Home ಜಿಲ್ಲೆ ಮೈಸೂರು ನೀರಿನ ತೆರಿಗೆ ಏರಿಕೆಗೂ ಮುನ್ನ ಶ್ವೇತಪತ್ರ ಹೊರಡಿಸಲು ಆಗ್ರಹಿಸಿ

ನೀರಿನ ತೆರಿಗೆ ಏರಿಕೆಗೂ ಮುನ್ನ ಶ್ವೇತಪತ್ರ ಹೊರಡಿಸಲು ಆಗ್ರಹಿಸಿ

ಸಂಜೆವಾಣಿ ನ್ಯೂಸ್
ಮೈಸೂರು:ಏ.05:-
ಮೈಸೂರು ಮಹಾನಗರ ಪಾಲಿಕೆಯು ಇತ್ತೀಚೆಗೆ ನೀರಿನ ಸಂಪರ್ಕ ಶುಲ್ಕವನ್ನು ಶೇ.30 ಮತ್ತು ಒಳಚರಂಡಿ ಶುಲ್ಕವನ್ನು ಶೇ.10ರಷ್ಟು ಏರಿಕೆ ಮಾಡಿ ಆದೇಶ ಹೊರಡಿಸಿದ್ದು, ಸದರಿ ಆದೇಶವೂ ಏ.1ರಿಂದಲೇ ಜಾರಿಯಾಗಿದೆ. ಇದು ಜಾಗತಿಕ ಬಿಕ್ಕಟ್ಟು ಹಾಗೂ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ನಲುಗಿರುವ ಸಾರ್ವಜನಿಕರಿಗೆ ಗಾಯದ ಮೇಲೆ ಬರೆ ಎಳೆದಂತೆ ಆಗಿದೆ. ಮಹಾನಗರ ಪಾಲಿಕೆಯ ಈ ನಡೆಯನ್ನು ನಾನು ತೀವ್ರವಾಗಿ ಖಂಡಿಸುತ್ತೇನೆ.


ಕರ್ನಾಟಕ ನಗರಾಭಿವೃದ್ಧಿ ಅಧಿನಿಯಗಳ ಅನ್ವಯ ಪ್ರತಿ 3 ವರ್ಷಗಳಿಗೊಮ್ಮೆ ನೀರಿನ ದರ ಪರಿಷ್ಕರಣೆಗೆ ಅವಕಾಶ ಕಲ್ಪಿಸಲಾಗಿದೆ. 14 ವರ್ಷಗಳ ನಂತರ ನೀರನ ದರ ಏರಿಕೆ ಮಾಡಲಾಗಿದೆ ಎಂದು ಮೈಸೂರು ಮಹಾನಗರ ಪಾಲಿಕೆ ಆಯುಕ್ತರಾದ ಶೇಖ್ ತನ್ನೀರ್ ಆಸಿಫ್ ಅವರು ಪತ್ರಿಕಾ ಹೇಳಿಕೆ ನೀಡಿರುವುದನ್ನು ಗಮನಿಸಿದ್ದೇನೆ.
ಯುದ್ಧದ ಸನ್ನಿವೇಶ: ಇಸ್ರೇಲ್-ಇರಾನ್ ಯುದ್ಧದಿಂದಾಗಿ ಮಧ್ಯ ಪ್ರಾಶ್ಚ ದೇಶಗಳಲ್ಲಿ ಉಂಟಾಗಿರುವ ಪ್ರಕ್ಷುಬ್ಧ ಬೆಳವಣಿಗೆಗಳ ಪರಿಣಾಮವಾಗಿ, ಜನರಿಗೆ ಎಲ್‍ಪಿಜಿ ಅಡುಗೆ ಅನಿಲ ಸಿಲಿಂಡರ್ ಸಿಗುತ್ತಿಲ್ಲ. ಪೆಟ್ರೋಲ್, ಡೀಸೆಲ್, ಸಿಎನ್‍ಜಿ, ಪಿಎನ್‍ಜಿ ಮುಂತಾದ ಪೆಟ್ರೋಲಿಯಂ ಉತ್ಪನ್ನಗಳ ಬೆಲೆ ಮತ್ತಷ್ಟು ಹೆಚ್ಚಾಗುವ ಪರಿಸ್ಥಿತಿ ಇದೆ.


