Home ಜಿಲ್ಲೆ ಬೆಂಗಳೂರು ರೈತರಿಗೆ ಮಾರುಕಟ್ಟೆ ಮೌಲ್ಯ ದರ ನಿಗದಿಗೆ ಸುದರ್ಶನ್ ಮನವಿ

ರೈತರಿಗೆ ಮಾರುಕಟ್ಟೆ ಮೌಲ್ಯ ದರ ನಿಗದಿಗೆ ಸುದರ್ಶನ್ ಮನವಿ

ಕೋಲಾರ,ಫೆ,೧೩- ತಾಲೂಕಿನ ವೇಮಗಲ್ ಕೈಗಾರಿಕಾ ಪ್ರದೇಶದ ಮೂರನೇ ಹಂತದ ಭೂಸ್ವಾಧೀನ ಪ್ರಕ್ರಿಯೆ ಶೀಘ್ರ ಮುಗಿಸಿ, ರೈತರಿಗೆ ಅನ್ಯಾಯವಾಗದಂತೆ ಮಾರುಕಟ್ಟೆ ಮೌಲ್ಯ ಪರಿಶೀಲಿಸಿ ಬೆಲೆ ನಿಗಧಿ ಮಾಡಿ ಎಂದು ಮಾಜಿ ಸಭಾಪತಿ ವಿ.ಆರ್.ಸುದರ್ಶನ್ ಕೆಐಡಿಬಿ ಅಧಿಕಾರಿಗಳಿಗೆ ಮನವಿ ಮಾಡಿದರು.


ತಾಲ್ಲೂಕಿನ ವೇಮಗಲ್ ಪಟ್ಟಣದ ಪ್ರವಾಸಿ ಮಂದಿರದ ಬಳಿ ಗುರುವಾರ ವೇಮಗಲ್ ಕೈಗಾರಿಕಾ ಪ್ರದೇಶದ ೩ನೇ ಹಂತದ ಭೂಸ್ವಾಧೀನದ ಅಂತಿಮ ಅಧಿಸೂಚನೆ ಹೊರಡಿಸುವ ಮುನ್ನಾ ಕರೆದಿದ್ದ ಕುರುಗಲ್, ಚಂದ್ರಶೇಖರಪುರ,ಮಡಿವಾಳ ಗ್ರಾಮಗಳ ಭೂಸ್ವಾಧೀನ ಪ್ರಕ್ರಿಯೆಯ ವ್ಯಾಪ್ತಿಗೆ ಒಳಪಡುವ ರೈತರ ಸಭೆಯಲ್ಲಿ ಅವರು ಮಾತನಾಡಿದರು.


೩ನೇನೇ ಹಂತೆದ ಪ್ರಕ್ರಿಯೆ ಈಗಾಗಲೇ ವಿಳಂಬವಾಗಿದೆ ಎಂದು ಬೇಸರ ವ್ಯಕ್ತಪಡಿಸಿದ ಅವರು, ಶೇ.೯೫ ರೈತರು ಈ ಒಪ್ಪಿಗೆ ನೀಡಿದ್ದಾರೆ, ಉಳಿದಂತೆ ಕೋರ್ಟ್ ಮೆಟ್ಟಿಲೇರಿರುವ ಕೆಲ ರೈತರು ತಮ್ಮ ಅಣ್ಣತಮ್ಮಂದಿರ ನಡುವಿನ ಭೂವಿವಾದವನ್ನು ಕುಳಿತು ಶೀಘ್ರ ಪರಿಹರಿಸಿಕೊಳ್ಳಲು ಸಲಹೆ ನೀಡಿ, ಶಾಸಕರಾದ ಕೊತ್ತೂರು ಮಂಜುನಾಥ್ ಅವರೂ ಸಹಾ ೩ನೇ ಹಂತದ ಕೈಗಾರಿಕಾ ಭೂಸ್ವಾಧೀನ ಪ್ರಕ್ರಿಯೆ ಶೀಘ್ರ ಮುಗಿಸಲು ಸಹಕಾರ ನೀಡಿದ್ದಾರೆ ಎಂದರು.


೩ನೇ ಹಂತದಲ್ಲಿ ಚಂದ್ರಶೇಖರಪುರ ೧೪೩.೧೦ ಎಕರೆ, ಮಡಿವಾಳದ ೨೨೫ ಎಕರೆ, ಕುರುಗಲ್ ೪೦.೧೫ ಎಕರೆ, ಮಂಚಂಡಳ್ಳಿ ೩೫.೧೦ ಎಕರೆ, ಮಲಿಯಪ್ಪನಹಳ್ಳಿ ೨೨೦.೩೯ ಎಕರೆ ಸೇರಿ ಒಟ್ಟು ೬೫೬ ಎಕರೆ ಭೂ ಸ್ವಾಧೀನಕ್ಕೆ ಆದೇಶ ಹೊರಡಿಸಿ ಸುಮಾರು ವರ್ಷಗಳಾಗಿವೆ ತದ ನಂತರದ ಪ್ರಕ್ರಿಯೆಗಾಗಿ ಇಷ್ಟೊಂದು ವಿಲೇವಾರಿ ಇಷ್ಟೊಂದು ಅಸಡ್ಡೆ ಏಕೆ ಎಂದು ಪ್ರಶ್ನಿಸಿದರು.


