
ಬೆಂಗಳೂರು, ಆ.14- ರೇಣುಕಾಸ್ವಾಮಿ ಹತ್ಯೆ ಪ್ರಕರಣದ ಆರೋಪಿಗಳನ್ನು ಬಂಧಿಸಿ ಪೊಲೀಸರು ಪರಪ್ಪನ ಅಗ್ರಹಾರಕ್ಕೆ ಕಳುಹಿಸಿದ್ದಾರೆ.
ಇಂದು ಬೆಳಿಗ್ಗೆ ದರ್ಶನ್ ಪವಿತ್ರಾಗೌಡ ಸೇರಿದಂತೆ 7 ಮಂದಿ ಆರೋಪಿಗಳ ಜಾಮೀನನ್ನು ಸರ್ವೋಚ್ಚ ನ್ಯಾಯಾಲಯ ರದ್ದುಪಡಿಸಿದ ಬೆನ್ನಲ್ಲೇ ಆರೋಪಿಗಳು ಮತ್ತೆ ಜೈಲು ಪಾಲಾಗಿದ್ದಾರೆ.
ನಟ ದರ್ಶನ್, ಪವಿತ್ರಗೌಡ ,ಪ್ರದೂಷ್, ನಾಗರಾಜ್ ಹಾಗೂ ಲಕ್ಷ್ಮಣನನ್ನು ಬಂಧಿಸಿ ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣೆಗೆ ಕರೆತಂದರು. ಅಲ್ಲಿ ಆರೋಗ್ಯ ತಪಾಸಣೆ ಮಾಡಿಸಿ, ಕೋರಮಂಗಲದಲ್ಲಿರುವ 64ನೇ ಸಿಸಿಹೆಚ್ ಕೋರ್ಟ್ನ ನ್ಯಾಯಾಧೀಶರ ಮನೆಗೆ ಕರೆದೊಯ್ದು, ಅವರ ಮುಂದೆ ಹಾಜರುಪಡಿಸಿದರು.
ಈ ವೇಳೆ ಸುಪ್ರೀಂ ಕೋರ್ಟ್ ಜಾಮೀನು ರದ್ದು ಪಡಿಸಿದ ಆದೇಶ ಪ್ರತಿ ನ್ಯಾಯಾಧೀಶರಿಗೆ ಪೊಲೀಸರು ಸಲ್ಲಿಸಿ, ಆದೇಶ ಪಾಲಿಸಲಾಗಿದೆ ಎಂದು ಮಾಹಿತಿ ನೀಡಿದರು. ಬಳಿಕ ಆರೋಪಿಗಳ ಸರ್ಕಾರಿ ದಾಖಲೆಯನ್ನು ಜಡ್ಜ್ ಕೇಳಿ, ಪರಿಶೀಲಿಸಿದರು. ಈ ಪ್ರಕ್ರಿಯೆ ಮುಗಿದ ಬಳಿಕ ಎಲ್ಲಾ ಆರೋಪಿಗಳು ಪರಪ್ಪನ ಅಗ್ರಹಾರ ಜೈಲಿಗೆ ಕಳಿಸಿದರು.
ಮೂರನೇ ಬಾರಿ ಜೈಲು
ಈ ಹಿಂದೆ ಸಹ ದರ್ಶನ್ ಎರಡು ಬಾರಿ ಪರಪ್ಪನ ಅಗ್ರಹಾರ ಜೈಲು ಪಾಲಾಗಿದ್ದರು. ಮೊದಲನೆ ಬಾರಿ 2011ರಲ್ಲಿ ತಮ್ಮ ಪತ್ನಿ ವಿಜಯಲಕ್ಷ್ಮಿಯವರ ಮೇಲೆ ಹಲ್ಲೆ ಮಾಡಿ ದರ್ಶನ್ ಸ್ವಲ್ಪ ದಿನಗಳ ಕಾಲ ಜೈಲಿನಲ್ಲಿದ್ದರು. ಹಿರಿಯ ನಟ ಅಂಬರೀಶ್ ಮಧ್ಯಪ್ರವೇಶಿಸಿ ದರ್ಶನ್ ಹಾಗೂ ವಿಜಯಲಕ್ಷ್ಮೀ ಮಧ್ಯೆ ರಾಜಿ ಮಾಡಿಸಿದ್ದರು.
ಎರಡನೇ ಬಾರಿ ರೇಣುಕಾಸ್ವಾಮಿ ಹತ್ಯೆ ಕೇಸ್ನಲ್ಲಿ ಮೊದಲು ಬಂಧನವಾದ ಬಳಿಕ ಪರಪ್ಪನ ಅಗ್ರಹಾರದಲ್ಲಿ ಇರಿಸಲಾಗಿತ್ತು. ಈ ಜೈಲಿನಲ್ಲಿ ರಾಜಾತಿಥ್ಯದ ಆರೋಪ ಕೇಳಿ ಬಂದ ಬೆನ್ನಲ್ಲೇ ಅವರನ್ನು ಬಳ್ಳಾರಿ ಜೈಲಿಗೆ ರವಾನಿಸಲಾಗಿತ್ತು. ಬಳಿಕ ಅವರು ಹೈಕೋರ್ಟ್ನಿಂದ ಜಾಮೀನು ಪಡೆದು ಹೊಗೆ ಬಂದಿದ್ದರು. ಇದೀಗ ಜಾಮೀನು ರದ್ದಾದ ಬೆನ್ನಲ್ಲೇ ಮೂರನೇ ಬಾರಿಗೆ ದರ್ಶನ್ ಪರಪ್ಪನ ಅಗ್ರಹಾರ ಜೈಲು ಸೇರಿದ್ದಾರೆ.