
ಬೀದರ, ಫೆ.13:ವಿದ್ಯಾರ್ಥಿಗಳ ಭವಿಷ್ಯ ರೂಪಿಸುವಲ್ಲಿ ಶಿಕ್ಷಕರ ಪಾತ್ರ ಅತೀ ಮುಖ್ಯ ಎಂದು ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ ತಿಳಿಸಿದರು.
ಅವರು ಗುರುವಾರ ಶಾಹಿನ ಪದವಿಪೂರ್ವ ಕಾಲೇಜು ಸಭಾಂಗಣದಲ್ಲಿ ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕರ ಕಚೇರಿ ಬೀದರ ವತಿಯಿಂದ 2025-26ನೇ ಸಾಲಿನ ಎಸ್.ಎಸ್.ಎಲ್.ಸಿ. ಫಲಿತಾಂಶ ಉತ್ತಮಪಡಿಸಲು ಪ್ರೌಢ ಶಾಲಾ ಮುಖ್ಯ ಶಿಕ್ಷಕರ ಸಭೆ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.
ಎಸ್.ಎಸ್.ಎಲ್.ಸಿ. ಪೂರ್ವ ಸಿದ್ದತಾ ಪರೀಕ್ಷೆ 1, 2 ರಲ್ಲಿ 0% ಫಲಿತಾಂಶ ಮತ್ತು 50% ಫಲಿತಾಂಶ ಬಂದಂತಹ ಶಾಲೆಗಳಲ್ಲಿ ಬೆಳಿಗ್ಗೆ ಮತ್ತು ಸಾಯಂಕಾಲ ವಿಶೇಷ ತರಗತಿ ತೆಗೆದುಕೊಂಡು 3ನೇ ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ ಬರುವಂತೆ ಶಿಕ್ಷಕರು ನೋಡಿಕೊಳ್ಳಬೇಕೆಂದರು.
ಜಿಲ್ಲೆಯಲ್ಲಿ 0% ಫಲಿತಾಂಶ ಬಂದಂತಹ ಶಾಲೆಗಳಲ್ಲಿ ಶಿಕ್ಷಕರನ್ನು ಹೊಣೆಗಾರನ್ನಾಗಿ ಮಾಡಲಾಗುವುದು ಹಾಗೂ ಅಂತಹ ಶಿಕ್ಷಕರ ವಿರುದ್ಧ ಕಠಿಣ ಕ್ರಮಕೈಗೊಳ್ಳುವುದಾಗಿ ಜಿಲ್ಲಾಧಿಕಾರಿಗಳು ಎಚ್ಚರಿಕೆ ನೀಡಿದರು. ವಾರ್ಷಿಕ ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ ಬರುವ ನಿಟ್ಟಿನಲ್ಲಿ ಎಲ್ಲ ಶಿಕ್ಷಕರು ಪ್ರಾಮಾಣಿಕವಾಗಿ ವಿದ್ಯಾರ್ಥಿಗಳಿಗೆ ಬೋಧನೆ ಮಾಡಬೇಕು. ಫಲಿತಾಂಶ ಉತ್ತಮಗೊಳಿಸಲು ಈಗಾಗಲೇ ಕೆಕೆಆರ್ಡಿಬಿ ವತಿಯಿಂದ ಪ್ರತಿ ತಾಲ್ಲೂಕಿಗೆ 25 ಲಕ್ಷ ರೂ. ವೆಚ್ಚ ಮಾಡಿ ವಿಷಯವಾರು ಅತಿಥಿ ಶಿಕ್ಷಕರುಗಳನ್ನು ತೆಗೆದುಕೊಂಡು ವಿಶೇಷ ಬೋಧನೆಗೆ ಕ್ರಮ ವಹಿಸಲಾಗಿದೆ. ಈಗಾಗಲೇ ಅನೇಕ ಕಾರ್ಯಾಗಾರ ಆಯೋಜಿಸಿ ಶಿಕ್ಷಕರಿಗೆ ಸಲಹೆ ಸೂಚನೆ ನೀಡಿದರು ಸಹ ಉತ್ತಮ ಫಲಿತಾಂಶ ಬರುತ್ತಿಲ್ಲವೆಂದು ಜಿಲ್ಲಾಧಿಕಾರಿಗಳು ವಿಷಾದ ವ್ಯಕ್ತಪಡಿಸಿದರು.
ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಗಿರೀಶ ಬದೋಲೆ ಮಾತನಾಡಿ, ಎಸ್.ಎಸ್.ಎಲ್.ಸಿ. ಪರೀಕ್ಷೆ ಫಲಿತಾಂಶ ಉತ್ತಮಗೊಳಿಸಲು ಶಿಕ್ಷಣ ಇಲಾಖೆ ವತಿಯಿಂದ 29 ಅಂಶ ಕಾರ್ಯಕ್ರಮ ರೂಪಿಸಿ ಗುಂಪು ಚಟುವಟಿಕೆ, ಹಿಂದುಳಿದ ಮಕ್ಕಳನ್ನು ಗುರುತಿಸಿ ಗುಂಪು ಸ್ಪರ್ಧೆ ಹಾಗೂ ಪೆÇೀಷಕರ ಸಭೆಗಳ ಏರ್ಪಡಿಸಿ ಪೂರ್ವ ಸಿದ್ದತಾ ಪರೀಕ್ಷೆ ಮಾಡಲಾಗುತ್ತಿದೆ. ಆದರೂ ಸಹ ಉತ್ತಮ ಫಲಿತಾಂಶ ಬರುತ್ತಿಲ್ಲ. 35 ಶೈಕ್ಷಣಿಕ ಜಿಲ್ಲೆಗಳ ಫಲಿತಾಂಶ ನೋಡಿದರೆ ಬೀದರ ಜಿಲ್ಲೆಗೆ 34ನೇ ಸ್ಥಾನ ಬಂದಿದೆ. ಶೈಕ್ಷಣಿಕ ಹಿಂದುಳಿದ ಮಕ್ಕಳನ್ನು ವಿಶೇಷ? ತರಗತಿ ತೆಗೆದುಕೊಂಡರೂ ಸಹ ಫಲಿತಾಂಶ ಸುಧಾರಣೆ ಆಗುತ್ತಿಲ್ಲ. ವಿಷಯವಾರು ಶಿಕ್ಷಕರು ಹೆಚ್ಚಿನ ಗಮನಹರಿಸಿ ವಿದ್ಯಾರ್ಥಿಗಳ ಬೋಧನೆ ಮಾಡಬೇಕು. ಖಾಸಗಿ ಶಾಲೆಗಳಲ್ಲಿ ಉತ್ತಮ ಫಲಿತಾಂಶ ಬರುತ್ತಿದ್ದು ಸರ್ಕಾರಿ ಶಾಲೆಗಳಲ್ಲಿ ಏಕೆ ಉತ್ತಮ ಫಲಿತಾಂಶ ಬರುತ್ತಿಲ್ಲ ಎಂಬುವುದು ಬಿಇಓ, ಬಿಆರ್ಸಿ ಗಳು ಗಮನಹರಿಸಬೇಕು. ಯಾವ ಯಾವ ಶಾಲೆಗಳಲ್ಲಿ ಉತ್ತಮ ಫಲಿತಾಂಶ ಬರುತ್ತದೆ ಅಂತಹ ಶಾಲಾ ಶಿಕ್ಷಕರಿಗೆ ಜಿಲ್ಲಾಡಳಿತ ವತಿಯಿಂದ ಸನ್ಮಾನಿಸಲಾಗುವುದು ಎಂದರು.
ಬೀದರ ಮಹಾನಗರ ಪಾಲಿಕೆಯ ಆಯುಕ್ತರಾದ ಮುಕುಲ್ ಜೈನ್ ಅವರು ಮಾತನಾಡಿ, ವಿದ್ಯಾರ್ಥಿಗಳು ಯಾವ ವಿಷಯದಲ್ಲಿ ಹಿಂದೆ ಇದ್ದಾರೆ ಎಂಬುದನ್ನು ಗಮನಿಸಿ ಅವರು ವಿಶೇಷ ಬೋಧನೆ ಮಾಡುವಂತೆ ಶಿಕ್ಷಕರಿಗೆ ಸಲಹೆ ನೀಡಿದರು.
ಈ ಕಾರ್ಯಾಗಾರದಲ್ಲಿ ಪೆÇ್ರೀಬೇಷನರಿ ಐಎಎಸ್ ಅಧಿಕಾರಿ ರಮ್ಯಾ ರಂಗನಾಥ, ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕರಾದ ಹೆ.ಜಿ.ಸುರೇಶ, ಡಯಟ್ ಪ್ರಾಚಾರ್ಯರು ಕಾರ್ಯಕ್ರಮ ಸಂಯೋಜಕರಾದ ಸೈಯದ ಪುರ್ಖಾನ್, ಶಾಹೀನ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿಗಳಾದ ಅಬ್ದುಲ್ ಹಜಿಜ್, ಶಾಲಾ ಶಿಕ್ಷಣ ಇಲಾಖೆಯ ವಿಷಯ ನಿರ್ವಾಹಕರು, ಎಲ್ಲಾ ತಾಲ್ಲೂಕಿನ ಕ್ಷೇತ್ರ ಶಿಕ್ಷಣ ಅಧಿಕಾರಿಗಳು ಸೇರಿದಂತೆ ಎಲ್ಲಾ ತಾಲ್ಲೂಕಿನ ಸರ್ಕಾರಿ ಅನುದಾನ ರಹಿತ ಶಾಲೆಗಳ ಮುಖ್ಯ ಶಿಕ್ಷಕರು ಉಪಸ್ಥಿತರಿದ್ದರು.






















