ಕ್ರೀಡಾ ಇಲಾಖೆಯಿಂದ ಬೇಸಿಗೆ ಶಿಬಿರದ ಸಮಾರೋಪ

ಕೋಲಾರ,ಮೇ,೨೯-ಮಕ್ಕಳು ದೈಹಿಕ ಮತ್ತು ಮಾನಸಿಕವಾಗಿ ಬೆಳವಣಿಗೆಯಾಗಲು ಶಿಕ್ಷಣದೊಂದಿಗೆ ಕ್ರೀಡೆಗಳಿಗೆ ಒತ್ತು ನೀಡಿದಲ್ಲಿ ಕ್ರಿಯಾಶೀಲತೆ ಸಾಧ್ಯ ಎಂದು ಜಿಲ್ಲಾ ಪ್ಯಾರಾ ಒಲಂಪಿಕ್ ಕ್ರೀಡಾ ಸಂಸ್ಥೆಯ ಜಿಲ್ಲಾಧ್ಯಕ್ಷ ಹಾಗೂ ಕಾಂಗ್ರೆಸ್ ಜಿಲ್ಲಾ ಎಸ್ಸಿಘಟಕದ ಅಧ್ಯಕ್ಷ ಕೆ.ಜಯದೇವ್ ತಿಳಿಸಿದರು.


ನಗರದ ಸರ್ ಎಂ ವಿಶ್ವೇಶ್ವರಯ್ಯ ಕ್ರೀಡಾಂಗಣದಲ್ಲಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಆಶ್ರಯದಲ್ಲಿ ಎರಡು ತಿಂಗಳು ನಡೆ ಬೇಸಿಗೆ ಕ್ರೀಡಾ ಶಿಬಿರದ ಮುಕ್ತಾಯ ಸಮಾರಂಭದಲ್ಲಿ ಅವರು ಮಾತನಾಡಿದರು.


ಕ್ರೀಡೆಗಳು ದೈನಂದಿನ ಬದುಕಿನ ಭಾಗವಾಗಿದೆ, ಬದಲಾದ ಆಹಾರ ಪದ್ದತಿಯಿಂದ ಇಂದು ಅನೇಕ ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಿದ್ದೇವೆ, ಇದನ್ನು ತಡೆಯಲು ಮತ್ತು ಉತ್ತಮ ಜೀವನ ನಡೆಸಲು ಕ್ರೀಡೆ,ವ್ಯಾಯಾಮ ನಿತ್ಯ ಅಗತ್ಯವಿದೆ ಎಂಬುದನ್ನು ಮಕ್ಕಳು ಅರಿಯಬೇಕು ಎಂದರು.


ಪೋಷಕರು ತಮ್ಮ ಮಕ್ಕಳು ಪರೀಕ್ಷೆಯಲ್ಲಿ ಎಷ್ಟು ಅಂಕ ಪಡೆದ ಎಂದ ನೋಡುತ್ತಾರೆಯೇ ಹೊರತೂ ಆ ಮಗುವಿನ ಆರೋಗ್ಯದ ಕಡೆ ಗಮನಹರಿಸುವುದಿಲ್ಲ, ಕ್ರೀಡೆಯೂ ಸಮಗ್ರ ಶಿಕ್ಷಣದ ಭಾಗವಾಗಿದ್ದು, ಪಠ್ಯದಷ್ಟೇ ಕ್ರೀಡೆಗಳಿಗೂ ಪ್ರೋತ್ಸಾಹ ಅಗತ್ಯವಾಗಿದೆ ಎಂದರು.


ಓದುವುದರಲ್ಲಿ ರಾಷ್ಟ್ರೀಯ ದಾಖಲೆ ನಿರ್ಮಿಸಬಹುದು ಆದರೆ ಕ್ರೀಡೆಯಲ್ಲಿ ಸಾಧಕರಾದರೆ ವಿಶ್ವ ದಾಖಲೆ ನಿರ್ಮಿಸುವ ಅವಕಾಶವೂ ನಿಮ್ಮದಾಗುತ್ತದೆ, ಜತೆಗೆ ಆರೋಗ್ಯ ನಿಮ್ಮೊಂದಿಗೆ ಸದಾ ಕಾಯುತ್ತದೆ ಎಂದು ಕಿವಿಮಾತು ಹೇಳಿದ ಅವರು, ಕ್ರೀಡೆಗಳು ದುಶ್ಚಟಗಳಿಂದ ದೂರವಾಗಲು ಸಹಾ ನೆರವಾಗುತ್ತವೆ ಎಂದರು.


