
ತುಮಕೂರು, ಜೂ. ೨೩- ನಮ್ಮ ದೇಹ ಮತ್ತು ಮನಸ್ಸನ್ನು ಸಮತೋಲನದಲ್ಲಿಡಲು ಯೋಗದಿಂದ ಸಾಧ್ಯ. ಹೀಗಾಗಿ ಯೋಗ ಮನುಷ್ಯನ ಆರೋಗ್ಯವನ್ನು ಕಾಪಾಡಲು ಸಹಕಾರಿಯಾಗಿದೆ ಎಂದು ತುಮಕೂರು ಪ್ರಸೂತಿ ಮತ್ತು ಸ್ತ್ರೀರೋಗ ತಜ್ಞರ ಸಂಘದ ಅಧ್ಯಕ್ಷ ಡಾ.ಬಸವರಾಜು ಹೇಳಿದರು.
ನಗರದ ಟೌನ್ಹಾಲ್ ವೃತ್ತದಲ್ಲಿರುವ ಐಎಂಎ ಭವನದಲ್ಲಿ ತುಮಕೂರು ಪ್ರಸೂತಿ ಮತ್ತು ಸ್ತ್ರೀರೋಗ ತಜ್ಞರ ಸಂಘದ ವತಿಯಿಂದ ವಿಶ್ವ ಯೋಗ ದಿನದ ಅಂಗವಾಗಿ ಹಮ್ಮಿಕೊಂಡಿದ್ದ ಗರ್ಭಿಣಿಯರಿಗೆ ಯೋಗ ತರಬೇತಿ ಶಿಬಿರದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಯೋಗ ಭಾರತದಲ್ಲಿ ಹುಟ್ಟಿದ್ದು, ನಮಗೆಲ್ಲರಿಗೂ ಹೆಮ್ಮೆ ತರುವಂತಹ ವಿಷಯ. ಋಷಿಮುನಿಗಳು, ಸಾಧಕರು ಯೋಗದ ದಾರಿಯಲ್ಲಿ ನಡೆದು ಯೋಗದ ಉಪಯೋಗಗಳನ್ನು ನಮಗೆ ನೀಡಿದ್ದಾರೆ ಎಂದು ಹೇಳಿದರು.
ಡಾ.ಹನುಮಕ್ಕ ಮಾತನಾಡಿ, ಬಹುತೇಕ ಗರ್ಭಿಣಿಯರು ಕೆಲಸವನ್ನೇ ಮಾಡುವುದಿಲ್ಲ. ಇದರಿಂದ ದೇಹಕ್ಕೆ ವ್ಯಾಯಾಮ ಇರುವುದಿಲ್ಲ. ಇದರಿಂದ ಸಿಜೇರಿಯನ್ ಮೂಲಕ ಹೆರಿಗೆ ಮಾಡಬೇಕಾಗುತ್ತದೆ. ಗರ್ಭಿಣಿ ಸಣ್ಣಪುಟ್ಟ ಕೆಲಸಗಳನ್ನು ಮಾಡಬೇಕು. ಯೋಗವನ್ನು ಮಾಡಬೇಕು. ಇದು ಸಾಮಾನ್ಯ ಹೆರಿಗೆಯಾಗಲು ಅನುಕೂಲವಾಗುತ್ತದೆ. ತಾಯಿ ಮತ್ತು ಮಗು ಆರೋಗ್ಯವಾಗಿರಲು ಸಾಧ್ಯವಾಗುತ್ತದೆ ಎಂದು ಹೇಳಿದರು.
ಗರ್ಭಿಣಿಯರು ಸದಾ ಒತ್ತಡದಲ್ಲಿರುತ್ತಾರೆ. ಇದಕ್ಕೆ ಕೆಲಸ ಮಾಡದಿರುವುದೇ ಕಾರಣ. ಹೀಗಾಗಿ ಗರ್ಭಿಣಿಯರು ಯೋಗ ಮತ್ತು ಮನೆಯಲ್ಲಿ ಸಣ್ಣಪುಟ್ಟ ಕೆಲಸ ಮಾಡಬೇಕು. ಇದು ಆರೋಗ್ಯಕ್ಕೆ ಸಹಕಾರಿಯಾಗುತ್ತದೆ ಎಂದು ತಿಳಿಸಿದರು.
ಯೋಗ ಗುರು ಅನುರಾಧ ಗರ್ಭಿಣಿಯರಿಗೆ ಯೋಗವನ್ನು ಹೇಳಿಕೊಟ್ಟರು.
ಕಾರ್ಯಕ್ರಮದಲ್ಲಿ ಟಿಎಸ್ಒಜಿ ಸದಸ್ಯರಾದ ಡಾ.ಮೋನಿಕಾ, ಡಾ.ರಜನಿ, ಜಲಧಿ ಮತ್ತಿತರರು ಭಾಗವಹಿಸಿದ್ದರು.
































