
ಸಂಜೆವಾಣಿ ವಾರ್ತೆ,
ವಿಜಯಪುರ, ಫೆ. ೨೮: ಜಗತ್ತಿನಲ್ಲಿ ತಾಯಿ ಋಣ ಹಾಗೂ ಕಲಿಸಿದ ಶಿಕ್ಷಕನ ಋಣ ಯಾವ ಕಾಲಕ್ಕೂ ತೀರಿಸಲು ಸಾಧ್ಯವಿಲ್ಲದಂತಹ ಅದ್ಭುತ ತ್ಯಾಗಿ ಜೀವಿ ಇವರಿಬ್ಬರು. ನಾನು ಇಂತಹ ಶಿಕ್ಷಕರ ಕೈಯಲ್ಲೇ ಕಲಿತು ಒಂದು ಮಠದ ಸ್ವಾಮೀಜಿಯಾಗಿದ್ದೇನೆ ಎಂಬ ಹೆಮ್ಮೆ ನನಗಿದೆ ಎಂದು ಮನಗೂಳಿ ಹಿರೇಮಠ ಶ್ರೀ.ಷ.ಬ್ರ.ಅಭಿನವ ಸಂಗನಬಸವ ಶಿವಾಚಾರ್ಯರು ಹೇಳಿದರು.
ಬಸವನ ಬಾಗೇವಾಡಿ ತಾಲೂಕಿನ ಮನಗೂಳಿಯ ಶ್ರೀ ಎಸ್.ಬಿ.ಪಾಟೀಲ ಸಂಯುಕ್ತ ಪದವಿಪೂರ್ವ ಮಹಾವಿದ್ಯಾಲಯದ ೨೦೦೩-೦೪ನೇ ಸಾಲಿನ ಎಸ್ಎಸ್ಎಲ್ಸಿ ಹಾಗೂ ೨೦೦೫-೦೬ನೇ ಸಾಲಿನ ಪಿಯುಸಿ ವಿದ್ಯಾರ್ಥಿಗಳಿಂದ ಹಮ್ಮಿಕೊಂಡಿದ್ದ ಗುರುವಂದನಾ ಹಾಗೂ ಸ್ನೇಹ ಸಮ್ಮಿಲನ ಸಮಾರಂಭದ ದಿವ್ಯ ಸಾನ್ನಿಧ್ಯವನ್ನು ವಹಿಸಿ ಮಾತನಾಡಿದ ಅವರು, ದೇಶದ ಭವಿಷ್ಯದ ಪೀಳಿಗೆಯನ್ನು ತಮ್ಮ ಜ್ಞಾನದಿಂದ ಶ್ರೀಮಂತಗೊಳಿಸುವ ಮುಖಾಂತರ ದೇಶದ ಅಡಿಪಾಯವನ್ನು ನಿರ್ಮಿಸುವಲ್ಲಿ ಶಿಕ್ಷಕರು ಪ್ರಮುಖ ಪಾತ್ರ ವಹಿಸುತ್ತಾರೆ ಎಂದರು.
ಶಿಕ್ಷಕ ಎಸ್.ಎಸ್. ಬಿರಾದಾರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಈಗಿನ ವಿದ್ಯಾರ್ಥಿಗಳು ವ್ಯರ್ಥ ಸಮಯ ಹಾಳು ಮಾಡುತ್ತಿದ್ದಾರೆ. ಕೊಟ್ಟ ಸಮಯವನ್ನು ಸರಿಯಾಗಿ ಉಪಯೋಗ ಮಾಡಿಕೊಳ್ಳಬೇಕು ಎಂದರು.
ಶಿಕ್ಷಕ ಬಿ.ಬಿ. ಲಗಟಿಗೆರ ಅಧ್ಯಕ್ಷತೆ ವಹಿಸಿ ಮಾತನಾಡಿ, ಹಳೆಯ ವಿದ್ಯಾರ್ಥಿಗಳು ಗುರುವಂದನವನ್ನು ಅಚ್ಚುಕಟ್ಟಾಗಿ ಮಾಡಿದ್ದಾರೆ. ಅವರು ವಿದ್ಯಾರ್ಥಿ ಜೀವನವನ್ನು ಮುಗಿಸಿಕೊಂಡು ಒಳ್ಳೆಯ ಕೆಲಸ ಕಾರ್ಯದಲ್ಲಿ ತೊಡಗಿಕೊಂಡಿದ್ದಾರೆ. ರೈತರಾಗಿದ್ದಾರೆ, ಪೊಲೀಸರಾಗಿದ್ದಾರೆ, ಇಂಜಿನಿಯರ್ಗಳಾಗಿದ್ದಾರೆ, ವಕೀರಾಗಿದ್ದಾರೆ, ಶಿಕ್ಷಕರಾಗಿದ್ದಾರೆ. ಹೀಗೆ ಅವರ ಮಕ್ಕಳಿಗೂ ಉನ್ನತ ಸ್ಥಾನ ಸಿಗಲಿ, ಮಕ್ಕಳಿಗೆ ಸಂಸ್ಕಾರ ಕೊಡುವಂತಾಗಲಿ ಎಂದರು.
ಶಿಕ್ಷಕರಾದ ಎಂ.ಎಸ್.ಮಾದರ, ಸಿ.ಬಿ.ಸಜ್ಜನ, ಬಿ.ಎಚ್.ಹಿರೇಮಠ, ಎಂ.ಬಿ.ಗುಮ್ಮಡಿ, ಎಸ್.ಬಿ. ಬಿರಾದಾರ, ಪಿ.ಟಿ. ರಾಠೋಡ. ಆರ್.ಕೆ. ಹನಗಂಡಿ, ಎಂ.ಎಸ್. ನಾಯಕ, ಬಿ.ಎಂ. ಪಾಟೀಲ. ಡಿ.ಎಸ್. ಬಂಡಗಾರ. ಎಸ್.ಬಿ. ಬಿಳೂರ, ಐ.ಡಿ. ಚೆನ್ನಾಳ, ಸಿಪಾಯಿಗಳಾದ ಕೆ.ಟಿ. ಕರಾಬಿ, ಸಂಗಪ್ಪ ಹಡಪದ, ಎಂ.ಎಲ್. ಮನಗೂಳಿ, ವಿದ್ಯಾರ್ಥಿ, ವಿದ್ಯಾರ್ಥಿನಿಯರು ಭಾಗವಹಿಸಿದ್ದರು.



























