ಎಸ್‍ಎಸ್‍ಎಲ್‍ಸಿಯಲ್ಲಿ ಶೇ 95 ಫಲಿತಾಂಶಕ್ಕೆ ಪ್ರಯತ್ನಿಸಿ

ಬೀದರ್: ಜ.3:ಬರುವ ಎಸ್‍ಎಸ್‍ಎಲ್‍ಸಿ ಪರೀಕ್ಷೆಯಲ್ಲಿ ಜಿಲ್ಲೆಗೆ ಶೇ 95 ರಷ್ಟು ಫಲಿತಾಂಶ
ತರಲು ಮುಖ್ಯಶಿಕ್ಷಕರು, ಶಿಕ್ಷಕರು ಹಾಗೂ ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ
ಸಮಿತಿ ಸದಸ್ಯರು ಪ್ರಯತ್ನಿಸಬೇಕು ಎಂದು ಜಿಲ್ಲಾ ಪಂಚಾಯಿತಿ ಮುಖ್ಯ
ಕಾರ್ಯನಿರ್ವಹಣಾಧಿಕಾರಿ ಡಾ. ಗಿರೀಶ್ ಬದೋಲೆ ಸಲಹೆ ಮಾಡಿದರು.
ಬೀದರ್ ನಾಗರಿಕ ಸನ್ಮಾರ್ಗ ಸಮಿತಿ ವತಿಯಿಂದ ನಗರದ ಶಾಹೀನ್ ಪದವಿಪೂರ್ವ ವಿಜ್ಞಾನ
ಕಾಲೇಜಿನ ಎ.ಆರ್.ಎಂ. ಸಭಾಂಗಣದಲ್ಲಿ ಬೀದರ್, ಔರಾದ್ ಹಾಗೂ ಭಾಲ್ಕಿ ತಾಲ್ಲೂಕುಗಳ
ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ಮುಖ್ಯಶಿಕ್ಷಕರು ಹಾಗೂ ಎಸ್.ಡಿ.ಎಂ.ಸಿ.
ಪ್ರತಿನಿಧಿಗಳಿಗೆ ಶುಕ್ರವಾರ ಆಯೋಜಿಸಿದ್ದ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು
ಮಾತನಾಡಿದರು.
ಕಳೆದ ವರ್ಷ ಎಸ್‍ಎಸ್‍ಎಲ್‍ಸಿ ಪರೀಕ್ಷೆಯಲ್ಲಿ 35 ಶೈಕ್ಷಣಿಕ ಜಿಲ್ಲೆಗಳಲ್ಲಿ
ಜಿಲ್ಲೆಗೆ 31ನೇ ಸ್ಥಾನ ದೊರಕಿತ್ತು. ಆಗ ಜಿಲ್ಲೆಯ ಒಟ್ಟಾರೆ ಫಲಿತಾಂಶ ಶೇ 64
ಆಗಿತ್ತು. ಈ ಬಾರಿ ಫಲಿತಾಂಶ ಹೆಚ್ಚಳದೊಂದಿಗೆ ಸ್ಥಾನ ಏರಿಕೆಗೆ ಶ್ರಮಿಸಬೇಕು ಎಂದು
ಹೇಳಿದರು.
ಕಳೆದ ಬಾರಿ ಜಿಲ್ಲೆಯ 70 ಶಾಲೆಗಳು ಶೇ 20 ರಿಂದ ಶೇ 30 ರಷ್ಟು ಮಾತ್ರ ಫಲಿತಾಂಶ
ಪಡೆದಿದ್ದವು. ಅಂಥ ಶಾಲೆಗಳ ಫಲಿತಾಂಶ ಹೆಚ್ಚಳಕ್ಕೆ ಹೆಚ್ಚಿನ ಆದ್ಯತೆ ಕೊಡಬೇಕು ಎಂದು
ತಿಳಿಸಿದರು.
8ನೇ ಹಾಗೂ 9ನೇ ತರಗತಿಯಲ್ಲಿ ಫಲಿತಾಂಶ ವೃದ್ಧಿಸುವ ದಿಸೆಯಲ್ಲಿ ಪ್ರಯತ್ನ ನಡೆಸಿದರೆ,
ಎಸ್‍ಎಸ್‍ಎಲ್‍ಸಿ ಫಲಿತಾಂಶ ತಾನಾಗಿಯೇ ಹೆಚ್ಚುತ್ತದೆ ಎಂದು ಹೇಳಿದರು.
ಸರ್ಕಾರಿ ಶಾಲೆಗಳನ್ನು ಮಾದರಿ ಶಾಲೆಗಳಾಗಿ ರೂಪಿಸಲು ಸಮನ್ವಯದಿಂದ ಕಾರ್ಯ
ನಿರ್ವಹಿಸಬೇಕು. ಶಾಲೆ ಬಿಟ್ಟ ಮಕ್ಕಳನ್ನು ಮರಳಿ ಶಾಲೆಗೆ ತರುವುದು, ಹಾಜರಾತಿ
ಹೆಚ್ಚಿಸುವುದು ಮೊದಲಾದವುಗಳಿಗೆ ಆದ್ಯತೆ ನೀಡಬೇಕು ಎಂದು ತಿಳಿಸಿದರು.
