ಸಂಸ್ಕಾರ ರೂಪಿಸಲು ಧಾರ್ಮಿಕ ಕಾರ್ಯಕ್ರಮ ಅಗತ್ಯ-ರಮೇಶ್‌ಕುಮಾರ್

ಕೋಲಾರ,ಜ,೧೬- ಮನುಷ್ಯತ್ವ, ಸಂಸ್ಕಾರ ರೂಪಿಸಲು ಶಾಲೆಗಳಿಂದ ಮಾತ್ರವೇ ಸಾಧ್ಯವಿಲ್ಲ, ಧಾರ್ಮಿಕ ಚಟುವಟಿಕೆಗಳು ಸಹಾ ಸೌಹಾರ್ದತೆ ಮೂಡಿಸಿ ಬಲವಾದ ಸಮಾಜ ನಿರ್ಮಾಣಕ್ಕೆ ಸಹಕಾರಿಯಾಗಿವೆ ಎಂದು ವಿಧಾನಸಭೆ ಮಾಜಿ ಸಭಾಧ್ಯಕ್ಷ ಕೆ.ಆರ್.ರಮೇಶ್‌ಕುಮಾರ್ ಅಭಿಪ್ರಾಯಪಟ್ಟರು.


ನಗರದ ಗಲ್‌ಪೇಟೆಯ ಚಾಮುಂಡೇಶ್ವರಿ ದೇವಾಲಯದಲ್ಲಿ ೫೫ನೇ ವರ್ಷದ ಧನುರ್ಮಾಸದ ನಗರ ಸಂಕೀರ್ತನೆಯ ಸಮಾರೋಪ ಸಮಾರಂಭದಲ್ಲಿ ಇಡೀ ತಿಂಗಳು ಭಜನೆ,ಸಂಕೀರ್ತನೆಯಲ್ಲಿ ಪಾಲ್ಗೊಂಡ ಮಕ್ಕಳಿಗೆ ಬಹುಮಾನ ವಿತರಿಸಿ ಅವರು ಮಾತನಾಡಿದರು.


ಮಕ್ಕಳಲ್ಲಿ ಮೊಬೈಲ್ ಗೀಳು ಬಿಡಿಸುವುದೇ ಕಷ್ಟ ಹೀಗಿರುವಾಗ ಧನುರ್ಮಾಸದ ಚುಮು ಚುಮು ಚಳಿಯನ್ನು ಲೆಕ್ಕಸದೇ ನಗರ ಸಂಕೀರ್ತನೆ ನಡೆಸುವ ಮಕ್ಕಳು,ಹಿರಿಯರು ತಮ್ಮ ಸಂಸ್ಕೃತಿ, ಸಂಪ್ರದಾಯವನ್ನು ಉಳಿಸಿಕೊಂಡು ಬಂದಿದ್ದಾರೆ, ಇದು ಮಕ್ಕಳಿಗೆ ಮುಂದಿನ ದಿನಗಳಲ್ಲಿ ಬೆಳಗ್ಗೆ ಬೇಗ ಎದ್ದು ವ್ಯಾಯಾಮ,ಓದುವ ಅಭ್ಯಾಸವನ್ನು ಸುಲಭಗೊಳಿಸುತ್ತದೆ ಎಂದು ಅಭಿಪ್ರಾಯಪಟ್ಟರು.


ದಿವಂಗತ ಅನಂತರಾಜು ಅವರು ಕಳೆದ ೧೯೬೨ರಿಂದ ಈ ಕಾರ್ಯಕ್ರಮ ಮಾಡಿಕೊಂಡು ಬಂದಿದ್ದು, ಅವರ ಕುಟುಂಬ ಮುಂದುವರೆಸಿದೆ, ನನ್ನಲ್ಲಿ ದ್ವೇಷವೂ ಇಲ್ಲ, ಸಮಾಧಾನವೂ ಇಲ್ಲ ಹೆಪ್ಪುಗಟ್ಟಿದ ಮನಸ್ಥಿತಿಯಾಗಿದೆ ಎಂದ ಅವರು, ಮಾಜಿ ಸಭಾಪತಿ ಸುದರ್ಶನ್ ಮತ್ತು ನಾನು ಒಡಹುಟ್ಟಿದವರಿಗಿಂತ ಹೆಚ್ಚು, ನಾವು ಅತ್ಮವಂಚಕ ಇತಿಹಾಸದಲ್ಲಿ ಎಲ್ಲವನ್ನು ನುಂಗಿಕೊಂಡು ಬಂದಿದ್ದೇವೆ ಎಂದರು.


ಬದುಕಿದ್ದಾಗ ಬಾಯಿಗೆ ಬಂದಂತೆ ಬೈದು, ಸತ್ತಮೇಲೆ ತಿಥಿ ಮಡುವ ಜನ ಇದ್ದಾರೆ ಅನುಭವವನ್ನು ತೋಡಿಕೊಂಡ ಅವರು, ಒಟ್ಟಾರೆ ಸೌಹಾರ್ದತೆಯ ಸಮಾಜ ಮಾತ್ರ ಬಲವಾಗಿರುತ್ತದೆ ಎಂದರು.


ಜಿಲ್ಲೆಯ ಅಭಿವೃದ್ದಿಗೆ ಸೋಲಾಗಿದೆ
ಮಾಜಿ ಸಭಾಪತಿ ವಿ.ಆರ್.ಸುದರ್ಶನ್ ಮಾತನಾಡಿ, ಮಾಜಿ ಸ್ಪೀಕರ್ ರಮೇಶ್ ಕುಮಾರ್ ಅವರ ಸೋಲು ಜಿಲ್ಲೆಯ ಅಭಿವೃದ್ದಿಗೆ ಆದ ಸೋಲಾಗಿದೆ, ೧೯೭೮ರಿಂದ ಶಾಸಕರಾಗಿ ಸಿಎಂ ಸಿದ್ದರಾಮಯ್ಯರಿಗಿಂತಲೂ ಹಿರಿಯರಾದ ಅವರ ಅಪಾರ ಅನುಭವ ಹೊಂದಿರುವ ರಮೇಶ್‌ಕುಮಾರ್ ಅವರ ಅನುಭವ ಈ ರಾಜ್ಯಕ್ಕೆ ಅಗತ್ಯವಿತ್ತು ಎಂದರು.


ಸಂಕ್ರಾಂತಿ ಸರ್ವರಲ್ಲೂ ಸೌಹಾರ್ದತೆ ತರುವ ಹಬ್ಬವಾಗಿದೆ, ಗ್ರಾಮೀಣ ಭಾಗದಲ್ಲಿ ಇಡೀ ವರ್ಷ ದುಡಿಮೆ ಮಾಡಿ ನಮಗೆ ಅನ್ನ ನೀಡಲು ನೆರವಾಗುವ ರಾಸುಗಳನ್ನು ಪೂಜಿಸುವ ವಿಶಿಷ್ಟ ಸಂಪ್ರದಾಯ ಇನ್ನು ಉಳಿದಿರುವುದು ಸಂತಸದ ವಿಷಯ ಎಂದರು.


ಶ್ರೀ ಚಾಮುಂಡೇಶ್ವರಿ ದೇವಾಲಯ ಟ್ರಸ್ಟ್ ಅಧ್ಯಕ್ಷ ರಾಮಕೃಷ್ಣ ರಾಜು ಅಧ್ಯಕ್ಷತೆ ವಹಿಸಿದ್ದು, ಪ್ರತಿವರ್ಷವೂ ಧನುರ್ಮಾಸದ ತಿಂಗಳ ಪೂರ್ತಿ ಮಕ್ಕಳು ಚಳಿಯಲ್ಲಿ ಮುಂಜಾನೆ ಭಜನೆ ಮಾಡುತ್ತಾ ನಗರದಲ್ಲಿ ಸಾಗುವ ಸಂಪ್ರದಾಯ ಮುಂದುವರೆಸಿಕೊಂಡು ಬಂದಿದ್ದೇವೆ, ಇದರಿಂದ ಒಳ್ಳೆಯದಾಗುತ್ತದೆ ಎಂಬ ನಂಬಿಕೆ ಇದೆ, ಇದನ್ನು ಮುಂದುವರೆಸುತ್ತೇವೆ ಎಂದು ತಿಳಿಸಿದರು.


ದೇವಾಲಯ ಸಮಿತಿಯ ರಾಮಸ್ವಾಮಿ ರಾಜು, ಚಾಮುಂಡೇಶ್ವರಿ ದೇವಾಲಯಕ್ಕೆ ಬಣ್ಣ ಬಳಿಯಲು ಸುಮಾರು ೪.೫ ಲಕ್ಷ ಕೂಲಿ, ಬಣ್ಣಗಳಿಗೆ ೧.೭೫ ಲಕ್ಷಕ್ಕೂ ಹೆಚ್ಚು ಹಣ ಖರ್ಚಾಗುವ ಸಾಧ್ಯತೆ ಇದ್ದು, ಇದನ್ನು ದಾನಿಗಳ ನೆರವಿನಿಂದ ಕ್ರೋಢೀಕರಿಸಲಾಗುತ್ತಿದೆ, ಅನಂತರಾಜು, ಲಕ್ಷ್ಮಣರಾಜು, ವಿಜುಯಕುಮಾರ್, ಕೃಷ್ಣಪ್ಪ ಕುಟುಂಬದವರು ಮತ್ತಿತರರು ನೆರವು ನೀಡಲು ಮುಂದೆ ಬಂದಿದ್ದಾರೆ ಎಂದರು.


ಈ ಸಂದರ್ಭದಲ್ಲಿ ನಗರಸಭೆ ಮಾಜಿ ಅಧ್ಯಕ್ಷ ಡಾ.ಗೋವಿಂದರಾಜು, ಸದಸ್ಯ ಅಂಬರೀಷ್, ಗಟ್ಟಹಳ್ಳಿ ಆಶ್ರಯದ ಸೋಮಣ್ಣ, ಮುಖಂಡರಾದ ವಿವೇಕಾನಂದ,ಉತ್ತನೂರು ಶ್ರೀನಿವಾಸ್,ರಾಜೇಶ್‌ಸಿಂಗ್, ಗಂಗಮ್ಮನಪಾಳ್ಯ ರಾಮಯ್ಯ,ಸಾಹಿಬ್, ಬೆಳಗಾನಹಳ್ಳಿ ಮುನಿವೆಂಕಟಪ್ಪ, ಹೆಚ್.ಎಂ.ಮಂಜುನಾಥ್, ಭಜನೆ ಗುರು ನಾರಾಯಣಪ್ಪ, ನಾಗರಾಜ್, ಕೆ.ಎಂ.ಶ್ರೀನಿವಾಸ್, ಪ್ಲಂಬರ್ ವೆಂಕಟೇಶ್, ರಾಮಣ್ಣ ಮತ್ತಿತರಿದ್ದು, ಪಿ.ವಿ.ಸುರೇಶ್ ನಿರೂಪಿಸಿದರು. ಭಜನಾ ಮಂಡಳಿಯ ೬೦ ಮಕ್ಕಳು ಗಲ್ ಪೇಟೆ ಭಕ್ತಾದಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.