಗಳಿಗೆ ಕಾರ್ಯಕರ್ತರನ್ನು ನೇಮಕ ಮಾಡಲಾಗಿದ್ದು, ಈ ನೇಮಕಾತಿಗಳ ಮೂಲಕ ತಳಮಟ್ಟದಿಂದ ಸಂಘಟನೆಯನ್ನು ಬಲಪಡಿಸುವ ಮಹತ್ವದ ಹೆಜ್ಜೆ ಇಡಲಾಗಿದೆ.
ಪಕ್ಷದ ಚಟುವಟಿಕೆಗಳನ್ನು ಇನ್ನಷ್ಟು ವಿಸ್ತರಿಸುವ ಉದ್ದೇಶದಿಂದ ಕೈಗೊಂಡ ಈ ಕ್ರಮದಲ್ಲಿ ಮಹಿಳಾ ಮೋರ್ಚಾ ಅಧ್ಯಕ್ಷೆಯಾಗಿ ಲತಾ, ಎಸ್.ಸಿ ಮೋರ್ಚಾ ಅಧ್ಯಕ್ಷರಾಗಿ ಸುಂಕಣ್ಣ, ಎಸ್.ಟಿ ಮೋರ್ಚಾ ಅಧ್ಯಕ್ಷರಾಗಿ ರಾಜಶೇಖರ್, ಒಬಿಸಿ ಮೋರ್ಚಾ ಅಧ್ಯಕ್ಷರಾಗಿ ಆರ್. ಶೇಖಣ್ಣ, ರೈತ ಮೋರ್ಚಾ ಅಧ್ಯಕ್ಷರಾಗಿ ವೆಂಕಟೇಶ್, ಯುವ ಮೋರ್ಚಾ ಅಧ್ಯಕ್ಷರಾಗಿ ಬಟ್ಟಿ ಗಾದಿಲಿಂಗ ಹಾಗೂ ಅಲ್ಪಸಂಖ್ಯಾತ ಮೋರ್ಚಾ ಅಧ್ಯಕ್ಷರಾಗಿ ಮೊಹಮ್ಮದ್ ಗೌಸ್ ಅವರನ್ನು ನೇಮಕ ಮಾಡಲಾಗಿದೆ.
ಇದರ ಜೊತೆಗೆ ಮಂಡಲದ ಪ್ರಮುಖ ಹುದ್ದೆಗಳಿಗೂ ನೇಮಕಾತಿ ನಡೆಯಿದ್ದು, ಎ. ನಾಗರಾಜ ರೆಡ್ಡಿ ಅಧ್ಯಕ್ಷರಾಗಿ ಮುಂದುವರಿದಿದ್ದಾರೆ. ಉಪಾಧ್ಯಕ್ಷರಾಗಿ ಕೊಂಡಿ ಮಲ್ಲಿಕಾರ್ಜುನ, ವೆಂಕಟೇಶ್ ಗುರುರಾಜ್, ರಾಮಚಂದ್ರ, ಹನುಮಂತ ರಾವ್ ಹಾಗೂ ಮೊಹಮ್ಮದ್ ಖದಿರ್ ಅವರನ್ನು ನೇಮಕ ಮಾಡಲಾಗಿದೆ. ಎಂ.ಪಿ. ರಾಜೇಶ್ ಹಾಗೂ ಜಿ. ಅವಿನಾಶ್ ನಾಯ್ಡು ಪ್ರಧಾನ ಕಾರ್ಯದರ್ಶಿಗಳಾಗಿ, ಮೂರ್ತಿ, ವಿ. ಶ್ರೀಧರ್, ಯೇಸು, ನೀಲಕಂಠ ಆಚಾರ್ಯ, ಮಲೇಶ್ ಹಾಗೂ ಅನ್ನಕ್ಲರ ಕಾರ್ಯದರ್ಶಿಗಳಾಗಿ ಜವಾಬ್ದಾರಿ ವಹಿಸಿಕೊಂಡಿದ್ದಾರೆ.
