
ಬೀದರ:ಸೆ.5: ಎಂಟು ದಿನಗಳ ಒಳಗಾಗಿ ಬೀದರ ಉತ್ತರ ಕ್ಷೇತ್ರದ ವ್ಯಾಪ್ತಿಯ ಬೆಳೆಹಾನಿ ಕುರಿತು ಅಧಿಕಾರಿಗಳು ಇಂಚಿಂಚು ಬಿಡದೆ ಸರ್ವೆ ಮಾಡಿ ಎಕರೆಗೆ 50 ಸಾವಿರ ರೂಪಾಯಿ ಸರ್ಕಾರದಿಂದ ಪರಿಹಾರ ಕೊಡಿಸಬೇಕು. ಇಲ್ಲದಿದ್ದರೆ ಜಿಲ್ಲಾಧಿಕಾರಿಗಳ ಕಚೇರಿಗೆ ರೈತರೊಂದಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ಮಾಡಲಾಗುವುದು ಎಂದು ಭಾರತೀಯ ಜನತಾ ಪಕ್ಷದ ವಿಭಾಗೀಯ ಸಹಪ್ರಭಾರಿ ಈಶ್ವರಸಿಂಗ್ ಠಾಕೂರ್ ತಿಳಿಸಿದರು. ನಗರದ ಜಿಲ್ಲಾ ಪತ್ರಿಕಾ ಭವನದಲ್ಲಿ ಶುಕ್ರವಾರ ಕರೆದ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು ಬೀದರ ತಾಲೂಕಿನ ಇಸ್ಲಾಂಪೂರ ಗ್ರಾಮ ಸಂಪೂರ್ಣ ಮುಳುಗಡೆಯಾಗಿದೆ. ಹೊಲಗಳು ರೈತರಿಗೆ ಗುರುತು ಹಚ್ಚದಷ್ಟು ಮುಳುಗಿವೆ. ಸಾಲಮಾಡಿ ಬಿತ್ತನೆ ಮಾಡಿದ್ದಾರೆ. ಈಗ ಮತ್ತೆ ಸಾಲ ಮಾಡಿ ಹಾಳಾದ ಬೆಳೆಯನ್ನು ಕೀಳುವ ಸ್ಥಿತಿ ರೈತರಿಗೆ ಬಂದಿದೆ. ಸಾಂಗ್ವಿ, ಬಂಪಳ್ಳಿ, ಜಾಂಪಾಡ್, ಚಿಮಕೋಡ, ನೆಮತಾಬಾದ ಹೀಗೆ ಹಲವು ಗ್ರಾಮಗಳಲ್ಲಿ ಬಹುತೇಕ ಬೆಳೆಗಳು ಹಾಳಾಗಿದ್ದು, ಪೌರಾಡಳಿತ ಸಚಿವರು ರಸ್ತೆ ಮೂಲಕವೇ ಕಣ್ಣಾಡಿಸಿ ಹೋಗಿದ್ದಾರೆ ಎಂದು ರೈತರು ನಮ್ಮ ಮುಂದೆ ನೋವು ತೋಡಿಕೊಂಡಿದ್ದಾರೆ ಎಂದು ತಿಳಿಸಿದರು.
ಚಿಮಕೋಡ, ಅಲ್ಲಾಪುರ ಗ್ರಾಮದಲ್ಲಿ ನದಿಯ ಒತ್ತಡ ಹಾಗೂ ಹಳ್ಳ ಕೊಳ್ಳಗಳ ಅತಿಯಾದ ಹರಿಯುವಿಕೆಯಿಂದ ಜಮೀನು ಮುಳುಗಡೆಯಾಗಿವೆ. ಚಾಂಬಾಳ, ಹಿಪ್ಪಳಗಾಂವ ಮತ್ತು ಕನ್ನಳ್ಳಿ ಗ್ರಾಮಗಳಲ್ಲಿನ ಜಮೀನಿನಲ್ಲಿ ನೀರು ನಿಂತು ಬೆಳೆಗಳು ಕೊಳೆತು ಹೋಗಿವೆ. ಪೌರಾಡಳಿತ ಸಚಿವರು ದಿನಾಂಕ ನಿಗದಿಪಡಿಸಿದರೂ ಕೆಲವೊಂದು ಗ್ರಾಮಗಳಿಗೆ ಭೇಟಿಗೂ ಹೋಗಿಲ್ಲ. ಜಿಲ್ಲಾಡಳಿತದಿಂದಲೂ ರೈತರಿಗೆ ಯಾವುದೇ ಸಹಕಾರ ಸಿಕ್ಕಿಲ್ಲ ಎಂದು ಠಾಕೂರ್ ಆರೋಪಿಸಿದರು.
