
ಸಾಣೇಹಳ್ಳಿ, ಅ.೨೩- ಇಲ್ಲಿನ ಶಿವಕುಮಾರ ಕಲಾಸಂಘ ರಂಗಭೂಮಿಗೆ ಸಲ್ಲಿಸಿದ ಜೀವಮಾನದ ಕೊಡುಗೆಯನ್ನು ಮನ್ನಿಸಿ ಪ್ರತಿವರ್ಷ ಕೊಡಮಾಡುವ ಪ್ರತಿಷ್ಠಿತ ‘ಶ್ರೀ ಶಿವಕುಮಾರ ಪ್ರಶಸ್ತಿ’ಗೆ ಈ ಬಾರಿ ಬೆಂಗಳೂರಿನ ಕನ್ನಡ ರಂಗಭೂಮಿ ಮತ್ತು ಚಲನಚಿತ್ರರಂಗದ ಪ್ರತಿಭಾನ್ವಿತ ಅಭಿನೇತ್ರಿ. ರಂಗಭೂಮಿಯ ಹಿರಿಯ ಕಲಾವಿದೆ ಉಮಾಶ್ರೀ ಅವರನ್ನು ಆಯ್ಕೆ ಮಾಡಿದೆ ಎಂದು ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳವರು ತಿಳಿಸಿದ್ದಾರೆ.
೨೦೦೪ ರಿಂದ ಶಿವಕುಮಾರ ಶಿವಾಚಾರ್ಯ ಸ್ವಾಮಿಗಳವರ ಹೆಸರಿನಲ್ಲಿ ‘ಶ್ರೀ ಶಿವಕುಮಾರ ಪ್ರಶಸ್ತಿ’ಯನ್ನು ನಮ್ಮ ಕಲಾಸಂಘವು ಕೊಡುತ್ತಾ ಬಂದಿದೆ. ರಂಗಭೂಮಿ ಮತ್ತು ರಂಗಚಟುವಟಿಕೆಗಳಲ್ಲಿ ಮಹತ್ವದ ಸಾಧನೆ ಮಾಡಿದ ಸಾಧಕರಿಗೆ ಲಿಂಗಭೇದವಿಲ್ಲದೆ ಈ ಪ್ರಶಸ್ತಿಯನ್ನು ನೀಡುತ್ತಾ ಬರಲಾಗಿದೆ. ಇದುವರೆಗೂ ಪ್ರಸನ್ನ(೨೦೦೪), ಸಿಜಿಕೆ(೨೦೦೫), ಪಿ ಜಿ ಗಂಗಾಧರಸ್ವಾಮಿ(೨೦೦೬), ಅಶೋಕ ಬಾದರದಿನ್ನಿ(೨೦೦೭), ಮಾಲತಿಶ್ರೀ(೨೦೦೮), ೨೦೦೯ರಲ್ಲಿ ಅತಿವೃಷ್ಠಿ ಕಾರಣ ನೀಡಿಲ್ಲ. ಸಿ ಬಸವಲಿಂಗಯ್ಯ(೨೦೧೦), ಬಿ ಜಯಶ್ರೀ(೨೦೧೧), ಡಾ. ಕೆ ಮರುಳಸಿದ್ಧಪ್ಪ(೨೦೧೨), ಚಿದಂಬರರಾವ್ ಜಂಬೆ(೨೦೧೨), ಕೋಟಗಾನಹಳ್ಳಿ ರಾಮಯ್ಯ(೨೦೧೪), ಡಾ. ಸುಭದ್ರಮ್ಮ ಮನ್ಸೂರು (೨೦೧೫), ಲಕ್ಷಿ ಚಂದ್ರಶೇಖರ್ (೨೦೧೬), ಶ್ರೀನಿವಾಸ ಜಿ ಕಪ್ಪಣ್ಣ (೨೦೧೭), ಬಸವರಾಜ ಬೆಂಗೇರಿ(೨೦೧೮), ಟಿ ಎಸ್ ನಾಗಾಭರಣ (೨೦೧೯), ೨೦೨೦ರಲ್ಲಿ ಕರೋನಾ ಕಾರಣದಿಂದ ನೀಡಿಲ್ಲ. ಕೆ ವಿ ನಾಗರಾಜಮೂರ್ತಿ (೨೦೨೧), ಡಾ. ಎಂ ಜಿ ಈಶ್ವರಪ್ಪ(೨೦೨೨), ಶಶಿಧರ ಅಡಪ (೨೦೨೩), ಮಹಾಂತೇಶ್ ಗಜೇಂದ್ರ ಗಡ (೨೦೨೪) ಇವರಿಗೆ ನೀಡುತ್ತಾ ಬರಲಾಗಿದೆ. ಈ ವರ್ಷ ಈ ಪ್ರಶಸ್ತಿಗೆ ಭಾಜನರಾದವರು ರಂಗಭೂಮಿ ಮತ್ತು ಚಲನಚಿತ್ರರಂಗದ ಶ್ರೇಷ್ಠ ಕಲಾವಿದೆ ಉಮಾಶ್ರೀ ಅವರು.
