
ಕಲಬುರಗಿ:ಜು.04:ಯಾವುದೇ ಒಂದು ರಾಷ್ಟ್ರದ ಅಭಿವೃದ್ಧಿಯಲ್ಲಿ ಅಲ್ಲಿನ ಯುವಕರ ಪಾತ್ರ ಪ್ರಮುಖವಾಗಿದೆ. ಇಡೀ ಯುವ ಸಮೂಹದ ಚೇತನಾ ಶಕ್ತಿಯಾದ ವಿವೇಕಾನಂದ ಅವರು ಆಚರಿಸಿದ ಆದರ್ಶ, ನೀಡಿದ ಸಂದೇಶವನ್ನು ಪ್ರತಿಯೊಬ್ಬ ಯುವಕರು ಅಳವಡಿಸಿಕೊಂಡರೆ ಸದೃಢ ರಾಷ್ಟ್ರ ನಿರ್ಮಾಣವಾಗಲು ಸಾಧ್ಯವಿದೆ ಎಂದು ಆಕಾಶವಾಣಿಯ ನಿವೃತ್ತ ಕಾರ್ಯಕ್ರಮ ಮುಖ್ಯಸ್ಥ ಡಾ.ಸದಾನಂದ ಪೆರ್ಲ ಹೇಳಿದರು.
ನಗರದ ಗಂಗಾ ನಗರದಲ್ಲಿರುವ ‘ಶ್ರೀ ವಿವೇಕಾನಂದ ಪ್ರೌಢಶಾಲೆ’ಯಲ್ಲಿ ‘ಬಸವೇಶ್ವರ ಸಮಾಜಸೇವಾ ಬಳಗ’ದ ವತಿಯಿಂದ ಶುಕ್ರವಾರ ಜರುಗಿದ ‘ಸ್ವಾಮಿ ವಿವೇಕಾನಂದರ 123ನೇ ಸ್ಮರಣೋತ್ಸವ’ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ವಿವೇಕಾನಂದರು ವಿಶ್ವಕ್ಕೆ ಹೊಸ ಬೆಳಕು ನೀಡಿದವರು. ಅವರ ಒಂದೊಂದು ಮಾತು ಯುವಕರಿಗೆ ಸಂಜೀವಿನಿಯಿದ್ದಂತೆ. ಇಂದಿನ ಯುವಶಕ್ತಿಗೆ ಮೋಬೈಲ್ ಗೀಳಿನಿಂದ ಹೊರಬರಬೇಕು. ಸಂಸ್ಕಾರ, ಗುರು-ಹಿರಿಯರು, ದೇಶಕ್ಕೆ ಗೌರವ ನೀಡಬೇಕು. ದೇಶಭಕ್ತಿ, ಮಾನವೀಯ ಮೌಲ್ಯಗಳು ಮೈಗೂಡಿಸಿಕೊಳ್ಳಬೇಕು. ನಿಶ್ಚಿತ ಗುರಿಯನ್ನಿಟ್ಟುಕೊಂಡು, ದೃಢ ಸಂಕಲ್ಪದೊಂದಿಗೆ ನಿರಂತರವಾದ ಪ್ರಯತ್ನ ಮಾಡಿ, ಜೀವನದಲ್ಲಿ ಉನ್ನತವಾದ ಸಾಧನೆಯನ್ನು ಮಾಡುವ ಮೂಲಕ ದೇಶದ ಅಮೂಲ್ಯ ಆಸ್ತಿಯಾಗಬೇಕು ಎಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಬಳಗದ ಅಧ್ಯಕ್ಷ ಹಾಗೂ ಉಪನ್ಯಾಸಕ ಎಚ್.ಬಿ.ಪಾಟೀಲ್, ಕಸಾಪ ಉತ್ತರ ವಲಯದ ಗೌರವ ಅದ್ಯಕ್ಷ ಶಿವಯೋಗೆಪ್ಪಾ ಎಸ್.ಬಿರಾದಾರ, ಪ್ರೌಢಶಾಲೆಯ ಮುಖ್ಯ ಶಿಕ್ಷಕ ಮಲ್ಲಿಕಾರ್ಜುನ ಎಸ್. ಗುಡಬಾ, ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿ ಕಾವೇರಿ ವಿ.ಹೂನಳ್ಳಿ, ಶಿಕ್ಷಕಿಯರಾದ ರಾಜೇಶ್ವರಿ ಎಸ್.ಡಾಂಗೆ, ರೂಪಾ ಎಸ್.ಚೇಂಗಟಾ ಸೇರಿದಂತೆ ಪ್ರಾಥಮಿಕ, ಪ್ರೌಢಶಾಲೆಯ ಶಿಕ್ಷಕಿಯರು, ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.