
ಗದಗ,ಫೆ.22: ಸಂತ ಕವಿ ಸರ್ವಜ್ಞರ ವಿಚಾರಧಾರೆಗಳನ್ನು ಪ್ರತಿಯೊಬ್ಬರೂ ಬದುಕಿನಲ್ಲಿ ಅಳವಡಿಸಿಕೊಂಡು ಸಮಾಜ ಸುಧಾರಣೆಗೆ ಶ್ರಮಿಸಬೇಕೆಂದು ಅಪರ ಜಿಲ್ಲಾಧಿಕಾರಿ ದುರಗೇಶ ಕೆ.ಆರ್. ಹೇಳಿದರು.
ಗದಗ ಜಿಲ್ಲಾಡಳಿತ,ಜಿಲ್ಲಾ ಪಂಚಾಯತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಇವರ ಸಹಯೋಗದಲ್ಲಿ ಜಿಲ್ಲಾಡಳಿತ ಭವನದ ಅಡಿಟೋರಿಯಂ ಹಾಲ್ನಲ್ಲಿ ಜರುಗಿದ ಸಂತ ಕವಿ ಸರ್ವಜ್ಞ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಪ್ರತಿಯೊಬ್ಬರೂ ಕವಿ ಸರ್ವಜ್ಞ ಅವರ ವಚನಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಸಮಾಜದಲ್ಲಿ ಅವರ ಆದರ್ಶಗಳನ್ನು ಪಾಲಿಸಬೇಕು. ಈಗಿನ ಮಕ್ಕಳಿಗೆ ಸರ್ವಜ್ಞ ಅವರ ವಚನಗಳು ಮತ್ತು ಸಂಸ್ಕೃತಿ ಮತ್ತು ಮೌಲ್ಯಗಳ ಬಗ್ಗೆ ಅರಿವು ಮೂಡಿಸುವ ಕೆಲಸವಾಗಬೇಕು. ಸರ್ವಜ್ಞ ಅವರು ತಮ್ಮ ವಚನಗಳ ಮೂಲಕ ಸಮಾಜದಲ್ಲಿನ ಅಂಕುಡೊಂಕು ಮೂಡನಂಬಿಕೆ ಹೋಗಲಾಡಿಸಿ ಲೋಕಕಲ್ಯಾಣಕ್ಕೆ ಶ್ರಮಿಸಿದವರಾಗಿದ್ದಾರೆ. ಪಾಲಕರು ತಮ್ಮ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡುವ ಮೂಲಕ ಸಮಾಜದಲ್ಲಿ ಉನ್ನತ ಸ್ಥಾನ ಪಡೆಯಲು ಶ್ರಮಿಸಬೇಕು ಎಂದರು.
ಸಂಪನ್ಮೂಲ ವ್ಯಕ್ತಿಗಳಾದ ಉಪನ್ಯಾಸಕ ಶಿವಾನಂದ ಚಕ್ರಸಾಲಿ ಮಾತನಾಡಿ ಸಂತ ಕವಿ ಸರ್ವಜ್ಞ ಸುಮಾರು 16 ನೇ ಶತಮಾನದಲ್ಲಿ ಜನಿಸಿದವರು. ಸರ್ವಜ್ಞ, ಹಾವೇರಿ ಜಿಲ್ಲೆಯ ಹೀರೆಕೆರೂರು ತಾಲೂಕಿನ ಅಬಲೂರು ಗ್ರಾಮದವರು. ತಂದೆ ಬಸವರಸ ಮತ್ತು ತಾಯಿ ಮಾಳೆಯ ಪುತ್ರನಾಗಿ ಜನಿಸಿದ ಇವರ ಮೂಲ ಹೆಸರು ಪುಷ್ಪದತ್ತ, ಲೋಕಸಂಚಾರ ಮಾಡುತ್ತಾ, ತಮ್ಮ ಅನುಭವದೊಂದಿಗೆ ಬೆಂದು, ಜ್ಞಾನವನ್ನೇ ಉಸಿರಾಗಿಸಿಕೊಂಡು ಅವರು ‘ಸರ್ವಜ್ಞ’ ರಾಗಿ ರೂಪುಗೊಂಡರು.
ಸರ್ವಜ್ಞನ ವಿಚಾರಗಳು ಇಂದಿಗೂ ಪ್ರಸ್ತುತ. ಸಮಾಜದಲ್ಲಿನ ಜಾತಿ ಪದ್ಧತಿ, ಧಾರ್ಮಿಕ ಅಸಹಿಷ್ಣುತೆ, ಮತ್ತು ಮೌಲ್ಯಗಳ ಕುಸಿತವನ್ನು ಸರಿಪಡಿಸಲು ಸರ್ವಜ್ಞನ ತ್ರಿಪದಿಗಳು ‘ದಿಕ್ಸೂಚಿ’ಯಂತೆ ಇಂದಿಗೂ ಕೆಲಸ ಮಾಡುತ್ತವೆ. ನಮ್ಮ ಶಿಕ್ಷಣ ವ್ಯವಸ್ಥೆ ಕೇವಲ ಪುಸ್ತಕದ ಜ್ಞಾನ ನೀಡುತ್ತಿದೆ, ಆದರೆ ಸರ್ವಜ್ಞ ಹೇಳಿದ “ಅನುಭವದ ಶಿಕ್ಷಣ”ನಮಗೆ ಬೇಕಾಗಿದೆ. “ಮಾತು ಬಲ್ಲವನಿಗೆ ಜಗಳವಿಲ್ಲ, ಊಟ ಬಲ್ಲವನಿಗೆ ರೋಗವಿಲ್ಲ” ಎಂಬ ಅವರ ಮಾತು ಇಂದಿನ ಒತ್ತಡದ ಬದುಕಿಗೆ ಮತ್ತು ಆರೋಗ್ಯಕ್ಕೆ ಸಂಜೀವಿನಿಯಂತಿದೆ ಎಂದರು.
ಇದೇ ಸಂದರ್ಭದಲ್ಲಿ ಎಸ್.ಎಸ್.ಎಲ್.ಸಿ ಪಿಯುಸಿ ಪರೀಕ್ಷೆಯಲ್ಲಿ ಅತೀ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಹಾಗೂ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಮುದಾಯದ ಸಾಧಕರಿಗೆ ಗೌರವಿಸಿ ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಅಕ್ಬರಸಾಬ್ ಬಬರ್ಚಿ, ವಿ.ಆರ್. ಕುಂಬಾರ, ಮುರಿಗೆಪ್ಪ ಕೇರಿ, ಯಲ್ಲಪ್ಪ ಕುಂಬಾರ, ನಿಂಗಪ್ಪ ಕುಂಬಾರ, ಶರಣಮ್ಮ, ಈಶ್ವರಪ್ಪ ಕುಂಬಾರ, ಸಮಾಜದ ಮುಖಂಡರು, ಗಣ್ಯರು, ಮಹಿಳೆಯರು, ಸಾರ್ವಜನಿಕರರು ಉಪಸ್ಥಿತರಿದ್ದರು. ವೀರಣ್ಣ ಅಂಗಡಿ ಹಾಗೂ ಸಂಗಡಿಗರು ನಾಡಗೀತೆ ಪ್ರಸ್ತುತಿಸಿದರು.



