ಶಾಲೆ ಬಿಟ್ಟ ಮಕ್ಕಳನ್ನು ಮರಳಿ ಮುಖ್ಯವಾಹಿನಿಗೆ ತರಲು ಶಾಹೀನ್ ಶಿಕ್ಷಣ ಸಂಸ್ಥೆಗಳ
ಸಮೂಹವು ಎಐಸಿಯು ಮೂಲಕ ನಡೆಸುತ್ತಿರುವ ಪ್ರಯತ್ನ ಶ್ಲಾಘನೀಯವಾಗಿದೆ. ಬೀದರ್ ನಾಗರಿಕ
ಸನ್ಮಾರ್ಗ ಸಮಿತಿ ಕಾರ್ಯಾಗಾರ ಹಮ್ಮಿಕೊಂಡಿರುವುದು ಉತ್ತಮ ಬೆಳವಣಿಗೆ ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಬೀದರ್ ನಾಗರಿಕ ಸನ್ಮಾರ್ಗ ಸಮಿತಿಯ ಅಧ್ಯಕ್ಷ ಡಾ. ಅಬ್ದುಲ್
ಖದೀರ್ ಮಾತನಾಡಿ, ಜಿಲ್ಲೆಯ ಶೈಕ್ಷಣಿಕ ಗುಣಮಟ್ಟ ವೃದ್ಧಿಗೆ ಸಂಘಟಿತ ಪ್ರಯತ್ನ
ಅವಶ್ಯಕವಾಗಿದೆ ಎಂದು ಹೇಳಿದರು.
ಶಿಕ್ಷಕರು ಹಾಗೂ ಎಸ್.ಡಿ.ಎಂ.ಸಿ.ಯವರು ಮನಸ್ಸು ಮಾಡಿದರೆ ಶಿಕ್ಷಣದಲ್ಲಿ ದೊಡ್ಡ
ಬದಲಾವಣೆ ತರಬಹುದು. ಮಕ್ಕಳ ಭವಿಷ್ಯ ಉಜ್ವಲಗೊಳಿಸಬಹುದು ಎಂದು ತಿಳಿಸಿದರು.
ಬೀದರ್ ನಾಗರಿಕ ಸನ್ಮಾರ್ಗ ಸಮಿತಿ ಸಮಾಜದ ಹಿತಕ್ಕೆ ಪೂರಕವಾಗಿ ಕಾರ್ಯ
ನಿರ್ವಹಿಸುತ್ತಿದೆ. ಬರುವ ದಿನಗಳಲ್ಲಿ ಇನ್ನೂ ಅನೇಕ ಚಟುವಟಿಕೆಗಳನ್ನು ಕೈಗೊಳ್ಳುವ
ಉದ್ದೇಶ ಹೊಂದಿದೆ ಎಂದು ಹೇಳಿದರು.
ಸಂಪನ್ಮೂಲ ವ್ಯಕ್ತಿಗಳಾಗಿದ್ದ ಶಾಲಾ ಶಿಕ್ಷಣ ಇಲಾಖೆಯ ವಿಷಯ ಪರಿವೀಕ್ಷಕ ಸೈಯದ್
ಫುರ್ಕಾನ್ ಪಾಶಾ ಹಾಗೂ ಜಗದೀಶ್ ನಿಂಬೂರ ಉಪನ್ಯಾಸ ನೀಡಿದರು.
ಬಸವ ಸೇವಾ ಪ್ರತಿಷ್ಠಾನ ಡಾ. ಗಂಗಾಂಬಿಕೆ ಅಕ್ಕ, ಸೇಂಟ್ ಜೋಸೆಫ್ ಚರ್ಚನ ರೆವರೆಂಡ್
ಫಾದರ್ ವಿಲ್ಸನ್ ಫನಾರ್ಂಡೀಸ್, ಫಾದರ್ ಕ್ಲೇರಿ ಡೀಸೋಜಾ, ಕೌಠಾ(ಬಿ) ಬಸವ ಯೋಗಾಶ್ರಮದ
ಬೆಲ್ದಾಳ ಸಿದ್ಧರಾಮ ಶರಣರು, ಇಂದೋರ್ ಕೈಫುಲ್ ಇಮಾಮ್ ನಿರ್ದೇಶಕ ಮುಫ್ತಿ ಅಬುಬಕರ್
ಜಾಬೇರ್ ಖಾಸ್ಮಿ ಸಾನಿಧ್ಯ ವಹಿಸಿದ್ದರು.
ಶಾಲಾ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಸುರೇಶ ಎಚ್.ಜಿ, ಡಯಟ್ ನಿರ್ದೇಶಕ ಗುರುಪ್ರಸಾದ್,
ಸಮಿತಿಯ ಕಾರ್ಯದರ್ಶಿ ಅಶೋಕ ವಡಗಾವೆ, ಸದಸ್ಯರಾದ ಶಂಭುಲಿಂಗ ವಾಲ್ದೊಡ್ಡಿ, ಮಂಜುಳಾ
ಮೂಲಗೆ, ಐ.ಎಂ.ಎ. ಬೀದರ್ ಘಟಕದ ಅಧ್ಯಕ್ಷ ಡಾ. ವಿಜಯ ಬಲ್ಲೂರಕರ್, ಇನ್ನರ್ ವ್ಹೀಲ್
ಕ್ಲಬ್ ಅಧ್ಯಕ್ಷೆ ಸುನೈನಾ ಗುತ್ತಿ ಮತ್ತಿತರರು ಇದ್ದರು. ಸಮಿತಿಯ ಬಸವರಾಜ ಮಾಳಗೆ
ನಿರೂಪಿಸಿದರು. ಡಾ. ಶ್ವೇತಾ ವಂದಿಸಿದರು.