
ಭಾಲ್ಕಿ:ಜ.16: ತಾಲೂಕಿನ ಗಡಿ ಗ್ರಾಮ ಕಾಳಸರತುಗಾಂವನಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ಸಹ ಮಕರ ಸಂಕ್ರಾಂತಿಯಂದು ಶರಭವತಾರಿ ಶ್ರೀ ವೀರಭದ್ರೇಶ್ವರ ದೇವರ ಲಗ್ನ ಅಕ್ಷತೆ ಕಾರ್ಯಕ್ರಮ ಬುಧವಾರ ರಾತ್ರಿ 10 ಗಂಟೆಗೆ ಜರುಗಿತು.
ಪ್ರತಿ ವರ್ಷದ ಸಂಕ್ರಮಣದಂದು ವೀರಭದ್ರೇಶ್ವರ ಹಾಗೂ ಮಾತೆ ಕಾಳಿಕೆ ದೇವಿಯೊಂದಿಗೆ ಲಗ್ನ ಅಕ್ಷತೆ ಜರುಗುವ ಸತ್ ಸಂಪ್ರದಾಯವಿದ್ದು, ಬುಧವಾರ ಬೆಳಿಗ್ಗೆ 5 ಗಂಟೆಗೆ ಶ್ರೀ ವೀರಭದ್ರನಿಗೆ ರುದ್ರಾಭಿಷಕ ಜರುಗಿತು, ನಂತರ ಧಾರ್ಮಿಕ ವಿಧಿ ವಿಧಾನ ಕಾರ್ಯಕ್ರಮಗಳು ನಡೆದವು. ಸಂಜೆ ವೀರಭದ್ರ ಹಾಗೂ ಕಾಳಿಕಾದೇವಿಗೆ ಶೃಂಗಾರ ಹಾಗೂ ಅಲಂಕಾರ ನಡೆದು, ರಾತ್ರಿ 10.00 ಗಂಟೆ ಸುಮಾರಿಗೆ ವಿವಾಹ ಮಹೋತ್ಸವ ಸಂಪನ್ನಗೊಂಡಿತ್ತು. ಸಂಪ್ರದಾಯದಂತೆ ಸ್ಥಳಿಯ ನಿವಾಸಿ ದೇವಪ್ಪ ಪಾಂಚಾಳ ಕುಟುಂಬದವರಿಂದ ಪ್ರಸಾದ ವಿತರಣೆ ಜರುಗಿತು.
ಆಟ್ಟರಗಾ ಗ್ರಾಮದ ವೈದಿಕ ರಾಜುದೇವ, ಸ್ಥಳಿಯ ಶಂಕ್ರಯ್ಯ ಸ್ವಾಮಿ ಪರ್ವತಮಠ ಹಾಗೂ ಬಾಬು ಸ್ವಾಮಿ ಕಾನೊಡೆ ಲಗ್ನ ಅಕ್ಷತೆ ವಿಧಿ ವಿಧಾನ ನಡೆಸಿಕೊಟ್ಟರು, ಕುಂದನಬಾಯಿ ಶಿಂಧೆ ಹಾಗೂ ಕೌಶಲ್ಯಾ ಬಿರಾದಾರ ಲಗ್ನ ಅಕ್ಷತೆ ಶ್ಲೋಕ ಪಠಿಸಿದರು. ಗ್ರಾಮದ ಸುಮಂಗಲೆಯರ ಆರತಿ ಬೆಳಗಿ ವಿವಾಹ ಮಹೋತ್ಸವಕ್ಕೆ ತೆರೆ ಎಳೆದರು. ನಂತರ ವೆಂಕಟರಾವ ದಾದಾರಾವ ಭಾಡಸಾಂಗವಿಕರ್ ಹಾಗೂ ಗಣೇಶಪುರ ವಾಡಿಯ ಜೋತಬಾನಾಥ ಮಹಾರಾಜ ಅವರಿಂದ ರಾತ್ರಿಯಿಡಿ ಗೋಂಧಳ ಕಾರ್ಯಕ್ರಮ ಜರುಗಿತು.
ಈ ಸಂದರ್ಭದಲ್ಲಿ ಗ್ರಾಮದ ಗಣ್ಯರಾದ ಸಚಿದಾನಂದ ಮಠಪತಿ, ಶಿವಶಂಕರ ಅಂಕಲಕೊಟೆ, ಸಂಗ್ರಾಮ ಪಾಟೀಲ, ಶಿವಕುಮಾರ ಬಿರಾದಾರ, ಮಲ್ಲಿಕಾರ್ಜುನ ಬಿರಾದಾರ, ಪರಮೇಶ್ವರ ಬಿರಾದಾರ, ಗೋವಿಂದ ಪಾಟೀಲ, ಹಣಮಂತ ಪಾಟೀಲ, ನಿತೇಶ ಪಾಟೀಲ ವಾಡಿ, ಮಹೇಶ ಪಾಟೀಲ ವಾಡಿ, ರೇವಯ್ಯ ಸ್ವಾಮಿ ಕಾನೊಡೆ, ಬಾಲಾಜಿ ಮೇತ್ರೆ, ಶಿವಕುಮಾರ ಪಾಟೀಲ, ಮಹೇಶ ಬಿರಾದಾರ ಸೇರಿದಂತೆ ಸ್ಥಳಿಯ, ಸುತ್ತಲಿನ ಗ್ರಾಮಗಳಾದ ಕಾಳಸರತುಗಾಂವ ವಾಡಿ, ಭಾಡಸಾಂಗವಿ, ಶಿವಣಿ, ಮಾಣಕೇಶ್ದರ, ಆಟ್ಟರಗಾ, ಬೋಳೆಗಾಂವ, ಆನಂದವಾಡಿ, ಇಂದ್ರಾಳ, ಲಾಸೋಣಾ ಹಾಗೂ ಇತರೆ ಗ್ರಾಮಗಳ ಸದ್ಭಕ್ತರು ಭಾಗವಹಿಸಿ ವಿವಾಹ ಮಹೋತ್ಸವ ಯಶಸ್ವಿಗೊಳಿಸಿದರು.























