
ಕಲಬುರಗಿ,ಅ.26-ರಾಷ್ಟ್ರೀಯ ಸೇವಾ ಯೋಜನೆಯು 24 ಸಪ್ಟೆಂಬರ್, 1969ರಲ್ಲಿ ಜಾರಿಗೆ ಬಂದು ಇಂದು ಕರ್ನಾಟಕ ರಾಜ್ಯದಲ್ಲಿ 4,75,000 ಎನ್ಎಸ್ಎಸ್ ಸ್ವಯಂ ಸೇವಕರಿದ್ದಾರೆ. ಪದವಿ ಪೂರ್ವ ಶಿಕ್ಷಣ ಇಲಾಖೆಯಲ್ಲಿ 75000 ಎನ್ಎಸ್ಎಸ್ ಸ್ವಯಂಸೇವಕರು ನೋಂದಣಿಯಾಗಿದ್ದಾರೆ. ರಾಷ್ಟ್ರ ಕಟ್ಟುವ ಕೆಲಸದಲ್ಲಿ ಎನ್ಎಸ್ಎಸ್ ಪ್ರಮುಖ ಪಾತ್ರ ವಹಿಸಿದೆ. ಶಿಕ್ಷಣ ಆರೋಗ್ಯ ಮತ್ತು ಕೃಷಿ ಕ್ಷೇತ್ರದಲ್ಲಿಯ ಸಮಸ್ಯೆ ಮತ್ತು ಸವಾಲುಗಳನ್ನು ಎದುರಿಸುತ್ತಿರುವ ಜನರಿಗೆ ಜಾಗೃತಿ ಮೂಡಿಸಿ ಸದೃಢ ರಾಷ್ಟ್ರ ಕಟ್ಟಲು ನೆರವಾಗುತ್ತಿದೆ ಎಂದು ಎನ್ ಎಸ್ ಎಸ್ ವಿಭಾಗೀಯ ಅಧಿಕಾರಿ ಡಾ.ಚಂದ್ರಶೇಖರ್ ದೊಡ್ಡಮನಿ ಹೇಳಿದರು.
ನಗರದ ಜೇವರ್ಗಿ ಕಾಲೋನಿಯ ಸರಕಾರಿ ಪದವಿ ಪೂರ್ವ ಕಾಲೇಜಿನ ಎನ್ಎಸ್ಎಸ್ ಘಟಕದ ವತಿಯಿಂದ ರಾಷ್ಟ್ರೀಯ ಸೇವಾ ಯೋಜನೆಯ ವಿಶೇಷ ಶಿಬಿರ ಉದ್ಘಾಟಿಸಿ ಮಾತನಾಡಿ, ವಿದ್ಯಾರ್ಥಿಗಳು ಓದುವ ಹವ್ಯಾಸವನ್ನು ಬೆಳೆಸಿಕೊಂಡು ಜ್ಞಾನದ ಪರ್ವತಗಳಾಗಬೇಕು ಎಂದರು.
ನಿಂಬರ್ಗಾ ಸರ್ಕಾರಿ ಪಿಯು ಕಾಲೇಜಿನ ಪ್ರಾಂಶುಪಾಲರಾದ ಡಾ.ಭೀಮರಾಯ ಅರಿಕೇರಿ ಮಾತನಾಡಿ, ಎನ್ಎಸ್ಎಸ್ ವಿದ್ಯಾರ್ಥಿಗಳಲ್ಲಿ ಧನಾತ್ಮಕ ಬದಲಾವಣೆಯ ತರುತ್ತದೆ. ರಾಷ್ಟ್ರ ಸೇವೆಯಲ್ಲಿ ನಿಸ್ವಾರ್ಥ ಸೇವೆ ಮತ್ತು ವಿದ್ಯಾರ್ಥಿಗಳಲ್ಲಿ ನಾಯಕತ್ವ ಗುಣ ಬೆಳೆಸುವ ಮಹತ್ವದ ಪಾತ್ರ ವಹಿಸುತ್ತದೆ ಎಂದರು.
ಪ್ರಾಂಶುಪಾಲರ ಸಂಘದ ಅಧ್ಯಕ್ಷ ಬಸವರಾಜ್ ಬಿರಾಜದಾರ ಮಾತನಾಡಿ, ವಿದ್ಯಾರ್ಥಿಗಳಿಗೆ ಪಿಯು ಘಟ್ಟ ಮಹತ್ವದ್ದಾಗಿದ್ದು ಇಂಥಹ ಶಿಬಿರಗಳು ವ್ಯಕ್ತಿತ್ವ ವಿಕಸನಕ್ಕೆ ಸಹಾಯಮಾಡುತ್ತದೆ ಎಂದರು.
ಜಿಲ್ಲಾ ಎನ್ಎಸ್ಎಸ್ ನೋಡಲ್ ಅಧಿಕಾರಿ ಪಾಂಡು ಎಲ್ ರಾಠೋಡ್ ಮಾತನಾಡಿದರು. ಪಾಂಶುಪಾಲರಾದ ಡಾ.ಸುಜಾತಾ ಎಂ. ಅಧ್ಯಕ್ಷತೆ ವಹಿಸಿ ಮಾತನಾಡಿದರು. ಶಿಬಿರಾಧಿಕಾರಿ ನಾಮದೇವ್ ಕಡಕೋಳ ಪ್ರಸ್ತಾವಿಕವಾಗಿ ಮಾತನಾಡಿದರು. ಶಿವಶರಣಪ್ಪ ತಮ್ಮಗೊಳ ನಿರೂಪಿಸಿದರು. ಸವಿತಾ ನಾಸಿ ವಂದಿಸಿದರು. ಉಪನ್ಯಾಸಕರುಗಳಾದ ಜಾನ್ ವೆಸ್ಲಿ, ದೇವಿಂದ್ರಪ್ಪ ಪಡಶೆಟ್ಟಿ,ಡಾ. ವಿಜಯಕುಮಾರ್ ಮತ್ತು ಶಿಬಿರಾರ್ಥಿಗಳು ಉಪಸ್ಥಿತರಿದ್ದರು.





























