
ಚೆನ್ನೈ, ಸೆ. 27- ತಮಿಳಿಗ ವೆಟ್ರಿ ಕಳಗಂ ಸಂಸ್ಥಾಪಕ ಅಧ್ಯಕ ಹಾಗೂ ಖ್ಯಾತ ನಟ ವಿಜಯ್ ನಡೆಸಿದ ಬೃಹತ್ ರ್ಯಾಲಿಯಲ್ಲಿ ಭಾರೀ ನೂಕು ನುಗ್ಗಲು ಉಂಟಾಗಿ 31 ಜನರು ಸಾವನ್ನಪ್ಪಿದ್ದಾರೆ.
ತಮಿಳುನಾಡಿನ ಕರೂರಿನಲ್ಲಿ ಈ ಘಟನೆ ಸಂಭವಿಸಿದೆ.
ಕಾರ್ಯಕ್ರಮದಲ್ಲಿ ಜನ ದಟ್ಟಣೆಯಿಂದಾಗಿ ಜನರು ಮೂರ್ಛೆ ತಪ್ಪಿದದ್ದಾರೆಂದು ಜಿಲ್ಲಾಧಿಕಾರಿ ಎಂ. ತಂಗವೇಲ್ ತಿಳಿಸಿದ್ದಾರೆ.
ಈ ವಿಷಯ ಗಮನಕ್ಕೆ ಬರುತ್ತಿದ್ದಂತೆ ವಿಜಯ್ ಅವರು ತಕ್ಷಣ ಆ್ಯಂಬುಲೆನ್ಸ್ ಅನ್ನು ಕರೆಸಿ ಅವರನ್ನು ಆಸ್ಪತ್ರೆಗೆ ದಾಖಲಿಸುವ ವ್ಯವಸ್ಥೆ ಮಾಡಿದ್ದರು. ಕಾಲ್ತುಳಿತದ ನಂತರ ವಿಜಯ್ ಅರ್ಧಕ್ಕೇ ತಮ್ಮ ಭಾಷಣವನ್ನು ಮೊಟಕುಗೊಳಿಸಿದ್ದಾರೆ.
ರಸ್ತೆಯ ತುಂಬ ಸಾವಿರಾರು ಜನ ಸೇರಿದ್ದರಿಂದ ನೂಕುನುಗ್ಗಲು ಉಂಟಾಗಿದೆ. ಕರೂರಿನಲ್ಲಿ ನಡೆದ ತಮ್ಮ ರ್ಯಾಲಿಯಲ್ಲಿ ಜನರು ಪ್ರಜ್ಞೆ ತಪ್ಪಿದಾಗ “ಪೊಲೀಸರೇ, ದಯವಿಟ್ಟು ಸಹಾಯ ಮಾಡಿ” ಎಂದು ವಿಜಯ್ ಹೇಳುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. “ಯಾರೂ ಗಾಬರಿಯಾಗಬೇಡಿ, ಈಗ ಆ್ಯಂಬುಲೆನ್ಸ್ ಬರುತ್ತದೆ” ಎಂದು ಅವರು ಮೈಕ್ನಲ್ಲಿ ಹೇಳಿದ್ದಾರೆ.
ಉಸಿರಾಟದ ತೊಂದರೆ ಅನುಭವಿಸುತ್ತಿರುವ ಜನರಿಗೆ ನೀರು ವಿತರಿಸಲು ಮತ್ತು ಆಂಬ್ಯುಲೆನ್ಸ್ ಸೇವೆಗಳನ್ನು ಸಂಘಟಿಸಲು ಮುಂದಾದರು. ಅಗತ್ಯವಿರುವವರನ್ನು ತಲುಪಲು ತುರ್ತು ಆಂಬ್ಯುಲೆನ್ಸ್ಗಳಿಗೆ ದಾರಿ ಮಾಡಿಕೊಡುವಂತೆ ತಮ್ಮ ಬೆಂಬಲಿಗರನ್ನು ಅವರು ಒತ್ತಾಯಿಸಿದರು.

ಅಸ್ವಸ್ಥರಾಗಿರುವವರಿಗೆ ಸಹಾಯ ಮಾಡಲು ನೀರಿನ ಬಾಟಲಿಗಳನ್ನು ವಿತರಿಸಲಾಯಿತು ಮತ್ತು ವೈದ್ಯಕೀಯ ತಂಡಗಳನ್ನು ತಕ್ಷಣವೇ ನಿಯೋಜಿಸಲಾಯಿತು. ಪ್ರಜ್ಞೆ ತಪ್ಪಿದ ಹಲವಾರು ವ್ಯಕ್ತಿಗಳನ್ನು ಚಿಕಿತ್ಸೆಗಾಗಿ ಹತ್ತಿರದ ಆಸ್ಪತ್ರೆಗಳಿಗೆ ಸಾಗಿಸಲಾಯಿತು.
ಈ ರ್ಯಾಲಿಯು 2026ರ ತಮಿಳುನಾಡು ವಿಧಾನಸಭಾ ಚುನಾವಣೆಗೆ ಮುಂಚಿತವಾಗಿ ರಾಜ್ಯಾದ್ಯಂತ ನಡೆಯುತ್ತಿರುವ ವಿಜಯ್ ಅವರ ಪ್ರಚಾರದ ಭಾಗವಾಗಿತ್ತು.
ಈ ಕಾರ್ಯಕ್ರಮದಲ್ಲಿ ಒಂದು ಲಕ್ಷ ಜನರು ಭಾಗವಹಿಸಿದ್ದರು.