ಸಂಜೆವಾಣಿ ವಾರ್ತೆ
ವಿಜಯಪುರ, ಅ. ೫: ಜಿಲ್ಲೆಯಲ್ಲಿ ಪಕ್ವವಾಗಿರುವ ಕಬ್ಬನ್ನು ಆದ್ಯತೆಯ ಮೇಲೆ ಕಟಾವು ಮಾಡಿ ನವೆಂಬರ್ ೧ ರಿಂದ ಕಬ್ಬು ನುರಿಸುವ ಕಾರ್ಯ ಆರಂಭಿಸಿ ಕಬ್ಬು ಪೂರೈಸಿದ ರೈತರಿಗೆ ೧೪ ದಿನಗಳೊಳಗಾಗಿ ಕಬ್ಬಿನ ಹಣ ಪಾವತಿಸಲು ಸಕ್ಕರೆ ಕಾರ್ಖಾನೆ ಮಾಲೀಕರಿಗೆ ಜಿಲ್ಲಾಧಿಕಾರಿ ಡಾ. ಆನಂದ ಕೆ. ಅವರು ಸೂಚನೆ ನೀಡಿದ್ದಾರೆ.
ಶನಿವಾರ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಸಕ್ಕರೆ ಕಾರ್ಖಾನೆಗಳ ಮಾಲೀಕರೊಂದಿಗೆ ಸಭೆ ನಡೆಸಿದ ಅವರು, ಆಯುಕ್ತರು ಕಬ್ಬು ಅಭಿವೃದ್ದಿ ಹಾಗೂ ಸಕ್ಕರೆ ನಿರ್ದೇಶನಾಲಯ ಬೆಂಗಳೂರು ಇವರು ಪ್ರಸಕ್ತ ೨೦೨೪-೨೫ನೇ ಸಾಲಿನಲ್ಲಿ ಜಿಲ್ಲೆಯ ಸಕ್ಕರೆ ಕಾರ್ಖಾನೆಗಳು ನುರಿಸಿ ಉತ್ಪಾದಿಸಲಾಗುವ ಸಕ್ಕರೆ ಪ್ರಮಾಣಕ್ಕನುಗುಣವಾಗಿ ಕಬ್ಬು ನುರಿಸುವ ಹಂಗಾಮಿಗೆ ಪ್ರತಿ ಟನ್ ಕಬ್ಬಿಗೆ ಸಾಗಾಣಿಕೆ ಮತ್ತು ಕಟಾವು ಮಾಡುವ ದರ ಸೇರಿದಂತೆ ಪ್ರತಿ ಟನ್ ಕಬ್ಬಿಗೆ ಕಾರ್ಖಾನೆವಾರು ಎಫ್ಆರ್ಪಿ ದರವನ್ನು ನಿಗದಿಪಡಿಸಲಾಗಿದೆ ಎಂದರು.
