
ಕಲಬುರಗಿ;ಸೆ.3: ಕಲಬುರಗಿ ನಗರದ ಶರಣಬಸವೇಶ್ವರ ದೇಗುಲದ ಆವರಣದಲ್ಲಿರುವ ಅನುಭವ ಮಂಟಪದಲ್ಲಿ ಬುಧವಾರ ನಡೆದ ಸರಳ ಸಮಾರಂಭದಲ್ಲಿ ಶತಮಾನೋತ್ಸವ ಆಚರಿಸಿದ ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷರಾಗಿ ಮತ್ತು ಶರಣಬಸವ ವಿಶ್ವವಿದ್ಯಾಲಯದ ಕುಲಾಧಿಪತಿಗಳಾಗಿ ಮಾತೋಶ್ರೀ ಪೂಜ್ಯ ಡಾ. ದಾಕ್ಷಾಯಿಣಿ ಅವ್ವಾಜಿಯವರು ಅಧಿಕಾರ ವಹಿಸಿಕೊಂಡರು.
ಅನೇಕ ಶಿಕ್ಷಣ ಸಂಸ್ಥೆಗಳನ್ನು ನಡೆಸುತ್ತಿರುವ ಸಂಘದ ಮೊದಲ ಮಹಿಳಾ ಅಧ್ಯಕ್ಷೆ ಎಂಬ ಗೌರವವನ್ನು ಡಾ. ಅವ್ವಾಜಿಗೆ ಒಲಿದು ಬಂದಿದೆ. ಶ್ರೀಮಂತ ಶೈಕ್ಷಣಿಕ ಅನುಭವ ಹಾಗೂ ಜ್ಞಾನವನ್ನು ಹೊಂದಿರುವ ಅವ್ವಾಜಿಯವರು ಶರಣಬಸವ ವಿಶ್ವವಿದ್ಯಾಲಯದ ಕುಲಾಧಿಪತಿಗಳ ಹುದ್ದೆಯನ್ನು ಅಲಂಕರಿಸಿದ ಎರಡನೇ ಮಹಿಳೆ ಎಂಬ ವಿಶಿಷ್ಟ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. (ಡಾ. ಸಬಿತಾ ರಾಮಮೂರ್ತಿ ಸಿ.ಎಂ.ಆರ್. ವಿಶ್ವವಿದ್ಯಾಲಯದ ಮತ್ತೊಬ್ಬ ಮಹಿಳಾ ಕುಲಪತಿ). ಆಗಸ್ಟ್ 14 ರಂದು ಶರಣಬಸವೇಶ್ವರ ಸಂಸ್ಥಾನದ 8ನೇ ಮಹಾದಾಸೋಹ ಪೀಠಾಧಿಪತಿ ಪೂಜ್ಯ ಡಾ. ಶರಣಬಸವಪ್ಪ ಅಪ್ಪಾಜಿ ಅವರ ನಿಧನದ ನಂತರ ಎರಡೂ ಹುದ್ದೆಗಳು ಖಾಲಿಯಾಗಿದ್ದವು.
ಎರಡು ಹುದ್ದೆಗಳ ಅಧಿಕಾರ ವಹಿಸಿಕೊಂಡ ನಂತರ ಭಾವುಕರಾಗಿ ಮಾತನಾಡಿದ ಡಾ. ಅವ್ವಾಜಿ, ಕೈಗೆಟುಕುವ ವೆಚ್ಚದಲ್ಲಿ ಗುಣಮಟ್ಟದ ಶಿಕ್ಷಣ ಮತ್ತು ಮಹಿಳೆಯರ ಶೈಕ್ಷಣಿಕ ಸಬಲೀಕರಣವನ್ನು ಒದಗಿಸುವ ಡಾ. ಅಪ್ಪಾಜಿ ಅವರ ಕನಸನ್ನು ತಮ್ಮ ಅಧಿಕಾರಾವಧಿಯಲ್ಲಿ ಹೊಸ ಹುರುಪಿನಿಂದ ಕಾರ್ಯಗತಗೊಳಿಸಲಾಗುವುದು ಮತ್ತು ಕಲಬುರಗಿ ಪ್ರದೇಶದ ಜನರಿಗೆ ಶೈಕ್ಷಣಿಕ ಅವಕಾಶಗಳ ಹೊಸ ಮಾರ್ಗಗಳನ್ನು ತೆರೆಯಲು ಡಾ. ಅಪ್ಪಾಜಿ ಹಾಕಿಕೊಟ್ಟ ಮಾರ್ಗವನ್ನು ಮುಂದುವರಿಸಲಾಗುವುದು ಎಂದು ಘೋಷಿಸಿದರು.
