
ಔರಾದ್ : ಮೇ.23:ಭಯೋತ್ಪಾದನಾ ಚಟುವಟಿಕೆಗಳು ಮನುಕುಲಕ್ಕೆ ಮಾರಕಗಿದೆ,ಅಂತಹ ಭಯೋತ್ಪಾದನಾ ಕೃತ್ಯಗಳನ್ನು ಎಲ್ಲರೂ ಖಂಡಿಸಬೇಕು ಎಂದು ಲೋಕೋಪಯೋಗಿ ಇಲಾಖೆಯ ಎಇಇ ಪ್ರೇಮಸಾಗರ ಹಮಿಲಪೂರೆ ಹೇಳಿದರು.
ತಾಲೂಕಿನ ಸಂತಪೂರ ಲೋಕೋಪಯೋಗಿ ಇಲಾಖೆಯಲ್ಲಿ ಬುಧವಾರ ಏರ್ಪಡಿಸಿದ್ದ ಭಯೋತ್ಪಾದನಾ ವಿರೋಧಿ ದಿನ ಕಾರ್ಯಕ್ರಮದಲ್ಲಿ ಪ್ರತಿಜ್ಞಾವಿಧಿ ಬೋಧಿಸಿ ಮಾತನಾಡಿದ ಅವರು ಮಾಜಿ ಪ್ರಧಾನಿ ರಾಜೀವ್ ಗಾಂಧಿ ಎಲ್ಟಿಟಿಇ ದಾಳಿಗೆ ತುತ್ತಾಗಿ ಹತ್ಯೆಯಾದ ಮೇ 21ನ್ನು ಭಯೋತ್ಪಾದನಾ ವಿರೋಧಿ ದಿನವನ್ನಾಗಿ ಆಚರಿಸಲಾಗುತ್ತಿದೆ. ಬದುಕುವ ಹಕ್ಕು ಎಲ್ಲರಿಗೂ ಇದ್ದು, ಅದನ್ನು ಬಲವಂತವಾಗಿ ಅಂತ್ಯಗೊಳಿಸುವುದು ಕಾನೂನು ಬಾಹಿರ ಎಂದು ಹೇಳಿದರು. ಭಯೋತ್ಪಾದನಾ ಚಟುವಟಿಕೆಯಲ್ಲಿ ತೊಡಗಿರುವವರು ಕಾನೂನಿಗೆ ವಿರುದ್ಧವಾಗಿ ನಡೆದುಕೊಳ್ಳುತ್ತ ಮನುಕುಲಕ್ಕೆ ಮಾರಕವಾಗಿದ್ದಾರೆ. ಭಯೋತ್ಪಾದನೆ ಮಟ್ಟಹಾಕಲು ಎಲ್ಲರ ಸಹಕಾರ ಅಗತ್ಯ. ಸ್ವಾರ್ಥ ಬಿಟ್ಟು ರಾಜ್ಯ ಹಾಗೂ ದೇಶದ ಹಿತ ದೃಷ್ಟಿಯಿಂದ ಭಯೋತ್ಪಾದನೆ ವಿರುದ್ಧ ಎಚ್ಚೆತ್ತುಕೊಳ್ಳಬೇಕಿದೆ ಎಂದು ತಿಳಿಸಿದರು.
ಭಯೋತ್ಪಾದನಾ ಕೃತ್ಯಗಳ ವಿರುದ್ಧ ಜಾಗೃತರಾಗದಿದ್ದಲ್ಲಿ ಸಮಾಜಘಾತಕ ಶಕ್ತಿಗಳು ಹಾಗೂ ಭಯೋತ್ಪಾದಕರು ಅಮಾನುಷ ಕೃತ್ಯಗಳನ್ನು ಮುಂದುವರೆಸುವರು. ಇದರಿಂದ ಅಮಾಯಕರು ಜೀವ ಕಳೆದುಕೊಳ್ಳುವ ಜೊತೆಗೆ ದೇಶದ ಅಭಿವೃದ್ಧಿ ಕುಂಟಿತಗೊಳ್ಳುವುದು ಎಂದರು.
ಈ ಸಂದರ್ಭದಲ್ಲಿ ಜೆಇ ಸುನಿಲ್ ಚಿಲರ್ಗೆ, ಜುಂಜೆರಾವ ಕರಂಜಿ, ಪ್ರಥಮ ದರ್ಜೆ ಸಹಾಯಕ
ಬಸಪ್ಪ ಮೇತ್ರೆ, ದ್ವಿತೀಯ ದರ್ಜೆ ಸಹಾಯಕ ಜಗನ್ನಾಥ ಸೇರಿದಂತೆ ಕಚೇರಿಯ ಸಿಬ್ಬಂದಿಗಳು ಪಾಲ್ಗೊಂಡಿದ್ದರು.