
ಪುತ್ತೂರು; ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳಲ್ಲಿ ಅರ್ಹತೆ ಇದ್ದ ಯಾವುದೇ ಫಲಾನುಭವಿಗಳು ವಂಚಿತರಾಗಬಾರದು. ಈ ರೀತಿಯಲ್ಲಿ ಗ್ಯಾರಂಟಿ ಯೋಜನೆಗೆ ಸಂಬಂಧಿಸಿದ ಇಲಾಖೆಗಳು ಕೆಲಸ ಮಾಡಬೇಕು ಎಂದು ಪುತ್ತೂರು ಗ್ಯಾರಂಟಿ ಯೋಜನೆ ಅನುಷ್ಟಾನ ಸಮಿತಿ ಅಧ್ಯಕ್ಷ ಉಮಾನಾಥ ಶೆಟ್ಟಿ ಪೆರ್ನೆ ಹೇಳಿದರು.
ಪುತ್ತೂರು ತಾಪಂ ತರಬೇತಿ ಸಭಾಂಗಣದಲ್ಲಿ ನಡೆದ ಗ್ಯಾರಂಟಿ ಯೋಜನೆಯ ಪ್ರಗತಿಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಗೃಹಲಕ್ಷ್ಮಿ ಯೋಜನೆಯಲ್ಲಿ ಫಲಾನುಭವಿಯಾಗಿರುವ ವ್ಯಕ್ತಿ ಮೃತಪಟ್ಟರೆ ಆ ಹಣವನ್ನು ಅವರು ದಾಖಲಿಸಿರುವ ವಾರೀಸುದಾರರು(ನಾಮಿನ್) ಪಡೆದುಕೊಳ್ಳಲು ಅವಕಾಶ ಇದೆ. ಆದರೆ ಮೃತಪಟ್ಟ ಬಳಿಕ ಬಂದ ಹಣ ವಾಪಾಸು ಸರ್ಕಾರಕ್ಕೆ ಸೇರುತ್ತದೆ ಎಂದು ಸಮಸ್ಯೆಯೊಂದಕ್ಕೆ ಸಂಬಂಧಿಸಿ ಅವರು ಮಾಹಿತಿ ನೀಡಿದರು.
ಶಕ್ತಿಯೋಜನೆಗೆ ಸಂಬಂಧಿಸಿ ಕೊಟ್ಯಾಡಿಯಿಂದ ಬರುವ ಕೆಎಸ್ಸಾರ್ಟಿಸಿ ಬಸ್ ಶೇಕಮಲೆಯಲ್ಲಿ ನಿಲುಗಡೆ ಮಾಡುತ್ತಿಲ್ಲ. ಇದರಿಂದ ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತಿದೆ ಎಂದು ಸಮಿತಿ ಸದಸ್ಯ ಅಶೋಕ್ ಪೂಜಾರಿ ಹೇಳಿದರು. ಇದಕ್ಕೆ ಉತ್ತರಿಸಿದ ಕೆಎಸ್ಸಾರ್ಟಿಸಿ ಅಧಿಕಾರಿ ಸುಬ್ರಹ್ಮಣ್ಯ ಪ್ರಸಾದ್ ಅವರು ಹೊಸ ಚಾಲಕರಿಂದಾಗಿ ಈ ಸಮಸ್ಯೆ ಉಂಟಾಗಿರಬಹುದು. ಈ ಬಗ್ಗೆ ಕ್ರಮಕೈಗೊಳ್ಳುವುದಾಗಿ ಭರವಸೆ ನೀಡಿದರು. ಪುತ್ತೂರು ಚೆಲ್ಯಡ್ಕಕ್ಕೆ ಹೋಗುವ ಬಸ್ಗಳು ಈಗ ಸೆಂಟ್ಯಾರ್ ಮಾರ್ಗವಾಗಿ ಹೋಗುತ್ತಿವೆ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು ಯಾವುದೇ ಖಾಸಗಿ ಬಸ್ ಗಳು ಸೆಂಟ್ಯಾರ್ ರಸ್ತೆ ಮಾರ್ಗವಾಗಿ ಕಾನೂನುಪ್ರಕಾರ ಸಂಚರಿಸುವ ಹಾಗಿಲ್ಲ ಎಂದು ತಿಳಿಸಿದರು.
