
ಮಂಗಳೂರು- ಕೆ.ಎಸ್.ಆರ್.ಟಿ.ಸಿ ಬಸ್ ಅಪಘಾತದಲ್ಲಿ ಸಾವನ್ನಪ್ಪಿದ ವ್ಯಕ್ತಿಯ ಕುಟುಂಬಕ್ಕೆ ನಿಗಮದ ವತಿಯಿಂದ ೧೦ ಲಕ್ಷ ರೂ.ಪರಿಹಾರ ಪಾವತಿಸಲಾಗಿದೆ.
೨೦೨೫ ರ ಆಗಸ್ಟ್ ೧೫ ರಂದು ಮಂಗಳೂರು- ೧ನೇ ಘಟಕದ ಬಸ್ ಅಮೀನಗಡ-ಮಂಗಳೂರು ಮಾರ್ಗದಲ್ಲಿ ಕಾರ್ಯಾಚರಿಸುತ್ತಿದ್ದಾಗ ಯಲ್ಲಾಪುರ ಹಿಟ್ಟಿನಬೈಲ್ ಹತ್ತಿರ ಲಾರಿಯ ಹಿಂಭಾಗಕ್ಕೆ ಬಸ್ ಢಿಕ್ಕಿಯಾಗಿ ಮಾರಣಾಂತಿಕ ಅಪಘಾತವಾಗಿತ್ತು. ಅಪಘಾತದಲ್ಲಿ ಬಾಗಲಕೋಟೆ ಹುನಗುಂದ ತಾಲೂಕಿನ ಹಿರೇಮಾಗಿ ನಿವಾಸಿ ಹನಮಪ್ಪ ಯಲ್ಲಪ್ಪ ಹೊಸೂರ (೪೮) ಎಂಬವರು ಮೃತಪಟ್ಟಿದ್ದರು.
ಮೃತರ ಪತ್ನಿ ಕಮಲವ್ವ ಮತ್ತು ಕುಟುಂಬಸ್ಥರಿಗೆ ಸಂಸ್ಥೆಯ ನಿಯಮಾವಳಿಯಂತೆ ಅಪಘಾತ ಪರಿಹಾರ ನಿಧಿಯಿಂದ ರೂ.೧೦ ಲಕ್ಷ ಚೆಕ್ಕನ್ನು ಕೆ.ಎಸ್.ಆರ್.ಟಿ.ಸಿ ಮಂಗಳೂರು ವಿಭಾಗದ ಹಿರಿಯ ವಿಭಾಗೀಯ ನಿಯಂತ್ರಣಾಧಿಕಾರಿ ರಾಜೇಶ ಶೆಟ್ಟಿ ಹಸ್ತಾಂತರಿಸಿದರು.
ಈ ಸಂದರ್ಭದಲ್ಲಿ ಮಂಗಳೂರು ವಿಭಾಗದ ವಿಭಾಗೀಯ ಸಂಚಾರ ಅಧಿಕಾರಿ ಹೆಚ್.ಆರ್ ಕಮಲ್ ಕುಮಾರ್, ಹಾಗೂ ಇನ್ನಿತರ ಅಧಿಕಾರಿಗಳು ಉಪಸ್ಥಿತರಿದ್ದರು.





























