Home ಮುಖಪುಟ ಸುದ್ದಿ ದಕ್ಷಿಣ ಕಾಶಿ ನಂಜನಗೂಡಿನಲ್ಲಿ ಪಂಚ ರಥೋತ್ಸವಕ್ಕೆ ಭಕ್ತ ಸಾಗರ

ದಕ್ಷಿಣ ಕಾಶಿ ನಂಜನಗೂಡಿನಲ್ಲಿ ಪಂಚ ರಥೋತ್ಸವಕ್ಕೆ ಭಕ್ತ ಸಾಗರ

ವರದಿ: ಗಂಗಾಧರ್
ನಂಜನಗೂಡು: ಮಾ.೩೦:-
ದಕ್ಷಿಣ ಕಾಶಿ ಎಂಬ ಖ್ಯಾತಿ ಪಡೆದ ನಂಜನಗೂಡಿನಲ್ಲಿ ಇಂದು ಬೆಳಗ್ಗೆ ಶ್ರೀ ಕಂಠೇಶ್ವರಸ್ವಾಮಿಯ ಪಂಚ ಮಹಾ ರಥೋತ್ಸವ ಧಾರ್ಮಿಕ ಸಂಪ್ರದಾಯದೊಂದಿಗೆ ವಿಜೃಂಭಣೆಯಾಗಿ ನೆರವೇರಿತು.


ಇಂದು ಬೆಳಿಗ್ಗೆ ೫:೩೦ ರಿಂದ ೬:೩೦ ಗಂಟೆ ಒಳಗೆ ಸಲ್ಲುವ ಶುಭ ಮೀನ ಲಗ್ನದಲ್ಲಿ ಶ್ರೀಕಂಟೇಶ್ವರ ಸ್ವಾಮಿ ಪಂಚ ಮಹಾ ರಥೋತ್ಸವಕ್ಕೆ ಲಕ್ಷಾಂತರ ಭಕ್ತರ ಸಮ್ಮುಖದಲ್ಲಿ ಅದ್ದೂರಿಯಾಗಿ ಶಾಸಕ ದರ್ಶನ್ ಧ್ರುವನಾರಾಯಣ ಚಾಲನೆ ನೀಡಿದರು. ನಂಜನಗೂಡು ಕ್ಷೇತ್ರ ೫ ರಥಗಳನ್ನು ಎಳೆಯುವ ಏಕೈಕ ಕ್ಷೇತ್ರವೆಂದು ಈ ಕ್ಷೇತ್ರವು ಪ್ರಸಿದ್ಧವಾಗಿದೆ.


ವಿವಿಧತೆಯಿಂದ ಆಗಮಿಸಿದ ಲಕ್ಷಾಂತರ ಭಕ್ತರು ರಥವನ್ನು ಭಕ್ತಿ ಭಾವದಿಂದ ಜೈ ಜೈ ನಂಜುಂಡ ಎಂದು ಜೈಕಾರ ಹಾಕುತ್ತ ಎಳೆದರು ಪಟ್ಟಣ ಮತ್ತು ರಥದ ಬೀದಿಯಲ್ಲಿ ಎಲ್ಲೆಡೆ ಸಂಭ್ರಮ ಸಡಗರ ಕಂಡುಬಂದಿತ್ತು.


ಲಕ್ಷಾಂತರ ಭಕ್ತರು ರಥದ ಮೇಲೆ ಹೂವು ದವನ ಬಾಳೆಹಣ್ಣು ಎಸೆದು ಶ್ರೀಕಂಠೇಶ್ವರನಿಗೆ ಜಯವಾಗಲಿ ಓಂ ನಮಃ ಶಿವಾಯ ಎಂಬ ಘೋಷಣೆಗಳನ್ನು ಕೂಗಿ ಪುಳಕಿತಗೊಂಡರು. ಮೈಸೂರು ಸಮೀಪ ಇರುವ ನಂಜನಗೂಡು ಕ್ಷೇತ್ರ ಪುರಾಣ ಪ್ರಸಿದ್ಧವಾದ ಯಾತ್ರ ಸ್ಥಳವಾಗಿದೆ ಈ ಸ್ಥಳವು ದಕ್ಷಿಣ ಕಾಶಿ ಎಂದೇ ಪ್ರಸಿದ್ಧವಾಗಿದೆ ಪ್ರತಿ ವರ್ಷ ಕ್ಷೇತ್ರದಲ್ಲಿ ಮೀನ ಮಾಸದಲ್ಲಿ ಉತ್ತರ ನಕ್ಷತ್ರದ ದಿವಸ ಉತ್ತಮ ಲಗ್ನದಲ್ಲಿ ಪಂಚಮ ರಥೋತ್ಸವ ನಡೆಸಲಾಗುತ್ತದೆ.