ನಮ್ಮ ಸಂಘದ ಹಾಗೂ ಶರಣಬಸವ ವಿಶ್ವವಿದ್ಯಾಲಯದ ಪ್ರತಿಯೊಬ್ಬ ಅಧ್ಯಾಪಕರು ನಿಷ್ಠೆಯಿಂದ ಕೆಲಸ ಮಾಡಿ ಶ್ರಮಪಟ್ಟರೇ, ಶರಣಬಸವ ವಿಶ್ವವಿದ್ಯಾಲಯವನ್ನು ಅತ್ಯುತ್ತಮ ವಿಶ್ವವಿದ್ಯಾಲಯವಾಗಿ ಹಾಗೂ ವಿಶ್ವದ ಅಗ್ರ 100 ವಿಶ್ವವಿದ್ಯಾಲಯಗಳಲ್ಲಿ ಒಂದಾಗಿ ಪರಿವರ್ತಿಸಲು ಪೂಜ್ಯ ಡಾ. ಅಪ್ಪಾಜಿ ಅವರ ಘೋಷಿತ ಕನಸನ್ನು ಸಾಧಿಸಲು ತಮ್ಮನ್ನು ತಾವು ಪುನರ್ ಸಮರ್ಪಿಸಿಕೊಳ್ಳಬೇಕು ಎಂದು ಅವರು ಆಗ್ರಹಿಸಿದರು. ಶಿಕ್ಷಣ ಕ್ಷೇತ್ರದಲ್ಲಿ ಡಾ. ಅಪ್ಪಾಜಿಯವರ ಕೊಡುಗೆಯ ಬಗ್ಗೆ ವಿವರವಾಗಿ ಮಾತನಾಡಿದ ಡಾ. ಅವ್ವಾಜಿ, ಡಾ. ಅಪ್ಪಾಜಿಯವರ ನೇತೃತ್ವದಲ್ಲಿ ಸಂಘವು ಈ ಪ್ರದೇಶದಲ್ಲಿ ಮೊದಲ ಪಬ್ಲಿಕ್ ಶಾಲೆಯನ್ನು ಪ್ರಾರಂಭಿಸಿ, ಪಬ್ಲಿಕ್ ಶಾಲೆಗಳು ನೀಡುವ ಗುಣಮಟ್ಟದ ಶಿಕ್ಷಣವನ್ನು ಕಲಬುರಗಿಯ ಜನರ ಮನೆ ಬಾಗಿಲಿಗೆ ತರುವ ಗೌರವವನ್ನು ಹೊಂದಿದೆ ಎಂದು ಹೆಮ್ಮೆಯಿಂದ ಹೇಳಿದರು.
ಜಿಲ್ಲೆಯ ವಿದ್ಯಾರ್ಥಿಗಳ ಶೈಕ್ಷಣಿಕ ಸಬಲೀಕರಣಕ್ಕಾಗಿ ಡಾ. ಅಪ್ಪಾಜಿಯವರ ಕನಸನ್ನು ನನಸಾಗಿಸುವಲ್ಲಿ ಹಲವಾರು ಶಿಕ್ಷಕರ ಕೊಡುಗೆಗಳನ್ನು ಡಾ. ಅವ್ವಾಜಿ ಸ್ಮರಿಸಿದರು ಮತ್ತು ಶರಣಬಸವೇಶ್ವರ ವಸತಿ ಪಬ್ಲಿಕ್ ಶಾಲೆಯ ದೀರ್ಘಕಾಲ ಸೇವೆ ಸಲ್ಲಿಸಿದ ಪ್ರಾಂಶುಪಾಲರಲ್ಲಿ ಒಬ್ಬರಾದ ಶ್ರೀ ಎನ್. ಎಸ್. ದೇವರಕಲ್ ಅವರ ಕೊಡುಗೆಯನ್ನು ಶ್ಲಾಘಿಸಿದರು. ದೇಶಾದ್ಯಂತ ಮತ್ತು ದೇಶದ ಹೊರಗೆ ಪ್ರತಿಷ್ಠಿತ ಕಂಪನಿಗಳಲ್ಲಿ ಸಾವಿರಾರು ವೈದ್ಯರು ಮತ್ತು ಪ್ರಖ್ಯಾತ ಇಂಜಿನಿಯರ್ಗಳು ಸೇವೆ ಸಲ್ಲಿಸಲು ಕಲಬುರಗಿ ಜಿಲ್ಲೆಗೆ ಏಕೈಕ ಕಾರಣವಾಗಿದೆ ಎಂದು ಗಮನಸೆಳೆದರು. ಈ ಪ್ರದೇಶದ ಶೈಕ್ಷಣಿಕ ಸಬಲೀಕರಣವು ಪ್ರದೇಶದ ಆರ್ಥಿಕ ಅಭಿವೃದ್ಧಿಗೆ ಕಾರಣವಾಗಿದೆ ಎಂದರು.
