ಡಿಜೆ ನಿರ್ಬಂಧಕ್ಕೆ ಬಿವೈವಿ ಆಕ್ರೋಶ

ಬೆಂಗಳೂರು,ಆ.೩೧:ಗಣೇಶೋತ್ಸವದಲ್ಲಿ ಡಿಜೆ ನಿರ್ಬಂಧಿಸಿರುವ ರಾಜ್ಯಸರ್ಕಾರದ ತೀರ್ಮಾನಕ್ಕೆ ಆಕ್ರೋಶ ವ್ಯಕ್ತಪಡಿಸಿರುವಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ರಾಜ್ಯಸರ್ಕಾರ ಸಾಂಸ್ಕೃತಿಕ ಚಟುವಟಿಕೆಗಳನ್ನು ಹತ್ತಿಕ್ಕುತ್ತಿದೆ ಎಂದು ದೂರಿದ್ದಾರೆ.


ಈ ಬಗ್ಗೆ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಟ್ವೀಟ್‌ಮಾಡಿರುವ ಅವರು, ರಾಜ್ಯದಲ್ಲಿ ಪೊಲೀಸ್ ವ್ಯವಸ್ಥೆ ಸಂಪೂರ್ಣ ದಿಕ್ಕು ತಪ್ಪುತ್ತಿದೆ. ಹಿಂದೂ ಉತ್ಸವಗಳು, ಧಾರ್ಮಿಕ ಆಚರಣೆಗಳನ್ನು ಅಪಮಾನಿಸುತ್ತಿರುವ ಪ್ರಕರಣಗಳು ಮೇಲಿನಿಂದ ಮೇಲೆ ವರದಿಯಾಗುತ್ತಿವೆ ಎಂದು ಅವರು ತಿಳಿಸಿದ್ದಾರೆ.


ಗಣೇಶೋತ್ಸವದ ಸಾಂಪ್ರಾದಾಯಿಕ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಹೆಚ್ಚುವರಿ ಅವಧಿಯನ್ನು ವಿಸ್ತರಿಸಬೇಕು ಎಂದು ಕಳೆದ ವಿಧಾನಸಭಾ ಅಧಿವೇಶನದಲ್ಲಿಯೇ ಚರ್ಚೆಯಾಗಿ ಸರ್ಕಾರ ಸಮ್ಮತಿಯನ್ನೂ ವ್ಯಕ್ತಪಡಿಸಿದೆ. ಆದರೂ ಪೊಲೀಸರು ಗಣೇಶೋತ್ಸವದ ಮೇಲೆ ಕೆಂಗಣ್ಣು ಬೀರುತ್ತಿರುವುದು ಅತ್ಯಂತ ಖಂಡನೀಯ ಎಂದಿದ್ದಾರೆ.


ದಕ್ಷಿಣ ಕನ್ನಡ ಜಿಲ್ಲೆಯ ಪಾಣೆ ಮಂಗಳೂರಿನಲ್ಲಿ ನಿಗದಿತ ಸಮಯಕ್ಕೆ ಮುನ್ನವೇ ಪರಂಪರೆಯಿಂದ ನಡೆದು ಬಂದ ಯಕ್ಷಗಾನ ಪ್ರದರ್ಶನವನ್ನು ನಿಲ್ಲಿಸುವ ಮೂಲಕ ಹಿಂದೂ ಧಾರ್ಮಿಕ ಶ್ರದ್ಧೆ ಹಾಗೂ ಸಂಸ್ಕೃತಿಯ ಮೇಲೆ ದೌರ್ಜನ್ಯ ನಡೆಸಿದೆ. ಮತ್ತೊಂದು ಕಡೆ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ನಾಡದೇವತೆ ಚಾಮುಂಡೇಶ್ವರಿ ದೇವಸ್ಥಾನ ಹಿಂದೂಗಳಿಗೆ ಸೇರಿದ್ದಲ್ಲ ಎಂದು ಉಪಮುಖ್ಯಮಂತ್ರಿ ಹೇಳುತ್ತಾರೆ. ಅದೇ ಸಾಂಸ್ಕೃತಿಕ ನಗರಿಯ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಉದ್ಯಮಿ ದಂಪತಿಗಳ ರೀಲ್ಸ್ ಮಾಡಲು ಅವಕಾಶ ಮಾಡಿಕೊಟ್ಟು ಸಾಂಸ್ಕೃತಿಕ ನಗರಿಯ ಘನತೆಯನ್ನು ಕುಗ್ಗಿಸುತ್ತಿದೆ ಎಂದೂ ಟೀಕಿಸಿದ್ದಾರೆ.


ಹಿಂದೂ ಧಾರ್ಮಿಕ ಶ್ರದ್ಧೆ ಹಾಗೂ ನಾಡಿನ ಸಂಸ್ಕೃತಿಯನ್ನು ಅವಮಾನಿಸುವುದು ಕಾಂಗ್ರೆಸ್ ಸರ್ಕಾರದ ಒಂದು ಭಾಗವಾಗಿದೆ ಎಂದು ಅವರು ದೂರಿದ್ದಾರೆ.