ಕೆಲವೊಂದು ಗ್ರಾಮಗಳಲ್ಲಿ ಅಂಗನವಾಡಿ ಕೂಡಾ ಬಿದ್ದಿವೆ. ಅಧಿಕಾರಿಗಳಿಗೆ ಕೇಳಿದರೆ ರಿಪೇರಿಗಾಗಿ ಅನುದಾನ ಮೀಸಲಿಟ್ಟಿದ್ದೇವೆ ಎಂದು ಹೇಳುತ್ತಾರೆ. ಇಂದಿಗೂ ರಿಪೇರಿ ಆಗಿಲ್ಲ. ಇಂತಹ ಸಂದರ್ಭದಲ್ಲಿ ರೈತರಿಗೆ ನಾನು ಧೈರ್ಯ ಹೇಳಿ ಬಂದಿದ್ದೇನೆ. ಬೆಳೆಹಾನಿಯ ಸಮಗ್ರ ವರದಿಯನ್ನು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ, ಚಲುವನಾರಾಯಣಸ್ವಾಮಿ ಅವರಿಗೂ ಕಳುಹಿಸುತ್ತಿದ್ದೇವೆ. ಎಕರೆಗೆ ಬಿತ್ತನೆಗಾಗಿ ರೂ. 25 ಸಾವಿರ ಅವರಿಗೆ ಖರ್ಚಾಗಿದೆ. ಇದೀಗ ಸರ್ಕಾರ ಎಕರೆಗೆ 50 ಸಾವಿರ ರೂಪಾಯಿ ಪರಿಹಾರ ಧನ ನೀಡಬೇಕು. ಜಿಲ್ಲಾ ಉಸ್ತುವಾರಿ ಸಚಿವರು ಈ ಕುರಿತು ವಿಚಾರಿಸಬೇಕು. ಎಂಟು ದಿನಗಳ ಒಳಗಾಗಿ ಪರಿಹಾರ ನೀಡದಿದ್ದರೆ ಡಿಸಿ ಕಚೇರಿಗೆ ಮುತ್ತಿಗೆ ಹಾಕಲಾಗುವುದು ಎಂದು ಠಾಕೂರ್ ತಿಳಿಸಿದರು.
ಮಾಜಿ ಬುಡಾ ಅಧ್ಯಕ್ಷ ಬಾಬು ವಾಲಿ ಮಾತನಾಡಿ ವಿವಿಧ ವಸ್ತುಗಳ ಮೇಲಿನ ಜಿಎಸ್ಟಿ ತೆರಿಗೆ ಕಡಿಮೆ ಮಾಡಿದ ಕೇಂದ್ರ ಸರ್ಕಾರದ ನಡೆಯನ್ನು ನಾವು ಸ್ವಾಗತ ಮಾಡುತ್ತೇವೆ. ಇದು ಬಡವರಿಗೆ ಹಾಗೂ ಮಧ್ಯಮ ವರ್ಗದವರಿಗೆ ದಸರಾ ಕೊಡುಗೆ ಎಂದು ಹೇಳಬಹುದು. ಅವರಿಗೆ ಸಾಕಷ್ಟು ಅನುಕೂಲವಾಗಲಿದೆ ಎಂದು ತಿಳಿಸಿದರು.
ಪ್ರಮುಖರಾದ ದೀಪಕ ಗಾದಗೆ ಮಾತನಾಡಿದರು. ಪತ್ರಿಕಾಗೋಷ್ಠಿಯಲ್ಲಿ ಪಕ್ಷದ ನಗರಾಧ್ಯಕ್ಷ ಶಶಿ ಹೊಸಳ್ಳಿ, ಪ್ರಮುಖರಾದ ರಾಜೇಂದ್ರ ಪೂಜಾರಿ, ನಿಜಲಿಂಗಪ್ಪ, ನಾಗೇಂದ್ರ ಪಾಟೀಲ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.