ಡಾ. ಅಪ್ಪಾಜಿಯವರ ಹೆಜ್ಜೆಗಳನ್ನು ಅನುಸರಿಸಲು, ಶಿಕ್ಷಣ ಸಂಸ್ಥೆಗಳು ಹಾಗೂ ಶರಣಬಸವ ವಿಶ್ವವಿದ್ಯಾಲಯವನ್ನು ಮತ್ತಷ್ಟು ಬಲಪಡಿಸಿ ಅಭಿವೃದ್ಧಿಪಡಿಸಲು ತಮ್ಮನ್ನು ತಾವು ಅರ್ಪಿಸಿಕೊಳ್ಳುವುದಾಗಿ ಪ್ರತಿಜ್ಞೆ ಮಾಡಿದ ಡಾ. ಅವ್ವಾಜಿ, ಸಂಸ್ಥಾನದ 9ನೇ ಪೀಠಾಧಿಪತಿ ಚಿರಂಜೀವಿ ಪೂಜ್ಯ ದೊಡ್ಡಪ್ಪ ಅಪ್ಪಾಜಿ ಅವರನ್ನು “ವಿಶ್ವ ಮಾನವ”ರನ್ನಾಗಿಸುವುದು ಅವರ ಇನ್ನೊಂದು ಜವಾಬ್ದಾರಿಯಾಗಿದೆ ಎಂದು ಘೋಷಿಸಿದರು. ಇದೇ ವೇಳೆ ಪೂಜ್ಯ ಡಾ. ಅಪ್ಪಾಜಿ ಅವರ ಸ್ಮರಣಾರ್ಥ ಶರಣಬಸವೇಶ್ವರ ದೇಗುಲದ ಆವರಣದಲ್ಲಿ ನೂತನವಾಗಿ ನಿರ್ಮಿಸಿರುವ ಅನುಭವ ಮಂಟಪಕ್ಕೆ “ಪೂಜ್ಯ ಡಾ. ಶರಣಬಸವಪ್ಪ ಅಪ್ಪಾಜಿ ಅನುಭವ ಮಂಟಪ” ಎಂದು ನಾಮಕರಣ ಮಾಡಿದರು.
ಈ ಸಂದರ್ಭದಲ್ಲಿ ವಿಶ್ವವಿದ್ಯಾಲಯದ ಉಪಕುಲಪತಿ ಪೆÇ್ರ. ಅನಿಲಕುಮಾರ ಬಿಡವೆ ಮತ್ತು ಇತರ ಪದಾಧಿಕಾರಿಗಳು ಡಾ. ಅವ್ವಾಜಿ ಅವರನ್ನು ವಿಶ್ವವಿದ್ಯಾಲಯದ ಪರವಾಗಿ ಅಭಿನಂದಿಸಿ ಸನ್ಮಾನಿಸಿದರು. ಪ್ರಾಸ್ತಾವಿಕ ಮಾತುಗಳನ್ನಾಡಿದ ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಶ್ರೀ ಬಸವರಾಜ ದೇಶಮುಖ, ಸಂಘದ ವತಿಯಿಂದ ಡಾ. ಅವ್ವಾಜಿ ಅವರನ್ನು ಸನ್ಮಾನಿಸಿ, ಸಂಘದ ಅಧೀನದಲ್ಲಿರುವ ಎಲ್ಲಾ ಕಾಲೇಜುಗಳು ಹಾಗೂ ಇತರೆ ಶಿಕ್ಷಣ ಸಂಸ್ಥೆಗಳ ಪ್ರಾಧ್ಯಾಪಕರು ಹಾಗೂ ಪ್ರಾಚಾರ್ಯರು ಡಾ. ಅವ್ವಾಜಿಯವರನ್ನು ಸನ್ಮಾನಿಸಿದರು.
