
ಕಲಬುರಗಿ,ಸೆ.1-ಕಳೆದ 20 ರಂದು ರಾತ್ರಿ 10.30ರ ಸುಮಾರಿಗೆ ನಗರದ ನ್ಯೂ ಜೇವರ್ಗಿ ಬ್ರಿಡ್ಜ್ ಹತ್ತಿರ ಆಟೋದಲ್ಲಿ ಹೋಗುತ್ತಿದ್ದಾಗ ಜ್ಯೋತಿಷಿಯೊಬ್ಬರನ್ನು ಸುಲಿಗೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಅಪ್ರಾಪ್ತ ಸೇರಿ ಐವರನ್ನು ಅಶೋಕ ನಗರ ಪೊಲೀಸರು ಬಂಧಿಸಿದ್ದಾರೆ.
ಜ್ಯೋತಿಷಿ ಪರಶುರಾಮ ವಾಸ್ಟರ್ ಅವರು ನ್ಯೂ ಜೇವರ್ಗಿ ರಸ್ತೆಯ ಬ್ರಿಡ್ಜ್ ಹತ್ತಿರ ಆಟೋದಲ್ಲಿ ಹೋಗುತ್ತಿದ್ದಾಗ ಆಟೋ ಚಾಲಕ ಹಾಗೂ ಆಟೋದಲ್ಲಿ ಇದ್ದ ಇತರ ನಾಲ್ವರು ಸೇರಿ ಅವರ ಬಳಿ ಇದ್ದ 60 ಸಾವಿರ ರೂ.ಮೌಲ್ಯದ 8 ಗ್ರಾಂ.ಬಂಗಾರದ ರಿಂಗ್, 40 ಸಾವಿರ ರೂ.ಮೌಲ್ಯದ 5 ಗ್ರಾಂ.ಬಂಗಾರದ ರಿಂಗ್ ಮತ್ತು 3 ಸಾವಿರ ರೂ.ನಗದನ್ನು ಸುಲಿಗೆ ಮಾಡಿದ್ದರು. ಈ ಸಂಬಂಧ ಪರಶುರಾಮ ವಾಸ್ಟರ್ ಅವರು ಅಶೋಕ ನಗರ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದರು.
ಈ ದೂರಿನ ಅನ್ವಯ ಡಿಸಿಪಿಗಳಾದ ಕನಿಕಾ ಸಿಕ್ರಿವಾಲ್, ಪ್ರವೀಣ್ ಹೆಚ್.ನಾಯಕ್ ಅವರ ಮಾರ್ಗದರ್ಶನದಲ್ಲಿ ಕಲಬುರಗಿ ದಕ್ಷಿಣ ಉಪ ವಿಭಾಗದ ಸಹಾಯಕ ಪೊಲೀಸ್ ಆಯುಕ್ತ ಶರಣಬಸಪ್ಪ ಹೆಚ್.ಸುಬೇದಾರ ಅವರ ನೇತೃತ್ವದಲ್ಲಿ ಅಶೋಕ ನಗರ ಪೊಲೀಸ್ ಠಾಣೆ ಪಿಐ ಅರುಣಕುಮಾರ, ಸಿಬ್ಬಂದಿಗಳಾದ ವೈಜನಾಥ, ಮಲ್ಲಿಕಾರ್ಜುನ ಮೇತ್ರೆ, ಶಿವಪ್ರಕಾಶ, ನೀಲಕಂಠರಾಯ, ಮುಜಾಹಿದ್, ಚಂದ್ರಶೇಖರ, ಸಂತೋಷ ಮತ್ತು ಹರಿಕಿಶೋರ್ ಅವರನ್ನು ಒಳಗೊಂಡ ತಂಡ ರಚಿಸಲಾಗಿತ್ತು. ಈ ತಂಡ ತನಿಖೆ ನಡೆಸಿ ಎಪಿಎಂಸಿ ಮಾರ್ಕೆಟ್ ಹತ್ತಿರದ ಹಮಾಲ್ ಕಾಲೋನಿಯ ಸಿದ್ಧಾರೂಢ ತಂದೆ ಕಲ್ಯಾಣರಾವ ಆಲಗೂಡ (21), ಕಮಲನಗರದ ಮಹೇಶ ತಂದೆ ವೆಂಕಟ ಜಾನೇಕರ್ (18), ಹಮಾಲ್ ಕಾಲೋನಿಯ ಜಯಪ್ರಕಾಶ ತಂದೆ ರಮೇಶ ದೇವದುರ್ಗ (18), ಅಖಿಲೇಶ ತಂದೆ ಶಿವಾನಂದ ನಾಟೀಕರ್ (19) ಮತ್ತು ಕಾನೂನು ಸಂಘರ್ಷಕ್ಕೆ ಒಳಗಾದ ಒಬ್ಬ ಬಾಲಕ ಸೇರಿ ಐವರನ್ನು ಬಂಧಿಸಿ 80 ಸಾವಿರ ರೂ.ಮೌಲ್ಯದ 8 ಗ್ರಾಂ.ನ ಉಂಗುರ, ಬ್ರಹ್ಮಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದ ಪ್ರಕರಣಕ್ಕೆ ಸಂಬಂಧಿಸಿದಂತೆ 1 ಲಕ್ಷ ರೂ.ಮೌಲ್ಯದ 10 ಗ್ರಾಂ.ಬಂಗಾರದ ಚೈನ್ ಜಪ್ತಿ ಮಾಡಿ ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ಸುಲಿಗೆ ಪ್ರಕರಣದ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿರುವ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿ ಕಾರ್ಯವನ್ನು ನಗರ ಪೊಲೀಸ್ ಆಯುಕ್ತರಾದ ಡಾ.ಶರಣಪ್ಪ ಎಸ್.ಡಿ.ಶ್ಲಾಘಿಸಿದ್ದಾರೆ.