ಪಂಚಮ ರಥಗೋಳಾದ ಗಣಪತಿ ಶ್ರೀಕಂಠೇಶ್ವರ ಪಾರ್ವತಿ ಸುಬ್ರಹ್ಮಣ್ಯ ಹಾಗೂ ಚಂಡಿಕೇಶ್ವರ ರಥಗಳನ್ನು ಈ ಸಂದರ್ಭದಲ್ಲಿ ಎಳೆಯಲಾಯಿತು. ನವರತ್ನಗಳಿಂದ ಕೂಡಿದ ಹೂವಿನ ಅಲಂಕಾರದಿಂದ ಶ್ರೀಕಂಠೇಶ್ವರ ಸ್ವಾಮಿ ವಿಗ್ರಹವನ್ನು ರಥದಲ್ಲಿ ಇರಿಸಲಾಗಿತ್ತು ಪಂಚಮ ರಥೋತ್ಸವ ಅಂಗವಾಗಿ ಶ್ರೀಕಂಠೇಶ್ವರ ದೇವಾಲಯವನ್ನು ವಿಶೇಷವಾಗಿ ಅಲಂಕರಿಸಲಾಗಿತ್ತು. ಪಟ್ಟಣದ ಬೀದಿಗಳನ್ನು ವೃತ್ತಗಳನ್ನು ವಿದ್ಯುತ್ ದೀಪಾವಲಂಕಾರಗಳನ್ನು ಮಾಡಲಾಗಿತ್ತು ಪ್ರತಿಯೊಂದು ಮನೆಯ ಮುಂದೆ ರಂಗವಲ್ಲಿ ಹಾಕಿ ಮತ್ತಷ್ಟು ಮೆರಗು ನೀಡಲಾಯಿತು.


ರಾತ್ರಿ ಬೆಳಿಗ್ಗೆ ಹಲವು ಸಂಘ ಸಂಸ್ಥೆಗಳು ಜಾತ್ರೆಗೆ ಬಂದಿದ್ದ ಭಕ್ತಾದಿಗಳಿಗೆ ಮಜ್ಜಿಗೆ ಪಾನಕ ಲಾಡು ಹಣ್ಣುಗಳು ತರಕಾರಿ ಬಾತ್ ಮೊಸರು ಅನ್ನ ನೀಡುತ್ತಿದ್ದರು ಇದರ ಜೊತೆಗೆ ದೇವಾಲಯದ ದಾಸೋಹದಲ್ಲಿ ಕೂಡ ಪ್ರಸಾದ ವಿನಯದ ಮಾಡಲಾಗಿತ್ತು ರಥೋತ್ಸವದ ಅಂಗವಾಗಿ ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು. ಈ ರಥೋತ್ಸವ ಸುತ್ತಮುತ್ತಲ ನಾಡಿನಲ್ಲಿ ದೊಡ್ಡ ಜಾತ್ರೆ ಎಂದೇ ಖ್ಯಾತವಾಗಿದ್ದು ರಥೋತ್ಸವದೊಂದು ವಿಶೇಷವಾಗಿ ನವದಂಪತಿಗಳು ಹೆಚ್ಚಿನ ಸಂಖ್ಯೆಯಲ್ಲಿ ಬಂದು ಹಣ್ಣುದವನ ಹಾಕಿ ಭಾಗವಹಿಸುವರು.


ಪೊಲೀಸ್ ಇಲಾಖೆ ವತಿಯಿಂದ ಜಾತ್ರೆಗೆ ಹೆಚ್ಚಿನ ಸಿಬ್ಬಂದಿಯಾಗಿ ಯಾವುದೇ ರೀತಿಯ ಅಹಿತಕರ ಘಟನೆ ನಡೆಯದಂತೆ ಮತ್ತು ರಥದ ಸುತ್ತ ಯಾವ ಭಕ್ತಾದಿಗಳು ಹೋಗದಂತೆ ಮುನ್ನೆಚ್ಚರಿಕೆ ಕ್ರಮ ತೆಗೆದುಕೊಳ್ಳಲಾಯಿತು . ಇದರ ಜೊತೆಗೆ ಕಪಿಲ ದಡದ ತೀರದಲ್ಲೂ ಕೂಡ ಭಕ್ತಾದಿಗಳಿಗೆ ಹೆಚ್ಚಿನ ಅನುಕೂಲ ಮಾಡಿಕೊಡಲಾಗಿತ್ತು ದೇವಸ್ಥಾನದ ಆಡಳಿತ ಮಂಡಳಿ ವತಿಯಿಂದ ಕೂಡ ಜಾತ್ರೆಗೆ ಕ್ರಮ ಕೈಗೊಳ್ಳಲಾಗಿತ್ತು ಒಟ್ಟಾರೆ ರಥೋತ್ಸವಕ್ಕೆ ಆಗಮಿಸಿದ ಭಕ್ತಾದಿಗಳಿಗೆ ಜಿಲ್ಲಾಡಳಿತ ಮುಜರಾಯಿ ಇಲಾಖೆ ಹಾಗೂ ಪುರಸಭೆ ಶ್ರೀಕಂಠೇಶ್ವರ ಆಡಳಿತ ಮಂಡಳಿ ಎಲ್ಲಾ ರೀತಿಯ ಸೌಲಭ್ಯ ಕಲ್ಪಿಸಿತು ಭದ್ರತೆಗಾಗಿ ಹೆಚ್ಚಿನ ಪೊಲೀಸ್ ಬಂದೋಬಸ್ ಮಾಡಲಾಗಿತ್ತು.


