ತ.ನಾಡಲ್ಲಿ ಹಿಂದಿ ಭಾಷೆಗೆ ಜಾಗವಿಲ್ಲ: ಸ್ಟಾಲಿನ್

ಚಿನ್ನೈ,ಜ.೨೫-ಹಿಂದಿ ವಿರೋಧಿ ಚಳವಳಿ ಸಂದರ್ಭದಲ್ಲಿ ಪ್ರಾಣತೆತ್ತ ಹೋರಾಟಗಾರರನ್ನು ಸ್ಮರಿಸಿರುವ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ರಾಜ್ಯದಲ್ಲಿ ಹಿಂದಿ ಭಾಷೆಗೆ ಎಂದಿಗೂ ಜಾಗವಿಲ್ಲ ಎಂದು ಹೇಳಿದ್ದಾರೆ.


ನಾವು ಯಾವಾಗಲೂ ಹಿಂದಿ ಹೇರಿಕೆಯನ್ನು ವಿರೋಧಿಸುತ್ತೇವೆ. ತಮಿಳು ಭಾಷೆಯ ಮೇಲಿನ ನಮ್ಮ ಪ್ರೀತಿ ಅಜರಾಮರ ಹಿಂದಿಯನ್ನು ನಮ್ಮ ಮೇಲೆ ಹೇರಿದಾಗಲೆಲ್ಲಾ ಅದನ್ನು ಅಷ್ಟೇ ತೀವ್ರವಾಗಿ ವಿರೋಧಿಸಲಾಗುವುದು ಎಂದು ಸ್ಟಾಲಿನ್ ಹೇಳಿದ್ದಾರೆ.


“ತಮಿಳಿಗಾಗಿ ತಮ್ಮ ಅಮೂಲ್ಯ ಪ್ರಾಣವನ್ನು ಅರ್ಪಿಸಿದ ಹುತಾತ್ಮರಿಗೆ ನಾನು ನನ್ನ ಕೃತಜ್ಞತಾಪೂರ್ವಕ ನಮನಗಳನ್ನು ಸಲ್ಲಿಸುತ್ತೇನೆ. ಭಾಷಾ ಯುದ್ಧದಲ್ಲಿ ಇನ್ನು ಯಾವುದೇ ಜೀವಗಳು ಬಲಿಯಾಗುವುದಿಲ್ಲ” ಎಂದು ಮುಖ್ಯಮಂತ್ರಿ ಒತ್ತಿ ಹೇಳಿದ್ದಾರೆ.


ಭಾಷಾ ಹುತಾತ್ಮರ ದಿನವಾದ ಇಂದು ತಮಿಳುನಾಡು ಮುಖ್ಯಮಂತ್ರಿ ಹಿಂದಿ ವಿರೋಧಿ ಚಳವಳಿಯ ಇತಿಹಾಸದ ಕುರಿತು ಒಂದು ಸಣ್ಣ ವೀಡಿಯೊವನ್ನು ಎಕ್ಸ್ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಇದು ೧೯೬೫ ರ ಹಿಂದಿ ವಿರೋಧಿ ಹೋರಾಟದ ಚಿತ್ರಗಳನ್ನು ಒಳಗೊಂಡಿದೆ.


ಡಿಎಂಕೆಯ ದಿವಂಗತ ನಾಯಕರಾದ ಸಿಎನ್ ಅಣ್ಣಾದೊರೈ ಮತ್ತು ಎಂ ಕರುಣಾನಿಧಿ ಅವರ ಕೊಡುಗೆಗಳನ್ನು ಮುಖ್ಯಮಂತ್ರಿ ಸ್ಮರಿಸಿದ್ದಾರೆ.


