
ಶಿವಮೊಗ್ಗ,ಜು.೨೧-ಹೊಸನಗರ ತಾಲೂಕಿನ ಅಬ್ಬಿ ಫಾಲ್ಸ್ನಲ್ಲಿ ಫೋಟೋ ತೆಗೆಸಿಕೊಳ್ಳಲು ಹೋದ ಬೆಂಗಳೂರಿನ ಪ್ರವಾಸಿಗರೊಬ್ಬರು ನೀರುಪಾಲಾದ ದುರ್ಘಟನೆ ನಡೆದಿದೆ.
ಬೆಂಗಳೂರಿನ ನಾಗರಬಾವಿಯ ಖಾಸಗಿ ಕಂಪನಿಯೊಂದರ ಮ್ಯಾನೇಜರ್ ರಮೇಶ್ (೩೫) ಮೃತಪಟ್ಟವರು, ತಮ್ಮ ಐವರು ಸ್ನೇಹಿತರೊಂದಿಗೆ ಪ್ರವಾಸಕ್ಕೆ ಬಂದಿದ್ದಾಗ ಈ ಅವಘಡ ಸಂಭವಿಸಿದೆ. ಅಬ್ಬಿ ಫಾಲ್ಸ್ನಲ್ಲಿ ಫೋಟೋಗೆ ಪೋಸ್ ನೀಡುವಾಗ ಫಾಲ್ಸ್ಗೆ ಇಳಿದಿದ್ದಾರೆ. ಈ ವೇಳೆ ನೀರಿನಲ್ಲಿ ಕೊಚ್ಚಿಕೊಂಡು ಹೋಗಿದ್ದಾರೆ.
ಫಾಲ್ಸ್ನಲ್ಲಿ ರಮೇಶ್ ಕಣ್ಮರೆಯಾಗುವ ೨೦ ಸೆಕೆಂಡ್ನ ವಿಡಿಯೋ ವೈರಲ್ ಆಗಿದೆ. ವಿಡಿಯೋದಲ್ಲಿ ರಮೇಶ್ ಬಂಡೆ ಮೇಲೆ ಕುಳಿತಿರುತ್ತಾರೆ. ವಿಡಿಯೋದ ಆರಂಭದಲ್ಲಿ ತಮ್ಮ ಎರಡು ಕೈಗಳನ್ನು ಮೇಲೆತ್ತಿ ಸಂಭ್ರಮಿಸುತ್ತಾರೆ. ನಂತರ ತಾನು ಕುಳಿತಿದ್ದ ಬಂಡೆಯಿಂದ ಕೆಳಗಿಳಿಯುವಾಗ ನೀರಿನ ರಭಸಕ್ಕೆ ರಮೇಶ್ ತೇಲಿ ಹೋಗಿದ್ದಾರೆ. ಕೊಚ್ಚಿಹೋಗುತ್ತಿದ್ದಂತೆ ಸ್ನೇಹಿತರು ಕೂಗಿಕೊಳ್ಳುವುದು ವಿಡಿಯೋ ರೆಕಾರ್ಡ್ ಆಗಿದೆ.
ಕೊಚ್ಚಿ ಹೋದ ರಮೇಶ್ ಮೃತದೇಹವು ಫಾಲ್ಸ್ನ ಕೆಳಭಾಗದಲ್ಲಿ ಪತ್ತೆಯಾಗಿದೆ. ನಗರ ಠಾಣೆ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿ ಮುಂದಿನ ತನಿಖೆಯನ್ನು ಕೈಗೊಂಡಿದ್ದಾರೆ.