ಶ್ರೀಕಂಠೇಶ್ವರ ದೇವಾಲಯದ ಇಒ ಕೃಷ್ಣರವರು ಮುಂಜಾಗ್ರತ ಕ್ರಮವಾಗಿ ದೊಡ್ಡ ಜಾತ್ರೆಗೆ ಸಂಬಂಧಪಟ್ಟಂತೆ ಎಲ್ಲರ ಜೊತೆ ಕೈಜೋಡಿಸಿ ಬರುವ ಭಕ್ತಾದಿಗಳಿಗೆ ಎಲ್ಲಾ ರೀತಿಯ ಮೂಲಭೂತ ಸೌಕರ್ಯಗಳನ್ನು ಒದಗಿಸಿಕೊಟ್ಟಿದ್ದರು. ಒಟ್ಟಾರೆ ಎಲ್ಲಾ ಅಧಿಕಾರಿಗಳಿಂದ ಈ ಬಾರಿಯೂ ದೊಡ್ಡ ಜಾತ್ರೆ ವಿಜೃಂಭಣೆಯಿಂದ ನಡೆಯಿತು.


ರಥೋತ್ಸವದ ಸಂದರ್ಭದಲ್ಲಿ ಶಾಸಕ ದರ್ಶನ್ ಧ್ರುವ ನಾರಾಯಣ್, ಜಿಲ್ಲಾಧಿಕಾರಿ ಲಕ್ಷ್ಮಿಕಾಂತ್ ರೆಡ್ಡಿ, ಎಡಿಎ ಶಿವರಾಜ್, ಮಾಜಿ ಶಾಸಕ ಕಳಲೆ ಕೇಸವಮೂರ್ತಿ, ಶ್ರೀಕಂಠೇಶ್ವರ ದೇವಾಲಯದ ಧರ್ಮದರ್ಶಿಗಳಾದ ಗೋಪಾಲಕೃಷ್ಣ, ಗೋವಿಂದರಾಜು, ಮಾಜಿ ನಗರಸಭೆ ಅಧ್ಯಕ್ಷ ಶ್ರೀಕಂಠ, ಶ್ರೀಧರ, ಮಂಜುನಾಥ್, ಮಾದಪ್ಪ ಸೇರಿದಂತೆ ಮಾಜಿ ನಗರಸಭೆ ಸದಸ್ಯರು ಗ್ರಾಮ ಪಂಚಾಯತಿ ಜಿಲ್ಲಾ ಪಂಚಾಯತಿ ತಾಲೂಕು ಪಂಚಾಯಿತಿ ಮಾಜಿ ಸದಸ್ಯರುಗಳು ಗಡಿ ಯಜಮಾನರುಗಳು ವಿವಿಧ ತಾಲೂಕಿನ ಗ್ರಾಮಸ್ಥರು ಮತ್ತು ಲಕ್ಷಾಂತರ ಭಕ್ತಾದಿಗಳು ಭಾಗಿಯಾಗಿದ್ದರು.

ಜನಜಂಗುಳಿಗೆ ಸಿಲುಕಿ ಭಕ್ತ ಸಾವು


ಪ್ರಸಿದ್ಧ ರಥೋತ್ಸವದ ವೇಳೆ ದುರ್ಘಟನೆ ಸಂಭವಿಸಿದ್ದು, ಒಬ್ಬ ಭಕ್ತ ಸಾವನ್ನಪ್ಪಿರುವ ಘಟನೆ ನಡೆದಿದೆ.


ಮೃತರನ್ನು ೫೬ ವರ್ಷದ ನಂಜುಂಡಸ್ವಾಮಿ ಎಂದು ಗುರುತಿಸಲಾಗಿದ್ದು, ಅವರು ಬೆಂಗಳೂರಿನ ಮಾಗಡಿ ನಿವಾಸಿಯಾಗಿದ್ದಾರೆ. ರಥೋತ್ಸವಕ್ಕೆಂದು ಆಗಮಿಸಿದ್ದ ನಂಜುಂಡಸ್ವಾಮಿ, ಜನಜಂಗುಳಿಯಲ್ಲಿ ಸಿಲುಕಿ ಗಂಭೀರವಾಗಿ ಗಾಯಗೊಂಡಿದ್ದಾರೆ. ತಕ್ಷಣ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.