
ದಾವಣಗೆರೆ,ಏ.೪-ದೇಶದಲ್ಲಿ ಜಾರಿಗೆ ಬರಲಿರುವ ಮಹಿಳಾ ಮೀಸಲಾತಿ ಮತ್ತು ಜನಗಣತಿ ಪ್ರಕ್ರಿಯೆ ಬಳಿಕ ಕರ್ನಾಟಕದ ವಿಧಾನಸಭಾ ಕ್ಷೇತ್ರಗಳ ಸಂಖ್ಯೆಯಲ್ಲಿಯೂ ಬದಲಾವಣೆಯಾಗುವ ಸಾಧ್ಯತೆಯಿದೆ ಎಂದು ಗೃಹ ಸಚಿವ ಡಾ. ಜಿ. ಪರಮೇಶ್ವರ್ ತಿಳಿಸಿದರು.
ಸುದ್ಧಿಗಾರರೊಂದಿಗೆ ಮಾನಾಡಿದ ಅವರು, ಪ್ರಸ್ತುತ ಕರ್ನಾಟಕದಲ್ಲಿ ೨೨೪ ವಿಧಾನಸಭಾ ಕ್ಷೇತ್ರಗಳಿದ್ದು, ಪುನರ್ವಿಂಗಡಣೆ ನಂತರ ಈ ಸಂಖ್ಯೆಯಲ್ಲಿ ವ್ಯತ್ಯಾಸವಾಗಲಿದೆ.
ಪ್ರಸ್ತುತ ೨.೫ ಲಕ್ಷ ಮತದಾರರಿಗೆ ಒಂದು ಕ್ಷೇತ್ರ ಎಂಬ ನಿಯಮ ಇದೆ. ಈ ಸಂಖ್ಯೆ ಹೆಚ್ಚಾದರೆ ಸಹಜವಾಗಿಯೇ ಕ್ಷೇತ್ರಗಳ ಸಂಖ್ಯೆ ಕಡಿಮೆಯಾಗಲಿದೆ. ಒಂದು ವೇಳೆ ಮತದಾರರ ಸಂಖ್ಯೆಯನ್ನು ೧.೫೦ಲಕ್ಷ ಅಥವಾ ೧.೭೫ ಲಕ್ಷಕ್ಕೆ ಸೀಮೀತಗೊಳಿಸಿದರೆ ಕ್ಷೇತ್ರಗಳ ಸಂಖ್ಯೆಯಲ್ಲಿ ಹೆಚ್ಚಳವಾಗಬಹುದು ಎಂದರು.
ಮಹಿಳಾ ಮೀಸಲಾತಿ ವಿಧೇಯಕವು ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ಅನುಮೋದನೆ ಪಡೆದ ನಂತರ, ಅದರ ಅನುಷ್ಠಾನವು ಮುಂಬರುವ ಜನಗಣತಿಯ ಮೇಲೆ ಅವಲಂಬಿತವಾಗಿದೆ. ಕೇಂದ್ರ ಸರ್ಕಾರವು ’ಒಂದು ದೇಶ, ಒಂದು ಚುನಾವಣೆ’ ನೀತಿಯನ್ನು ಜಾರಿಗೆ ತರಲು ಉದ್ದೇಶಿಸಿದ್ದು, ಇದರ ಭಾಗವಾಗಿಯೇ ಕ್ಷೇತ್ರಗಳ ಪುನರ್ವಿಂಗಡಣೆ ಪ್ರಕ್ರಿಯೆ ನಡೆಯಲಿದೆ. ಇದು ರಾಜ್ಯದ ರಾಜಕೀಯ ಭೂಪಟದಲ್ಲಿ ಹೊಸ ಬದಲಾವಣೆಗಳಿಗೆ ನಾಂದಿ ಹಾಡಲಿದೆ ಎಂದು ಅಭಿಪ್ರಾಯಿಸಿದರು
