ದಾರಿ ಹಾಗೂ ರಸ್ತೆ ಬದಿಗಳಲ್ಲಿ ಹಾಕಲಾಗಿರುವ ಟಿಸಿಗಳು ಮಳೆಗಾಲದಲ್ಲಿ ಜನರಿಗೆ ಅಪಾಯ ಉಂಟು ಮಾಡುವ ಸಾಧ್ಯತೆ ಇದೆ. ಹಾಗಾಗಿ ಈ ಬಗ್ಗೆ ಮೆಸ್ಕಾಂ ಇಲಾಖೆ ಕ್ರಮ ವಹಿಸಬೇಕು. ಇಂತಹ ಅಪಾಯಕಾರಿ ಟಿಸಿಗಳು ಇರುವಲ್ಲಿ ಬೆಳಕಿನ ವ್ಯವಸ್ಥೆ ಮಾಡಬೇಕು ಎಂದು ಸದಸ್ಯ ಸಂತೋಷ್ ಭಂಡಾರಿ ಹೇಳಿದರು. ಅಂತಹ ಕಡೆಗಳಲ್ಲಿ ಬೆಳಕಿನ ವ್ಯವಸ್ಥೆ ಮಾಡುವುದು ಕಷ್ಟಸಾಧ್ಯ. ಆದರೆ ತೊಂದರೆಗಳಾಗದಂತೆ ಕ್ರಮ ಕೈಗೊಳ್ಳುವ ಭರವಸೆಯನ್ನು ಮೆಸ್ಕಾಂ ಇಲಾಖೆಯ ಕುಂಬ್ರಶಾಖೆಯ ಸಹಾಯಕ ಇಂಜಿನಿಯರ್ ಶಿವಕುಮಾರ್ ನೀಡಿದರು. ಮಾನ್ಸೂನ್ ತಂಡಗಳು ಸಮರ್ಪಕವಾಗಿ ಕಾರ್ಯನಿರ್ವಹಿಸಬೇಕು. ಈಗಿರುವ ೨೨ ಮಾನ್ಸೂನ್ ತಂಡದ ಕಾರ್ಯಕರ್ತರನ್ನು ತಂಡಗಳಾಗಿ ವಿಭಜಿಸಿ ಕೆಲಸ ಮಾಡಿಸಿ. ಮಳೆ ಇಲ್ಲ ಎಂದು ಅವರು ಆರಾಮವಾಗಿರುವುದು ಬೇಡ. ಅವರಿಗೆ ವರ್ಕ್ಚಾಟ್ ಮಾಡಿ. ಗ್ಯಾರಂಟಿ ಅನುಷ್ಠಾನ ಸಮಿತಿಗೂ ಇದನ್ನು ಕೊಡಬೇಕು ಎಂದು ಅಧ್ಯಕ್ಷ ಉಮಾನಾಥ ಶೆಟ್ಟಿ ಪೆರ್ನೆ ಅಧಿಕಾರಿಗೆ ಸೂಚಿಸಿದರು. ಹಿರೆಬಂಡಾಡಿಯ ನೆಕ್ಕಿಲು ಎಂಬಲ್ಲಿ ಹೊಸ ಟಿಸಿ ಬೇಕು ಎಂದು ಸದಸ್ಯ ಸೇಸಪ್ಪ ನೆಕ್ಕಿಲು ತಿಳಿಸಿದರು.
ವೇದಿಕೆಯಲ್ಲಿ ಸಮಿತಿಯ ಸದಸ್ಯ ಕಾರ್ಯದರ್ಶಿ ತಾಪಂ ಕಾರ್ಯನಿರ್ವಹಣಾಧಿಕಾರಿ ನವೀನ್ಕುಮಾರ್ ಭಂಡಾರಿ ಹಾಗೂ ತಾಪಂ ವ್ಯವಸ್ಥಾಪಕ ಜಯಪ್ರಕಾಶ್ ಉಪಸ್ಥಿತರಿದ್ದರು.
ಸಭೆಯಲ್ಲಿ ಮಹಿಳಾ ಮತ್ತು ಮಕ್ಕಳಕಲ್ಯಾಣ ಇಲಾಖೆಯ ಪ್ರಭಾರ ಸಿಡಿಪಿಒ ಪ್ರೀಯಾ ಆಗ್ನೆಸ್ , ಆಹಾರ ಇಲಾಖೆಯ ಶಿರಸ್ತೇದಾರ್ ಸರಸ್ವತಿ ಹಾಗೂ ಗ್ಯಾರಂಟಿ ಅನುಷ್ಠಾನ ಸಮಿತಿ ಸದಸ್ಯರು ಭಾಗವಹಿಸಿದ್ದರು.