ಆಯುಕ್ತರು ಕಬ್ಬು ಅಭಿವೃದ್ದಿ ಹಾಗೂ ಸಕ್ಕರೆ ನಿರ್ದೇಶನಾಲಯ ಬೆಂಗಳೂರು ಅವರು ಪ್ರತಿ ಟನ್ ಕಬ್ಬಿಗೆ ದರ ನಿಗದಿ ಪಡಿಸಿದಂತೆ ಜಿಲ್ಲೆಯ ಚಡಚಣ ತಾಲೂಕಿನ ದತ್ತ ಇಂಡಿಯಾ ಸಕ್ಕರೆ ಹಾವಿನಾಳ ಸಕ್ಕರೆ ಕಾರ್ಖಾನೆ ರೂ.೩೫೯೪, ಭೀಮಾಶಂಕರ ಸಹಕಾರಿ ಸಕ್ಕರೆ ಕಾರ್ಖಾನೆ ನಿ ರೂ. ೩೨೯೧, ಇಂಡಿ ತಾಲ್ಲೂಕಿನ ಹಿರೇಬೇವನೂರು ಇಂಡಿಯನ್ ಕೇನ ಪೌವರ ಲಿ. ರೂ. ೩೪೧೫, ಜಮಖಂಡಿ ಶುಗರ್ಸ ಲಿ ನಾದ ಬಿಕೆ. ರೂ. ೩೩೪೬, ಆಲಮೇಲ ತಾಲ್ಲೂಕಿನ ಕೆಪಿಆರ್ ಶುಗರ್ಸನಲ್ಲಿ ರೂ.೩೨೯೧, ಮಲಘಾಣದ ಸಾಯಿಬಸವ ಶುಗರ್ಸ ರೂ. ೩೨೯೧, ಸಿಂದಗಿ ತಾಲ್ಲೂಕಿನ ಸಂಗಮನಾಥ ಶುಗರ್ಸ ಯರಗಲ್ಲ ಬಿಕೆಯ ರೂ. ೩೨೯೧, ಮುದ್ದೇಬಿಹಾಳ ತಾಲ್ಲೂಕಿನ ಬಾಲಾಜಿ ಶುಗರ್ಸಡಿ ಕೆಮಿಕಲ್ಪ ಯರಗಲ್ಲನಲ್ಲಿ ರೂ. ೩೭೭೧, ಬಬಲೇಶ್ವರ ತಾಲೂಕಿನ ಶ್ರೀ ಬಸವೇಶ್ವರ ಶುಗರ್ಸ ಕಾರಜೋಳನಲ್ಲಿ ರೂ.೩೭೭೫, ಚಿಕ್ಕಗಲಗಲಿಯ ನಂದಿ ಸಹಕಾರಿ ಸಕ್ಕರೆ ಕಾರ್ಖಾನೆ ನಿ ರೂ. ೩೮೧೦ ನಿಗದಿಪಡಿಸಲಾಗಿದ್ದು, ೧೪ ದಿನಗಳೊಳಗಾಗಿ ಆಯಾ ರೈತರ ಖಾತೆಗೆ ಯಾವುದೇ ವಿಳಂಬವಿಲ್ಲದೆ ಕಬ್ಬಿನ ಮೊತ್ತವನ್ನು ಜಮೆ ಮಾಡುವಂತೆ ಜಿಲ್ಲಾಧಿಕಾರಿಗಗಳು ಕಟ್ಟುನಿಟ್ಟಾಗಿ ಸೂಚಿಸಿದರು.
ಈ ಸಭೆಯಲ್ಲಿ ಆಹಾರ ಇಲಾಖೆಯ ಉಪ ನಿರ್ದೇಶಕ ವಿನಯಕುಮಾರ್ ಪಾಟೀಲ, ಕೃಷಿ ಜಂಟಿ ನಿರ್ದೇಶಕ ಶಿವನಗೌಡ ಪಾಟೀಲ, ಸಹಕಾರಿ ಸಂಘಗಳ ಉಪ ನಿಬಂಧಕರು ಹಾಗೂ ಭೀಮಾಶಕರ ಸಕ್ಕರೆ ಕಾರ್ಖಾನೆ ಮತ್ತು ನಂದಿ ಸಕ್ಕರೆ ಕಾರ್ಖಾನೆಯ ವ್ಯವಸ್ಥಾಪಕ ನಿರ್ದೇಶಕಿ ಭಾಗ್ಯಶ್ರೀ, ಪರಿಸರ ಅಧಿಕಾರಿ ವಿವೇಕ, ಜಿಲ್ಲೆಯ ವಿವಿಧ ಸಕ್ಕರೆ ಕಾರ್ಖಾನೆಯ ಮಾಲೀಕರು ಹಾಗೂ ವ್ಯವಸ್ಥಾಪಕ ನಿರ್ದೇಶಕರು ಉಪಸ್ಥಿತರಿದ್ದರು.
