ಖಜಾಂಚಿಯಾಗಿ ಆಯ್ಕೆಯಾದ ಜಿ. ಅಭಿಲಾಶ್ ನಾಯ್ಡು ಅವರು ಮಾಧ್ಯಮಗಳೊಂದಿಗೆ ಮಾತನಾಡಿ,
“ಪಕ್ಷವು ನನ್ನ ಮೇಲೆ ಇಟ್ಟಿರುವ ನಂಬಿಕೆಗೆ ನಾನು ಕೃತಜ್ಞನಾಗಿದ್ದೇನೆ. ಮಂಡಲ ಮಟ್ಟದಲ್ಲಿ ಹಣಕಾಸಿನ ವ್ಯವಸ್ಥೆಯನ್ನು ಪಾರದರ್ಶಕವಾಗಿ ನಿರ್ವಹಿಸಿ, ಸಂಘಟನೆಯ ಬಲವರ್ಧನೆಗೆ ಪ್ರಾಮಾಣಿಕವಾಗಿ ಕೆಲಸ ಮಾಡುತ್ತೇನೆ. ಕಾರ್ಯಕರ್ತರೊಂದಿಗೆ ಸಮನ್ವಯ ಸಾಧಿಸಿ, ಪಕ್ಷದ ಚಟುವಟಿಕೆಗಳಿಗೆ ಶಕ್ತಿ ತುಂಬುವುದು ನನ್ನ ಮುಖ್ಯ ಗುರಿ” ಎಂದು ಹೇಳಿದರು.
ಪ್ರಧಾನ ಕಾರ್ಯದರ್ಶಿಯಾಗಿ ನೇಮಕಗೊಂಡ ಜಿ. ಅವಿನಾಶ್ ನಾಯ್ಡು ಅವರು ಮಾತನಾಡಿ,
“ಬಿಜೆಪಿ ಸಂಘಟನೆಗೆ ತಳಮಟ್ಟದಿಂದ ಬಲ ತುಂಬುವ ನಿಟ್ಟಿನಲ್ಲಿ ನನ್ನ ಸಂಪೂರ್ಣ ಶ್ರಮವನ್ನು ಹರಿಸುತ್ತೇನೆ. ಗ್ರಾಮಾಂತರ ಪ್ರದೇಶಗಳಲ್ಲಿ ಪಕ್ಷದ ತತ್ವಸಿದ್ಧಾಂತಗಳನ್ನು ತಲುಪಿಸುವ ಜೊತೆಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಯೋಜನೆಗಳನ್ನು ಜನರಿಗೆ ಪರಿಚಯಿಸುವ ಕೆಲಸಕ್ಕೆ ಆದ್ಯತೆ ನೀಡಲಾಗುತ್ತದೆ. ಯುವಕರು ಮತ್ತು ಹೊಸ ಕಾರ್ಯಕರ್ತರನ್ನು ಸಂಘಟನೆಯಲ್ಲಿ ಸಕ್ರಿಯಗೊಳಿಸುವುದು ನಮ್ಮ ಪ್ರಮುಖ ಗುರಿಯಾಗಿರುತ್ತದೆ” ಎಂದು ತಿಳಿಸಿದರು.
ಪಕ್ಷದ ಸಂಘಟನೆ ಬಲಪಡಿಸುವಲ್ಲಿ ಕಾರ್ಯಕರ್ತರ ಪಾತ್ರ ಅತ್ಯಂತ ಪ್ರಮುಖವಾಗಿದ್ದು, ಹೊಸದಾಗಿ ನೇಮಕಗೊಂಡ ಎಲ್ಲ ಪದಾಧಿಕಾರಿಗಳು ತಮ್ಮ ತಮ್ಮ ವ್ಯಾಪ್ತಿಯಲ್ಲಿ ಜನಸಂಪರ್ಕ ಚಟುವಟಿಕೆಗಳನ್ನು ಹೆಚ್ಚಿಸಿ, ಸಂಘಟನೆಯನ್ನು ಇನ್ನಷ್ಟು ಬಲಪಡಿಸಲು ಮುಂದಾಗಬೇಕು ಎಂದು ಮಂಡಲ ಅಧ್ಯಕ್ಷ ಎ. ನಾಗರಾಜ ರೆಡ್ಡಿ ಸೂಚಿಸಿದ್ದಾರೆ.




