ಅಗತ್ಯ ವಸ್ತುಗಳ ಬೆಲೆ ಏರಿಕೆ: ಗ್ಯಾರಂಟಿ ಯೋಜನೆಗಳಿಂದ ಆರ್ಥಿಕವಾಗಿ ದಿವಾಳಿ ಆಗಿರುವ
ರಾಜ್ಯ ಸರ್ಕಾರವು ಅಗತ್ಯ ವಸ್ತುಗಳ ಬೆಲೆ ಏರಿಕೆ ಮಾಡಿದ್ದು, ವಿದ್ಯುತ್, ಹಾಲು ಸೇರಿದಂತೆ ಎಲ್ಲ ವಸ್ತುಗಳ ಬೆಲೆಯನ್ನೂ ಏರಿಸುವ ಮೂಲಕ ಜನಸಾಮಾನ್ಯರ ಬದುಕನ್ನು ಈಗಾಗಲೇ ದುಸ್ತರ ಸ್ಥಿತಿಗೆ ದೂಡಿದೆ.
ಪಾಲಿಕೆಯಿಂದ ಮತ್ತೊಂದು ಹೊರೆ: ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಮಹಾನಗರ ಪಾಲಿಕೆ
ನೀರಿನ ತೆರಿಗೆ ಮತ್ತು ಒಳಚರಂಡಿ ಸೆಸ್ ಹೆಚ್ಚಳ ಮಾಡುವ ಮೂಲಕ ಸಾರ್ವಜನಿಕರಿಗೆ ಮತ್ತಷ್ಟು ಹೊರೆ ಏರಿದೆ. ಪ್ರತಿ ತಿಂಗಳ ಕನಿಷ್ಠ ದರವನ್ನು 125 ರೂ.ಗಳಿಂದ 163ಕ್ಕೆ ಏರಿಕೆ ಮಾಡಲಾಗಿದೆ. 25 ಸಾವಿರ ಲೀಟರ್‍ವರೆಗೆ ಪ್ರತಿ ಸಾವಿರ ಲೀಟರ್ ನೀರಿಗೆ 5 ರೂ. ತೆರಿಗೆ ಇತ್ತು.


ಅದನ್ನು 6.50 ರೂ.ಗಳಿಗೆ ಏರಿಸಲಾಗಿದೆ. 50 ಸಾವಿರ ಲೀಟರ್‍ವರೆಗೆ ಪ್ರತಿ ಲೀಟರ್‍ಗೆ 8 ರೂ. ಇದ್ದ ದರವನ್ನು 10 ರೂ.ಗಳಿಗೆ, 75 ಸಾವಿರ ಲೀಟರ್‍ವರೆಗೆ 12ರಿಂದ 15 ರೂ.ಗಳಿಗೆ, 1 ಲಕ್ಷ ಲೀಟರ್‍ವರೆಗೆ 16ರಿಂದ 20 ರೂ.ಗಳಿಗೆ ಹಾಗೂ 1 ಲಕ್ಷ ಲೀಟರ್ ಮೇಲ್ಪಟ್ಟು ಪ್ರತಿ ಲೀಟಗೆರ್‍ಗೆ 20ರಿಂದ 25 ರೂ.ಗಳಿಗೆ ಏರಿಕೆ ಮಾಡಲಾಗಿದೆ.
ಡಿಸಿಬಿ ಶ್ವೇತ ಪತ್ರ ಹೊರಡಿಸಿ: ಇಷ್ಟೆಲ್ಲ ನೀರಿನ ತೆರಿಗೆ ಹೆಚ್ಚಿಸಿರುವ ಮೈಸೂರು ಮಹಾನಗರ
ಪಾಲಿಕೆ ಅಧಿಕಾರಿಗಳು, ಮೊದಲು ನಗರದ ನೀರಿನ ತೆರಿಗೆಯ ಬೇಡಿಕೆ. ಸಂಗ್ರಹ ಮತ್ತು ಬಾಕಿಗೆ(ಡಿಮಾಂಡ್, ಕಲೆಕ್ಷನ್, ಬ್ಯಾಲೆನ್ಸ್-ಡಿಸಿಬಿ) ಸಂಬಂಧಪಟ್ಟ ಸಮಗ್ರ ಮಾಹಿತಿಯುಳ್ಳ ಶ್ವೇತ ಪತ್ರ ಹೊರಡಿಸಬೇಕೆಂದು ನಾನು ಆಗ್ರಹಿಸುತ್ತಿದ್ದೇನೆ.