ಹಿಂದಿ ವಿರೋಧಿ ಚಳವಳಿಯನ್ನು ಮುನ್ನಡೆಸುವ ಮೂಲಕ ತಮಿಳುನಾಡು ಉಪಖಂಡದ ವಿವಿಧ ಭಾಷಾ ರಾಷ್ಟ್ರೀಯ ಜನಾಂಗಗಳ ಹಕ್ಕುಗಳು ಮತ್ತು ಗುರುತನ್ನು ರಕ್ಷಿಸಿದೆ ಎಂದು ಸ್ಟಾಲಿನ್ ಹೇಳಿದ್ದಾರೆ.
೧೯೬೪-೬೫ರಲ್ಲಿ ತಮಿಳುನಾಡಿನಾದ್ಯಂತ ನಡೆದ ಹಿಂದಿ ವಿರೋಧಿ ಚಳವಳಿಯ ಸಂದರ್ಭದಲ್ಲಿ ತಮ್ಮ ಪ್ರಾಣವನ್ನು ಬಲಿದಾನ ಮಾಡಿದವರನ್ನು, ಮುಖ್ಯವಾಗಿ ಸ್ವಯಂ ದಹನದ ಮೂಲಕ ತ್ಯಾಗ ಮಾಡಿದವರನ್ನು ಭಾಷಾ ಹುತಾತ್ಮರು ಎಂದು ಕರೆಯಲಾಗುತ್ತದೆ.


ಹೊಸ ಶಿಕ್ಷಣ ನೀತಿ (ಎನ್‌ಇಪಿ) ೨೦೨೦ ರ ಮೂಲಕ ಕೇಂದ್ರ ಸರ್ಕಾರ ಹಿಂದಿ ಹೇರುತ್ತಿದೆ ಎಂದು ಡಿಎಂಕೆ ನಿರಂತರವಾಗಿ ಆರೋಪಿಸುತ್ತಿದೆ.


ತಮಿಳುನಾಡಿನ ಸ್ಟಾಲಿನ್ ಸರ್ಕಾರ ಮತ್ತು ಕೇಂದ್ರ ಸರ್ಕಾರವು ರಾಜ್ಯದಲ್ಲಿ ಹಿಂದಿ ಭಾಷೆಯ ಬಳಕೆಯ ಬಗ್ಗೆ ಬಹಳ ಹಿಂದಿನಿಂದಲೂ ಭಿನ್ನಾಭಿಪ್ರಾಯ ಹೊಂದಿವೆ. ಕಳೆದ ವರ್ಷದ ಮಾರ್ಚ್‌ನಲ್ಲಿ, ಮುಖ್ಯಮಂತ್ರಿ ಸ್ಟಾಲಿನ್ ರೂಪಾಯಿ ಚಿಹ್ನೆ “?” ತಮಿಳು ಅಕ್ಷರ “ರೂ” (ತಮಿಳಿನಲ್ಲಿ ರೂಪಾಯಿಯನ್ನು ಪ್ರತಿನಿಧಿಸುವ ತಮಿಳು ಪದ “ರುಬಾಯಿ” ಯ ಮೊದಲ ಅಕ್ಷರ) ದಿಂದ ಬದಲಾಯಿಸಿದ್ದಾರೆ.


ಕೇಂದ್ರ ಸರ್ಕಾರದ ತ್ರಿಭಾಷಾ ನೀತಿಯನ್ನು ಸಿಎಂ ಸ್ಟಾಲಿನ್ ವಿರೋಧಿಸುತ್ತಿದ್ದಾರೆ. ಬಿಜೆಪಿ ರಾಜ್ಯದ ಜನರ ಮೇಲೆ ಹಿಂದಿ ಹೇರುತ್ತಿದೆ ಎಂದು ಅವರು ಪದೇ ಪದೇ ಆರೋಪಿಸಿದ್ದಾರೆ. ರಾಜ್ಯದ ದ್ವಿಭಾಷಾ ನೀತಿ (ತಮಿಳು ಮತ್ತು ಇಂಗ್ಲಿಷ್) ಶಿಕ್ಷಣ, ಕೌಶಲ್ಯ ಅಭಿವೃದ್ಧಿ ಮತ್ತು ಉದ್ಯೋಗಕ್ಕೆ ಪ್ರಯೋಜನವನ್ನು ನೀಡಿದೆ ಎಂದು ಅವರು ಹೇಳಿದ್ದಾರೆ.