ಆ. 19ರೊಳಗಾಗಿ ಒಳ ಮೀಸಲಾತಿ ಜಾರಿ ಮಾಡದಿದ್ದರೆ ಉಗ್ರ ಹೋರಾಟ: ಗೋವಿಂದ ಕಾರಜೋಳ ಎಚ್ಚರಿಕೆ

ವಿಜಯಪುರ, ಆ. 17:ನಾಗಮೋಹನ್ ದಾಸ್ ವರದಿ ಶಿಫಾರಸ್ಸು ಆಧರಿಸಿ ರಾಜ್ಯದಲ್ಲೂ ಒಳ ಮೀಸಲಾತಿ ಜಾರಿ ಮಾಡಬೇಕು ಎಂದು ಚಿತ್ರದುರ್ಗ ಸಂಸದ ಗೋವಿಂದ ಕಾರಜೋಳ ರಾಜ್ಯ ಸರ್ಕಾರವನ್ನು ಒತ್ತಾಯಿಸಿದರು.
ಶನಿವಾರ ನಗರದಲ್ಲಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಒಳ ಮೀಸಲಾತಿ ವಿಷಯದಲ್ಲಿ ರಾಜ್ಯ ಸರ್ಕಾರ ಜಗಳ ಹಚ್ಚುವ ಕೆಲಸದಲ್ಲಿ ತೊಡಗಿದೆ. ಇದು ಸರಿಯಲ್ಲ ಎಂದು ಕಾರಜೋಳ ಹೇಳಿದರು.
ಮೀಸಲಾತಿಯಲ್ಲಿ ಎಸ್ ಸಿ 101 ಹಾಗೂ ಎಸ್ ಟಿ 56 ಜಾತಿಗಳಿವೆ. ಒಳ ಮೀಸಲಾತಿ ವಿಚಾರವಾಗಿ 2004 ರಲ್ಲಿ ಸದಾಶಿವ ಆಯೋಗ ನೇಮಕವಾಗಿತ್ತು. ಆದರೆ ಅದಕ್ಕೆ ಎಸ್.ಎಂ ಕೃಷ್ಣ ಸರ್ಕಾರ ಹಣ ನೀಡಿರಲಿಲ್ಲ. ನಂತರ ಅಧಿಕಾರಕ್ಕೆ ಬಂದ
ಯಡಿಯೂರಪ್ಪ ಸರ್ಕಾರ 13 ಕೋಟಿ ನೀಡಿದ ಬಳಿಕ ಜಾತಿ ಗಣತಿ ಆರಂಭವಾಯಿತು. ನಮ್ಮ ಅವಧಿಯಲ್ಲಿ ಸದಾಶಿವ ಆಯೋಗ ವರದಿ ಜಾರಿ ಮಾಡಲು ಆಗಲಿಲ್ಲ. ನಮಗೆ ಬಹುಮತ ಇಲ್ಲದ ಕಾರಣ ಮೀಸಲಾತಿ ಒಪ್ಪಲು ಆಗಲಿಲ್ಲ. 2013ರಲ್ಲಿ ಕಾಂಗ್ರೆಸ್ ಪಕ್ಷ ಮೀಸಲಾತಿ ನೀಡುವುದಾಗಿ ಹೇಳಿತ್ತು.
ಆದರೆ ಅಧಿಕಾರಕ್ಕೆ ಬಂದ ಎಸ್.ಸಿ. ಸಮುದಾಯದಲ್ಲಿ ಜಗಳ ಹಚ್ಚುವ ಕೆಲಸ ಮಾಡಿದರು. ಬೊಮ್ಮಾಯಿ ಸರ್ಕಾರದಲ್ಲಿ ಮಾಧುಸ್ವಾಮಿ ಆಯೋಗ ರಚನೆ ಮಾಡಲಾಯಿತು. ಕಾಂಗ್ರೆಸ್ ಸರ್ಕಾರ ಜನರನ್ನು ನಮ್ಮ ವಿರುದ್ಧ ಎತ್ತಿ ಕಟ್ಟಿದರು.
ಸುಳ್ಳು ಪ್ರಚಾರ ಮಾಡಿ ಯಡಿಯೂರಪ್ಪ ಮನೆಗೆ ಕಲ್ಲು ಹೊಡೆಸಿದರು. ಕೇಂದ್ರ ಸರ್ಕಾರ ಅಫಿಡವಿಟ್ ಸಲ್ಲಿಸಿದ ಬಳಿಕ ಕೋರ್ಟ್ ಆದೇಶ ನೀಡಿದೆ ಎಂದರು.
ಸುಪ್ರೀಂಕೋರ್ಟ್ ಆದೇಶದ ಬಳಿಕ ತೆಲಂಗಾಣ, ಆಂಧ್ರ ಸೇರಿದಂತೆ ಹಲವು ರಾಜ್ಯಗಳಲ್ಲಿ ಒಳ ಮೀಸಲಾತಿ ಜಾರಿ ಮಾಡಲಾಗಿದೆ. ಕರ್ನಾಟಕದಲ್ಲಿ ನಾಗಮೋಹನ್ ದಾಸ ವರದಿ ಯಾಕೆ ಜಾರಿ ಮಾಡುತ್ತಿಲ್ಲ. ದೇಶದ ಹಲವು ಕಡೆ ಒಳ ಮೀಸಲಾತಿ ಜಾರಿ ಮಾಡಲಾಗಿದೆ.