ವಿಕಲಚೇತನರು ಸಹಾ ಮುಖ್ಯವಾಹಿನಿಗೆ ಬರಬಹುದು ಎಂಬುದಕ್ಕೆ ಇತ್ತೀಚಿನ ಒಲಂಪಿಕ್ಸ್‌ನಲ್ಲಿ ಅಂಗವಿಕಲ ಕ್ರೀಡಾಪಟು ಗಳು ಮಾಡಿರುವ ಸಾಧನೆಯೇ ಸಾಕ್ಷಿ ಯಾಗಿದೆ, ಆದ್ದರಿಂದ ಅವರನ್ನು ತಾತ್ಸಾರದಿಂದ ಕಾಣದೇ ಅವರಿಗೆ ಪ್ರೋತ್ಸಾಹ ನೀಡಬೇಕು, ಅನುಕಂಪ ಬೇಡ ಅವರಿಗೆ ಪ್ರೋತ್ಸಾಹ ನೀಡಿ ಎಂದರು.


ಜಿಲ್ಲಾ ಯುವಜನಸಬಲೀಕರಣ ಹಾಗೂ ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕಿ ಗೀತಾ ಮಕ್ಕಳಿಗೆ ಬಹುಮಾನ ವಿತರಿಸಿ ಮಾತನಾಡಿ, ಕ್ರೀಡೆಗಳಿಂದ ಜೀವನದಲ್ಲಿ ಶಿಸ್ತು, ಶ್ರದ್ಧೆ ಹೆಚ್ಚುತ್ತದೆ, ಮನಸ್ಸು ಚಂಚಲತೆಯಿಂದ ದೂರವಾಗಿ ಉತ್ತಮ ಅಭ್ಯಾಸಗಳು ಮೈಗೂಡಿಸಿಕೊಳ್ಳಲು ಸಹಕಾರ ನೀಡುತ್ತದೆ ಎಂದು ತಿಳಿಸಿದರು.


ಇಂದು ಕ್ರೀಡಾಂಗಣ ಸುಸಜ್ಜಿತವಾಗಿ ಸಿದ್ದಗೊಂಡಿದೆ, ಕ್ರೀಡೆಗಳಲ್ಲಿ ಆಸಕ್ತಿ ಇರುವವರಿಗೆ ಇಲಾಖೆಯ ತರಬೇತುದಾರರು ಇದ್ದು, ಅವರ ನೆರವು ಪಡೆದು ಉತ್ತಮ ಕ್ರೀಡಾಪಟುಗಳಾಗಿ ಹೊರಹೊಮ್ಮಬಹುದು ಎಂದ ಅವರು, ಕ್ರೀಡೆಯಿಂದ ಅಂತರ ರಾಷ್ಟ್ರೀಯ ಸಾಧನೆ ಮಾತ್ರವಲ್ಲ, ನಿಮ್ಮ ಉನ್ನತ ಶಿಕ್ಷಣದಲ್ಲಿ ಮತ್ತು ನಂತರ ಉದ್ಯೋಗದಲ್ಲೂ ಮೀಸಲಾತಿ ಪಡೆಯಲು ಅವಕಾಶವಿದೆ ಎಂದು ತಿಳಿಸಿದರು. ಪೋಷಕರು ಮಕ್ಕಳ ಮನಸ್ಥಿತಿ ಮನಗೊಂಡು, ಅವರು ದೈಹಿಕವಾಗಿ ಮಾನಸಿಕವಾಗಿ ಭೌತಿಕವಾಗಿ ಬೆಳವಣಿಗೆಯಾಗಲು ಪ್ರೋತ್ಸಾಹ ನೀಡಬೇಕು ಜೊತೆಗೆ ಟಿವಿ ಮತ್ತು ಮೊಬೈಲ್‌ಗಳಿಂದ ಮಕ್ಕಳನ್ನು ದೂರಮಾಡಿ ಅವರ ಉತ್ತಮ ಬದುಕಿಗಾಗಿ ಕ್ರೀಡೆಗಳತ್ತ ಗಮನಹರಿಸಲು ಪ್ರೇರಣೆ ನೀಡಿ ಕಿವಿಮಾತು ಹೇಳಿದರು.


ಕಾರ್ಯಕ್ರಮದಲ್ಲಿ ಹಿರಿಯ ಕ್ರೀಡಾಪಟುಗಳಾದ ಎಚ್.ಜಗನ್, ಆರ್.ಶ್ರೀನಿವಾಸನ್, ಗೌಸ್‌ಖಾನ್, ರಾಜೇಶ್, ಪುರುಷೋತ್ತಮ್, ನಂದೀಶ್ ಕುಮಾರ್, ಶಿವಪ್ಪ, ತರಬೇತುದಾರ ವೆಂಕಟೇಶ್ ಹಾಗೂ ಕ್ರೀಡಾಪಟುಗಳು ಮಕ್ಕಳು ಪೋಷಕರು ಭಾಗವಹಿಸಿದ್ದರು.