ಆಯ್ಕೆ ಸಮಿತಿಯ ಮುಂದೆ ಹತ್ತಾರು ಪ್ರತಿಭಾವಂತ ಮತ್ತು ಅರ್ಹ ರಂಗಕರ್ಮಿಗಳ ಹೆಸರುಗಳಿದ್ದವು. ಪ್ರಶಸ್ತಿ ಒಂದೇ ಆಗಿರುವುದರಿಂದ ಅಂತಿಮವಾಗಿ ರಂಗಕ್ಷೇತ್ರ, ಚಲನಚಿತ್ರ ಕ್ಷೇತ್ರ ಮತ್ತು ರಾಜಕೀಯ ಕ್ಷೇತ್ರದಲ್ಲಿ ಕ್ರಿಯಾಶೀಲರಾಗಿ ಈಗಲೂ ತೊಡಗಿಕೊಂಡಿರುವ ಶ್ರೀಮತಿ ಉಮಾಶ್ರೀ ಅವರನ್ನು ಆಯ್ಕೆ ಮಾಡಿದೆ. ಇಂತಹ ಅಪರೂಪದ ರಂಗಕಲಾವಿದೆ ‘ಶ್ರೀ ಶಿವಕುಮಾರ ಪ್ರಶಸ್ತಿ’ಗೆ ಭಾಜನರಾಗಿರುವುದು ನಮಗೆ ತುಂಬಾ ಸಂತೋಷವಾಗಿದೆ ಎಂದು ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿಯವರು ಉಮಾಶ್ರೀ ಅವರನ್ನು ಅಭಿನಂದಿಸಿ ಸುದ್ದಿಯನ್ನು ಮಾಧ್ಯಮಗಳಿಗೆ ಬಿಡುಗೊಳಿಸಿದರು.
ಪ್ರಶಸ್ತಿಯು ೫೦ ಸಾವಿರ ರೂಪಾಯಿ ನಗದು ಮತ್ತು ಪ್ರಶಸ್ತಿ ಫಲಕಗಳನ್ನು ಒಳಗೊಂಡಿದ್ದು, ಪ್ರಶಸ್ತಿಯನ್ನು ಇದೇ ನವೆಂಬರ್ ೨ ರಿಂದ ೭ ರವರೆಗೆ ಸಾಣೇಹಳ್ಳಿಯಲ್ಲಿ ನಡೆಯುವ ರಾಷ್ಟ್ರೀಯ ನಾಟಕೋತ್ಸವ’ದ ಸಮಾರೋಪ ಸಮಾರಂಭದ ದಿನ ಪ್ರದಾನ ಮಾಡಲಾಗುವುದು ಎಂದು ಶ್ರೀಮಠದ ಪ್ರಕಟಣೆಯಲ್ಲಿ ತಿಳಿಸಿದರು.






























