
ಬೀದರ್: ಫೆ.9:12 ವರ್ಷದ ಕೆಳಗಿನ ಮಕ್ಕಳಿಗೂ ಹೃದಯ ಸಂಬಂಧಿ ಕಾಯಿಲೆ ಕಾಣಿಸಿಕೊಳ್ಳುವುದು ಸಾಮಾನ್ಯ. ಅದಕ್ಕೆ ನುರಿತ ಹಾಗೂ ಪರಿಣಾಮಕಾರಿ ಚಿಕಿತ್ಸೆ ನೀಡುತ್ತಿರುವ ಗುದಗೆ ಆಸ್ಪತ್ರೆಯ ಕಾರ್ಯ ಸ್ತುತ್ಯಾರ್ಹ ಎಂದು ಬೆಂಗಳೂರಿನ ಜಯದೇವ ಆಸ್ಪತ್ರೆಯ ಮಕ್ಕಳ ಹೃದಯರೋಗ ತಜ್ಞರಾದ ಡಾ. ಗೋವಿಂದ ಔರಾದ್ ಕರ್ ತಿಳಿಸಿದರು.
ಭಾನುವಾರ ನಗರದ ಗುದಗೆ ಸೂಪರ್ ಸ್ಪೆಶಾಲಿಟಿ ಹಾಗೂ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಮತ್ತು ರೋಟರಿ ಕ್ಲಬ್ ಆಫ್ ಬೀದರ್ ಮೇನ್ ಸಂಸ್ಥೆಯ ಸಹಯೋಗದಲ್ಲಿ ಜಿಲ್ಲೆಯ 12 ವರ್ಷದ ಕೆಳಗಿನ ಮಕ್ಕಳಿಗೆ ಹೃದಯ ಸಂಬಂಧಿ ಕಾಯಿಲೆ ತಪಾಸಣೆ ಹಾಗೂ ಉಚಿತ ಚಿಕಿತ್ಸಾ ಶಿಬಿರ ಉದ್ದೇಶಿಸಿ ಮಾತನಾಡಿರುವ ಅವರು, ಮಕ್ಕಳು ತಾಯಿಯ ಗರ್ಭದಲ್ಲಿದ್ದಾಗಲೇ ಅವರಿಗೆ ಹೃದಯ ಸಂಬಂಧಿ ಕಾಯಿಲೆ ಕಾಣಿಸಿಕೊಳ್ಳುತ್ತದೆ. ಅದಕ್ಕೆ ಮಗು ಹುಟ್ಟಿದಾಗಲೆ ಚಿಕಿತ್ಸೆ ನೀಡಿದರೆ ಮಗು ಇಡೀ ಜೀವನ ಪಯರ್ಂತರ ಆರೋಗ್ಯವಾಗಿರುವುದು. ಆದರೆ ಬಾಲ್ಯದಲ್ಲಿ ಅದಕ್ಕೆ ಚಿಕಿತ್ಸೆ ನೀಡದಿದ್ದರೆ ಸಾವಿಗೆ ಕಾರಣವಾಗುವ ಸಂಭವವಿರುತ್ತದೆ. ದೊಡ್ಡವರಿಗೆ ಹೋಲಿಸಿದರೆ ಹೃದಯ ಸಂಬಂಧಿ ಕಾಯಿದೆಯಿಂದ ಮಕ್ಕಳ ಸಾವು ನೋವಿನ ಪ್ರಮಾಣ ಕಡಿಮೆ ಇರುತ್ತದೆ ಎಂಬುದು ಸಮಾಧಾನದ ಮಾತು ಎಂದರು.
ಆಸ್ಪತ್ರೆಯ ಹೃದಯರೋಗ ತಜ್ಞರಾದ ಡಾ.ನಿತೀನ ಗುದಗೆ ಅವರು ಮಾತನಾಡಿ, ಕಳೆದ ಎಳೆಂಟು ದಿನಗಳಿಂದ ಜಿಲ್ಲೆಯಾದ್ಯಂತ 12 ವರ್ಷದ ಕೆಳಗಿರುವ ಹೃದಯ ಸಂಬಂಧಿ ಕಾಯಿಲೆಯುಳ್ಳ ಮಕ್ಕಳನ್ನು ಪತ್ತೆ ಹಚ್ಚಿ ತಪಾಸಣೆ ಮಾಡಿ ಅಂತಹ ಮಕ್ಕಳಿಗೆ ಚಿಕಿತ್ಸೆ ನೀಡಲಾಗಿದೆ. ಈ ಹಿಂದೆಯೂ ಸಹ ಬಹಳಷ್ಟು ಮಕ್ಕಳಿಗೆ ಆರೋಗ್ಯ ಉಚಿತ ತಪಾಸಣೆ ಮಾಡಿ ಚಿಕಿತ್ಸೆ ನೀಡಲಾಗಿದೆ ಎಂದವರು ಹೇಳಿದರು.
ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕರು ಹಾಗೂ ನಿವೃತ್ತ ಜಿಲ್ಲಾ ಶಸ್ತ್ರ ಚಿಕಿತ್ಸೆಕರಾದ ಡಾ ಚಂದ್ರಕಾಂತ ಗುದಗೆ ಈ ಸಂದರ್ಭದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಮಕ್ಕಳ ಮನಸ್ಸು ಹೂವಿನಂತಿರುತ್ತದೆ. ಅವರ ಆರೋಗ್ಯ ಕಾಪಾಡುವುದು ಪಾಲಕರಾದಿಯಾಗಿ ಜಿಲ್ಲೆಯ ಜವಾಬ್ದಾರ ವೈದ್ಯರ ಕರ್ತವ್ಯವು ಹೌದು. ಹಾಗಾಗಿ ಮಕ್ಕಳ ಆರೋಗ್ಯ ಬಗ್ಗೆ ಕಾಳಜಿ ವಹಿಸುವುದು ಅಗತ್ಯ. ಈ ನಿಟ್ಟಿನಲ್ಲಿ ನಮ್ಮ ಆಸ್ಪತ್ರೆಯೂ ಎಲ್ಲಾ ವಯಸ್ಸಿನ ರೋಗಿಗಳಿಗೆ ದಿನದ 24 ಗಂಟೆಗಳ ಕಾಲ ಚಿಕಿತ್ಸೆ ನೀಡಲು ಲಭ್ಯವಿದ್ದು ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ಕರೆ ನೀಡಿದರು.
ರೋಟ್ರಿ ಕ್ಲಬ್ ಆಫ್ ಬೀದರ್ ಮೇನ್ ನ ಕಲ್ಯಾಣ ಜೋನ್ ಸಹಾಯಕ ಗವರ್ನರ್ ಹಾವಶೆಟ್ಟಿ ಪಾಟೀಲ ಮಾತನಾಡಿ, ಗುದಗೆ ಆಸ್ಪತ್ರೆಯ ಕಾರ್ಯ ನಿಜಕ್ಕೂ ಮೆಚ್ಚುವಂಥದ್ದು. ಕಡಿಮೆ ಖರ್ಚಿನಲ್ಲಿ ದಿನದ 24 ಗಂಟೆಗಳ ಕಾಲ ಸೇವೆ ನೀಡುತ್ತಿರುವುದು ಪ್ರಶಂಸನಾರ್ಹ ಕ್ರಮ. ರೋಟ್ರಿ ಕ್ಲಬ್ ನ ಮನವಿಯನ್ನು ಮನ್ನಿಸಿ 12 ವರ್ಷದೊಳಗಿರುವ ಮಕ್ಕಳಿಗೆ ಹೃದಯ ಸಂಬಂಧಿ ಕಾಯಿಲೆಗೆ ಉಚಿತ ಚಿಕಿತ್ಸೆ ನೀಡುತ್ತಿದ್ದಾರೆ ಎಂದವರು ಹೇಳಿದರು.
ಆಸ್ಪತ್ರೆಯ ಇನ್ನೋರ್ವ ಹಿರಿಯ ವೈದ್ಯರಾದ ಡಾ ಸಚಿನ್ ಗುದಗೆ ಮಾತನಾಡಿ, ಡಾ ಗೋವಿಂದ ಔರಾದ್ಕರ್ ಅವರು ನಮ್ಮ ಆಸ್ಪತ್ರೆಗೆ ಸೇವೆ ನೀಡಲು ಮುಂದಾಗಿದ್ದು ಬಹಳ ಸಂತೋಷ. ಅವರ ಸೇವೆ ನಾವಿನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳಬಹುದಾಗಿದೆ. ಈ ನಿಟ್ಟಿನಲ್ಲಿ ಇಂದು 12 ವರ್ಷದ ಕೆಳಗಿನ ಮಕ್ಕಳಿಗೆ ನಮ್ಮ ಆಸ್ಪತ್ರೆಯಲ್ಲಿ ಹೃದಯ ಸಂಬಂಧಿ ತಪಾಸಣೆ ಹಾಗೂ ಚಿಕಿತ್ಸೆಗೆ ವಿಶೇಷ ಶಿಬಿರ ಹಮ್ಮಿಕೊಂಡಿದ್ದು ಇಂದು ಸಂಜೆ ವರೆಗೆ ಜಿಲ್ಲೆಯ ಸಾರ್ವಜನಿಕರು ಶಿಬಿರದ ಸದುಪಯೋಗ ಪಡೆದುಕೊಳ್ಳಬೇಕೆಂದರು.
ಜಿಲ್ಲೆಯ ಹಿರಿಯ ವೈದ್ಯರಾದ ಡಾ ವಿ ವಿ ನಾಗರಾಜ, ಡಾ. ವಿಜಯಕುಮಾರ ಕೋಟೆ, ಡಾ.ಮಹೇಶ ತೊಂಡಾರೆ ಸೇರಿದಂತೆ ಆಸ್ಪತ್ರೆಯ ಹಿರಿಯ ವೈದ್ಯಾಧಿಕಾರಿಗಳು, ಸಿಬ್ಬಂದಿ ಹಾಗೂ ರೋಟರಿ ಕ್ಲಬ್ ನ ಇತರೆ ಪದಾಧಿಕಾರಿಗಳು ಈ ಸಂದರ್ಭದಲ್ಲಿ ಹಾಜರಿದ್ದರು.



