ಸಂಸ್ಥಾನದ 9ನೇ ಪೀಠಾಧಿಪತಿ ಚಿರಂಜೀವಿ ಪೂಜ್ಯ ದೊಡ್ಡಪ್ಪ ಅಪ್ಪಾಜಿ ತಮ್ಮ ಸಂಕ್ಷಿಪ್ತ ನುಡಿಗಳಲ್ಲಿ, ತಮ್ಮ ತಾಯಿ ಡಾ. ಅವ್ವಾಜಿ ಅವರು ಸಂಘದ ಅಧ್ಯಕ್ಷರಾಗಿ ಮತ್ತು ವಿಶ್ವವಿದ್ಯಾಲಯದ ಕುಲಾಧಿಪತಿಗಳಾಗಿ ಅಧಿಕಾರ ವಹಿಸಿಕೊಂಡಿದ್ದು ನಮ್ಮೆಲ್ಲರಿಗೂ ಒಂದು ಸುಸಂದರ್ಭ ಎಂದು ಶ್ಲಾಘಿಸಿದರು. ಡಾ. ಅಪ್ಪಾಜಿ ಅವರ ಎಲ್ಲಾ ಕನಸುಗಳನ್ನು ಸಾಧಿಸಲು ನಾವೆಲ್ಲರೂ ಡಾ. ಅವ್ವಾಜಿ ಅವರ ಕೈಗಳನ್ನು ಬಲಪಡಿಸಬೇಕೆಂದು ಅವರು ಎಲ್ಲರಲ್ಲೂ ಮನವಿ ಮಾಡಿದರು.
ಡಾ. ಅಪ್ಪಾಜಿ ಅವರ ಆಪ್ತ ಸಂಬಂಧಿಕರು ಸೇರಿದಂತೆ ನಿಷ್ಠಿ ಕುಟುಂಬದ ಸದಸ್ಯರು, ಸೋಲಾಪುರದ ಕಾಡಾದಿ ಕುಟುಂಬ, ಔಸಾ ಮಹಾರಾಜ್ ಕುಟುಂಬ ಸದಸ್ಯರು, ಭೀಮಳ್ಳಿ ಕುಟುಂಬ ಸದಸ್ಯರು, ವಡಗಾಂವ್ ದೇಶಮುಖ್ ಕುಟುಂಬ ಸದಸ್ಯರು ಸೇರಿದಂತೆ ಇತರ ಕುಟುಂಬದ ಸಂಭಂಧಿಕರು ಉಪಸ್ಥಿತರಿದ್ದರು. ಅರುಣ್ಕುಮಾರ್ ಪಾಟೀಲ್ ಕೊಡಲಹಂಗರಗಾ, ಶರಣಬಸವ ವಿಶ್ವವಿದ್ಯಾಲಯದ ಕುಲಸಚಿವ ಡಾ. ಎಸ್. ಜಿ. ಡೊಳ್ಳೇಗೌಡರ್, ಕುಲಸಚಿವ (ಮೌಲ್ಯಮಾಪನ) ಡಾ. ಎಸ್. ಎಚ್. ಹೊನ್ನಳ್ಳಿ, ಡೀನ್ ಡಾ. ಲಕ್ಷ್ಮಿ ಪಾಟೀಲ್ ಮಾಕಾ, ಹಣಕಾಸು ಅಧಿಕಾರಿ ಪೆÇ್ರ. ಕಿರಣ್ ಮಾಕಾ ಸೇರಿದಂತೆ ಇತರರು ಉಪಸ್ಥಿತರಿದ್ದರು.