
ಬೀದರ್: ಡಿ.5:ಪ್ರವಾದಿಯವರ 1500 ನೇ ಜನ್ಮ ದಿನಾಚರಣೆಯ ಅಂಗವಾಗಿ ಡಿ. 7ರಂದು ಶರಣರ ನಾಡು ಬಸವಕಲ್ಯಾಣದ ಅಲ್ಫಾ ಮೈದಾನದಲ್ಲಿ ಸಂಜೆ ಸೂಫಿ-ಸಂತರ ಸಮ್ಮೇಳನ ಆಯೋಜಿಸಲಾಗುತ್ತಿದೆ ಎಂದು ಕರ್ನಾಟಕ ರಾಜ್ಯದ ಮುಖ್ಯ ಸಚೇತಕ ಹಾಗೂ ಎಂಎಲ್ಸಿ ಸಲೀಂ ಅಹ್ಮದ ತಿಳಿಸಿದರು.
ಈ ಕುರಿತು ಗುರುವಾರ ನಗರದಲ್ಲಿ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿ, ಪ್ರವಾದಿಯವರ 1500 ನೇ ವಾರ್ಷಿಕೋತ್ಸವ ಆಚರಣೆ ಈಗಾಗಲೆ ಹುಬ್ಬಳ್ಳಿ ಮತ್ತು ಕೊಪ್ಪಳದಂತಹ ನಗರಗಳಲ್ಲಿ ಆಚರಿಸಲಾಗಿದ್ದು ಇದು ಮೂರನೆ ಸಮಾವೇಶವಾಗಿದೆ ಎಂದರು.
ಅಂತರರಾಷ್ಟ್ರೀಯ ಖ್ಯಾತಿಯ ವ್ಯಕ್ತಿ ಮೌಲಾನಾ ಮುಹಮ್ಮದ್ ಒಬೈದುಲ್ಲಾ ಖಾನ್ ಆಜ್ಮಿ, ರಾಜ್ಯಸಭೆಯ ಮಾಜಿ ಸದಸ್ಯ ಮತ್ತು ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿಯ ಉಪಾಧ್ಯಕ್ಷ, ಮಂಡಳಿಯ ಸದಸ್ಯ ಮೌಲಾನಾ ಅಬು ತಾಲಿಬ್ ರಹಮಾನಿ ಭಾಗವಹಿಸಲಿದ್ದಾರೆ. ಈ ಸಂದರ್ಭದಲ್ಲಿ ವಕ್ಫ ಕಮಿಟಿ ಅಧ್ಯಕ್ಷರು ಹಾಗೂ ಹಜರತ್ ಹಫೀಜ್ ಅಲಿ ಮುಹಮ್ಮದ್ ಅಲ್ ಹುಸೈನಿ, ಖ್ವಾಜಾ ಬಂದಾ ನವಾಜ್ ದರ್ಗಾದ ಸಜ್ಜಾದಾ ಅವರನ್ನು ಅಭಿನಂದಿಸಲಾಗುವುದು ಎಂದರು.
ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೋಳಿ, ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ್ ಖಂಡ್ರೆ, ಪೌರಾಡಳಿತ ಸಚಿವ ರಹೀಂ ಖಾನ್, ಮಾಜಿ ಸಚಿವ ರಾಜಶೇಖರ್ ಪಾಟೀಲ್ ಹುಮ್ನಾಬಾದ್, ಮಾಜಿ ಎಂಎಲ್ಸಿ ಅರವಿಂದ್ ಕುಮಾರ್ ಅರಳಿ, ಎಐಸಿಸಿ ಪ್ರಧಾನ ಕಾರ್ಯದರ್ಶಿ ಸೈಯದ್ ನಾಸಿರ್ ಹುಸೇನ್, ಉತ್ತರ ಪ್ರದೇಶದ ಉಸ್ತುವಾರಿ ಸಂಸದ ಇಮ್ರಾನ್ ಮಸೂದ್, ತೆಲಂಗಾಣದ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವ ಮೊಹಮ್ಮದ್ ಅಜರೋದ್ದೀನ್ (ಹೈದ್ರಾಬಾದ್) ಮತ್ತು ಕೆಕೆಆರ್ಡಿಬಿ ಅಧ್ಯಕ್ಷರು ಮತ್ತು ಶಾಸಕ ಡಾ. ಅಜಯ್ ಸಿಂಗ್ ಭಾಗವಹಿಸಲಿದ್ದಾರೆ. ಅಲ್ಲದೇ ಪಕ್ಕದ ಮಹಾರಾಷ್ಟ್ರ ರಾಜ್ಯ ಹಾಗೂ ತೆಲಂಗಾಣದ ಅನೇಕರು ಭಾಗವಹಿಸಲಿದ್ದಾರೆ ಆದ್ದರಿಂದ ಪ್ರವಾದಿ ಅವರ 1500 ನೇ ಭವ್ಯ ವಾರ್ಷಿಕೋತ್ಸವದ ಸಂದರ್ಭದಲ್ಲಿ ನಡೆಯಲಿರುವ ಸೂಫಿ ಸಂತ ಸಮ್ಮೇಳನದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಲು ಕೋರಿದರು.
ಮಾಜಿ ವಿಧಾನ ಪರಿಷತ್ ಸದಸ್ಯರಾದ ವಿಜಯಸಿಂಗ್ ಮಾತನಾಡಿದರು. ಕೆ.ಪಿ.ಸಿ.ಸಿ ಪ್ರಧಾನ ಕಾರ್ಯದರ್ಶಿ ಮನ್ನಾನ್ ಸೇಠ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ದತ್ತಾತ್ರಿ ಮೂಲಗೆ, ಸಯ್ಯದ್ ಅಲಿ ಖಾದ್ರಿ ಹಾಗೂ ಇತರರು ಪತ್ರಿಕಾಗೋಷ್ಟಿಯಲ್ಲಿದ್ದರು.