ಕರ್ನಾಟಕದಲ್ಲಿ ಯಾಕೆ ಜಾರಿ ಮಾಡುತ್ತಿಲ್ಲ ಎಂದು ಕಾರಜೋಳ ಪ್ರಶ್ನಿಸಿದರು.
ನಾಗಮೋಹನ ದಾಸ್ ಆಯೋಗದ ವರದಿಯಲ್ಲಿ ಬೇಕಾದರೆ ತಿದ್ದುಪಡಿ ಮಾಡಿ ಜಾರಿ ಮಾಡಲಿ. ತಿದ್ದುಪಡಿ ಮಾಡಿದರೂ ನಮ್ಮ ಅಭ್ಯಂತರವಿಲ್ಲ ಎಂದರು.
ದಲಿತರು ಹೊಡೆದಾಟಿಕೊಳ್ಳಲಿ ಎಂದು ಕಾಂಗ್ರೆಸ್ ನಾಟಕ ಮಾಡುತ್ತಿದೆ. ತಪ್ಪು ಅಂಕಿ ಸಂಖ್ಯೆಗಳನ್ನು ಬಹಿರಂಗ ಮಾಡಿ ಜಗಳ ಹಚ್ಚುವ ಕೆಲಸ ಸರ್ಕಾರ ಮಾಡುತ್ತಿದೆ ಎಂದು ಟೀಕಿಸಿದರು.
ಆ.19 ರೊಳಗಾಗಿ ಒಳ ಮೀಸಲಾತಿ ಜಾರಿ ಮಾಡದಿದ್ದರೆ ಉಗ್ರ ಹೋರಾಟ ಮಾಡುತ್ತೇವೆ. ಕಾಂಗ್ರೆಸ್ ನಾಯಕರನ್ನು ರಸ್ತೆ ಮೇಲೆ ತಿರುಗಾಡಲು ಬಿಡುವುದಿಲ್ಲ.
ನಾವು ಯಾವುದೇ ಸಮಾಜದ ವಿರುದ್ಧವಲ್ಲ. ನಮ್ಮ ಹಕ್ಕು ನಮಗೆ ಕೊಡಿ.
ನುಡಿದಂತೆ ನಡೆದ ಸರ್ಕಾರ ಅಂತಿರಾ
ಆದರೆ ಒಳ ಮೀಸಲಾತಿ ಯಾಕೆ ಜಾರಿ ಮಾಡುತ್ತಿಲ್ಲ ಎಂದರು.
ಕಾಂಗ್ರೆಸ್ ನಲ್ಲಿ ಸತ್ಯ ಹೇಳುವವರಿಗೆ ಕಾಲವಿಲ್ಲ. ಸತ್ಯ ಹೇಳಿದ್ದಕ್ಕೆ ರಾಜಣ್ಣ ಅವರನ್ನು ಸಚಿವ ಸ್ಥಾನದಿಂದ ವಜಾ ಮಾಡಲಾಗಿದೆ. ರಾಹುಲ್ ಗಾಂಧಿ ಮೆಚ್ಚಿಸಲು ರಾಜಣ್ಣ ಅವರನ್ನು ವಜಾ ಮಾಡಿದ್ದಾರೆ ಎಂದು ಕಾರಜೋಳ ಹೇಳಿದರು.
ರಾಯರೆಡ್ಡಿ, ಬಿ. ಆರ್. ಪಾಟೀಲ್ ಆಳಂದ, ಶಿವಗಂಗ, ರಾಜು ಕಾಗೆ ಸತ್ಯ ಹೇಳಿದ್ದಾರೆ. ಆದರೆ ಅವರನ್ನು ವಜಾ ಮಾಡಿಲ್ಲ. ರಾಜಣ್ಣ ಅವರನ್ನು ಮಾತ್ರ ವಜಾ ಮಾಡಿದ್ದಾರೆ. ರಾಜಣ್ಣ ಅವರನ್ನು ದಲಿತರು ಎಂಬ ಕಾರಣಕ್ಕೆ ವಜಾ ಮಾಡಲಾಗಿದೆ. ಕಾಂಗ್ರೆಸ್ ನವರು
ದಲಿತರ ಬಗ್ಗೆ ಬರೀ ಮೊಸಳೆ ಕಣ್ಣೀರು ಸುರಿಸುತ್ತಾರೆ ಎಂದು ಟೀಕಿಸಿದರು.
ಕಳೆದ 60 ವರ್ಷಗಳಿಂದ ಕಾಂಗ್ರೆಸ್ ದಲಿತರನ್ನು ಒಡೆದು ಆಳುತ್ತಿದೆ ಎಂದು ಕಾರಜೋಳ ಆರೋಪಿಸಿದರು.