
ಕಲಬುರಗಿ :ಅ.25: ವಿದ್ಯಾರ್ಥಿಗಳು ಓದುವ ಪ್ರವೃತ್ತಿಯನ್ನು ಬೆಳೆಸಿಕೊಳ್ಳಬೇಕು ಎಂದು ಪ್ರಾಚಾರ್ಯೆ ಡಾ.ಪುಟ್ಟಮಣಿ ದೇವಿದಾಸ ಹೇಳಿದರು.
ಗೋದುತಾಯಿ ದೊಡ್ಡಪ್ಪ ಅಪ್ಪ ಕಲಾ,ವಾಣಿಜ್ಯ ಮತ್ತು ವಿಜ್ಞಾನ ಪದವಿ ಮಹಿಳಾ ಮಹಾವಿದ್ಯಾಲಯದಲ್ಲಿ ರವಿವಾರ ಗ್ರಂಥಾಲಯ ಪಿತಾಮಹ ಡಾ. ಎಸ್.ಆರ್.ರಂಗನಾಥನ್ರವರ 133ನೇ ಹುಟ್ಟುಹಬ್ಬದ ನಿಮಿತ್ಯ ಗ್ರಂಥಾಲಯ ದಿನಾಚರಣೆ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡುತ್ತಾ, ಪುಸ್ತಕಗಳು ಜ್ಞಾನಾರ್ಜನೆ ಹೆಚ್ಚಿಸುತ್ತವೆ. ಗ್ರಂಥಾಲಯವು ಕಾಲೇಜಿನ ಹೃದಯ ಭಾಗವಿದ್ದಂತೆ ವಿದ್ಯಾರ್ಥಿಗಳು ಹೆಚ್ಚು ಸಮಯ ಓದುವುದಕ್ಕೆ ಮೀಸಲಿಡಬೇಕು. ಸಮಯವನ್ನು ಕಾಲಹರಣ ಮಾಡದೆ ಗ್ರಂಥಾಲಯಗಳು ಜ್ಞಾನಕ್ಕೆ ತಲುಪುವ ದ್ವಾರಗಳಾಗಿದ್ದು, ವಿದ್ಯಾರ್ಥಿಗಳು ಹೆಚ್ಚು ಸಮಯವನ್ನು ಗ್ರಂಥಾಲಯದಲ್ಲಿ ಕಳೆಯಬೇಕು ಎಂದು ಸಲಹೆ ನೀಡಿದರು.
ಕಾರ್ಯಕ್ರಮದ ಅತಿಥಿಗಳಾದ ಗೋದುತಾಯಿ ಶಿಕ್ಷಣ ಮಹಾವಿದ್ಯಾಲಯದ ಗ್ರಂಥಪಾಲಕರಾದ ಶ್ರೀಮತಿ ಸವಿತಾ ಪಾಟೀಲ ಮಾತನಾಡಿ, ನಿರಂತರವಾಗಿ ಪುಸ್ತಕ ಓದುವ ಹವ್ಯಾಸವನ್ನು ವಿದ್ಯಾರ್ಥಿಗಳು ಬೆಳೆಸಿಕೊಳ್ಳಬೇಕು. ಇದರಿಂದ ಉನ್ನತ ಸ್ಥಾನಕ್ಕೇರಲು ಸಾಧ್ಯವಾಗುತ್ತದೆ. ವಿದ್ಯಾರ್ಥಿಗಳ ಗೆಳೆಯರೆಂದರೆ ಪುಸ್ತಕಗಳು, ಹಾಗಾಗಿ ಸದಾ ಪುಸ್ತಕಗಳ ಜೊತೆ ಒಡನಾಟ ಬೆಳೆಸಿಕೊಳ್ಳುವುದು ಅವಶ್ಯಕವಾಗಿದೆ ಎಂದು ಹೇಳಿದರು.
ನಂತರ ಮಹಾವಿದ್ಯಾಲಯದ ಐಕ್ಯೂಎಸಿ ಸಂಯೋಜಕ ಡಾ.ಸಿದ್ಧಲಿಂಗರೆಡ್ಡಿ ಮಾತನಾಡಿ, ಮಹಾವಿದ್ಯಾಲಯದ ವಿಶಾಲವಾದ ಗ್ರಂಥಾಲಯದಲ್ಲಿ ಸಾವಿರಾರು ಪುಸ್ತಕಗಳು ಲಭ್ಯವಿವೆ. ವಿದ್ಯಾರ್ಥಿಗಳು ಉಪಯೋಗ ಪಡೆದುಕೊಳ್ಳಬೇಕು. ಪುಸ್ತಕಗಳು ನಿಮ್ಮ ಬದುಕನ್ನು ಬದಲಾಯಿಸುತ್ತವೆ. ಓದಿದಷ್ಟು ಜ್ಞಾನ ಹೆಚ್ಚಾಗುತ್ತದೆ ಎಂದು ಕಿವಿ ಮಾತು ಹೇಳಿದರು.
ನಂತರ ಗ್ರಂಥಪಾಲಕರಾದ ಶ್ರೀಮತಿ ಶಶೀಕಲಾ ಪಾರಾ, ಕನ್ನಡ ಪ್ರಾಧ್ಯಾಪಕ ಡಾ.ಕಾಮೇಶ ದಾಮಾ ಮಾತನಾಡಿದರು. ವಿದ್ಯಾರ್ಥಿನಿ ಕು.ಆಶಾರಾಣಿ ಸ್ವಾಗತಿ, ಪ್ರಾಸ್ತಾವಿಕ ಮತ್ತು ನಿರೂಪಿಸಿದರೆ, ಕು.ಪಲ್ಲವಿ ವಂದಿಸಿದರು. ಮಹಾವಿದ್ಯಾಲಯದ ಶಿಕ್ಷಕ, ಶಿಕ್ಷಕೇತರ ಸಿಬ್ಬಂದಿಯವರು ಮತ್ತು ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು.