
ಬೀದರ್: ಮಾ.೨೪:ಹುತಾತ್ಮ ದಿನಾಚರಣೆ ಅಂಗವಾಗಿ ಬಸವಕಲ್ಯಾಣ ನಗರದಲ್ಲಿ ವಿದ್ಯಾರ್ಥಿಗಳು, ಸಂಘ-ಸAಸ್ಥೆಗಳ ಪ್ರತಿನಿಧಿಗಳಿಂದ ಸೋಮವಾರ ಪಾದಯಾತ್ರೆ ನಡೆಯಿತು.
ಬಸವೇಶ್ವರ ವೃತ್ತದಿಂದ ಆರಂಭವಾದ ಪಾದಯಾತ್ರೆ ಹರಳಯ್ಯ ವೃತ್ತದ ಮಾರ್ಗವಾಗಿ ಹಾಯ್ದು ಎಸ್.ಎಸ್.ಕೆ. ಬಸವೇಶ್ವರ ಕಾಲೇಜಿಗೆ ತಲುಪಿ ಸಮಾರೋಪಗೊಂಡಿತು.
ತಲೆ ಮೇಲೆ ಟೊಪ್ಪಿಗೆ ಧರಿಸಿದ್ದ ಯುವ ಜನರು ಹಾಗೂ ವಿದ್ಯಾರ್ಥಿಗಳು ಕೈಯಲ್ಲಿ ರಾಷ್ಟ್ರಧ್ವಜ, ಹುತಾತ್ಮರ ಭಾವಚಿತ್ರದ ಫಲಕ ಹಿಡಿದುಕೊಂಡಿದ್ದರು. ಭಾರತ ಮಾತೆಗೆ ಜಯವಾಗಲಿ ಎನ್ನುವ ಘೋಷಣೆ ಮೊಳಗಿಸಿದರು.
ಹುಲಸೂರು ತಹಶೀಲ್ದಾರ್ ಶಿವಾನಂದ ಮೇತ್ರೆ ಪಾದಯಾತ್ರೆಗೆ ಚಾಲನೆ ನೀಡಿದರು.
ಪಾದಯಾತ್ರೆ ನಂತರ ಎಸ್.ಎಸ್.ಕೆ. ಬಸವೇಶ್ವರ ಕಾಲೇಜಿನಲ್ಲಿ ನಡೆದ ಹುತಾತ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಮೇರಾ ಯುವ ಭಾರತನ ಜಿಲ್ಲಾ ಯುವ ಅಧಿಕಾರಿ ಮಯೂರಕುಮಾರ ಗೋರಮೆ ಮಾತನಾಡಿ, ದೇಶದ ಸ್ವಾತಂತ್ರ್ಯಕ್ಕಾಗಿ ತ್ಯಾಗ ಹಾಗೂ ಬಲಿದಾನ ನೀಡಿದವರನ್ನು ಯಾರೂ ಮರೆಯಬಾರದು. ಯುವಕರು ದೇಶದ ಹಿತ ರಕ್ಷಣೆಗೆ ಸದಾ ಸಿದ್ಧರಿರಬೇಕು ಎಂದು ಹೇಳಿದರು.
ಚಿಂತಕ ಲೋಕೇಶ್ ಮೋಳಕೇರೆ ಮಾತನಾಡಿ, ಯುವಜನರು ಸ್ವಾತಂತ್ರ್ಯ ಹೋರಾಟಗಾರರ ಆದರ್ಶಗಳನ್ನು ಮೈಗೂಡಿಸಿಕೊಳ್ಳಬೇಕು ಎಂದು ತಿಳಿಸಿದರು.
ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯ ಡಾ. ಶಿವಕುಮಾರ ಪಾಟೀಲ ಮಾತನಾಡಿ, ಯುವಕರು ದೇಶಾಭಿಮಾನ ಬೆಳೆಸಿಕೊಳ್ಳಬೇಕು ಎಂದು ಹೇಳಿದರು.
ಭಗತ್ಸಿಂಗ್ ಯುವಕ ಸಂಘದ ಅಧ್ಯಕ್ಷ ಸೋಮನಾಥ ಪೂಜಾರಿ, ಪ್ರೊ. ವಿಠೋಬ ಡೊಣ್ಣೆಗೌಡರ, ಡಾ. ಸುರೇಶ್ ಎಚ್.ಆರ್, ಡಾ. ಮಲ್ಲಿಕಾರ್ಜುನ, ಶಾಂತಕುಮಾರ ಭೂರೆ, ಮಹಾದೇವ ದೇಗಾಂವ್ ಮತ್ತಿತರರು ಪಾಲ್ಗೊಂಡಿದ್ದರು. ದೀಪಿಕಾ ಬಿರಾದಾರ ನಿರೂಪಿಸಿದರು.
ಕೇಂದ್ರ ಯುವಜನ ವ್ಯವಹಾರ ಮತ್ತು ಕ್ರೀಡಾ ಸಚಿವಾಲಯ ಅಧೀನದ ಮೇರಾ ಯುವ ಭಾರತ್ ಹಾಗೂ ಎಸ್.ಎಸ್.ಕೆ. ಬಸವೇಶ್ವರ ಕಾಲೇಜು ಸಹಯೋಗದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು.






