೩ನೇ ಹಂತಕ್ಕೆ ಸಂಬಂಧಪಟ್ಟ ಕೆಲಸ ಕಾರ್ಯಗಳು ಅತಿ ಜರೂರಾಗಿ ನಡೆಯಲಿ, ಈ ಕೈಗಾರಿಕಾ ಪ್ರದೇಶವನ್ನು ೨೦೦೯ರಲ್ಲಿ ಪ್ರಾರಂಭ ಮಾಡಲಾಯಿತು, ೨೦೧೩ರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಉದ್ಘಾಟಿಸಿದರು, ಮೊದಲನೇ ಹಂತದಲ್ಲಿ ಎಕರೆಗೆ ೩೦ ಲಕ್ಷ ರೂ, ಎರಡನೇ ಹಂತದಲ್ಲಿ ೧ಕೋಟಿ ೧೫ ಲಕ್ಷರೂ ಹಣ ನೀಡಲಾಗಿದೆ ಈಗ ೩ನೇ ಹಂತದಲ್ಲಿ ಮಾರುಕಟ್ಟೆ ಮೌಲ್ಯ ಹೆಚ್ಚಿದೆ, ಹಿಂದೆ ಗ್ರಾಮ ಪಂಚಾಯಿತಿಯಾಗಿ ಕುರಗಲ್,ವೇಮಗಲ್ ಪ್ರತ್ಯೇಕವಾಗಿತ್ತು, ಈಗ ಪಟ್ಟಣ ಪಂಚಾಯಿತಿಯಾಗಿ ಮಾರ್ಪಟ್ಟಿದೆ ಈ ಹಿನ್ನಲೆಯಲ್ಲಿ ರೈತರಿಗೆ ಅನ್ಯಾಯವಾಗದ ರೀತಿ ದರ ನಿಗಧಿಗೆ ಮನವಿ ಮಾಡಿದರು.


ಕೆಐಡಿಬಿಗೆ ಸಲಹೆ
ಇದೇ ಸಂದರ್ಭದಲ್ಲಿ ಸುದರ್ಶನ್ ಮಾತನಾಡಿ,ನೀವು ಯಾವುದೇ ಉದ್ಯಮಿಗೆ ಜಮೀನು ಮಂಜೂರು ಮಾಡಿದ ನಂತರ ಕನಿಷ್ಟ ೫ ವರ್ಷದೊಳಗೆ ಅಲ್ಲಿ ಕೈಗಾರಿಕೆ ಸ್ಥಾಪಿಸಬೇಕು,ಇಲ್ಲವಾದರೆ ಭೂಮಿ ವಾಪಸ್ಸು ಪಡೆಯುವ ಸಂಬಂಧ ಸಚಿವರೊಂದಿಗೆ ಚರ್ಚಿಸಿ ತೀರ್ಮಾನ ಕೈಗೊಳ್ಳಿ ಎಂದರು.
ಕೈಗಾರಿಕಾ ಪ್ರದೇಶಗಳಾದ ನರಸಾಪುರ, ವೇಮಗಲ್‌ನಲ್ಲಿ ಕೆಐಡಿಬಿ ರಸ್ತೆ,ಚರಂಡಿ, ದೀಪಗಳ ನಿರ್ವಹಣೆಯಲ್ಲಿ ಸುಧಾರಣೆ ಮಾಡಿ, ಮೂಲಸೌಲಭ್ಯಗಳ ಅಭಿವೃದ್ದಿಗೆ ಕ್ರಮವಹಿಸಿ ಎಂದು ಕೋರಿದ ಅವರು, ಸ್ಥಳೀಯರಿಗೆ ಉದ್ಯೋಗ ನೀಡುವುದು, ಭೂಮಿ ಕಳೆದಕೊಂಡ ರೈತರ ಕುಟುಂಬಕ್ಕೆ ಕಡ್ಡಾಯ ಉದ್ಯೋಗ ನೀಡುವ ಕುರಿತು ಸೂಕ್ತ ನಿರ್ಧಾರ ಮಾಡಿ ಎಂದರು.


ಈ ಸಂದರ್ಭದಲ್ಲಿ ಕೆಐಇಡಿಬಿ ಅಧಿಕಾರಿಗಳಾದ ನವೀನ್,ಚನ್ನರಾಜು, ದಿನಕರ್,ಪಟ್ಟಣ ಪಂಚಾಯಿತಿ ಸದಸ್ಯ ಕಲುಗಲ್ ಕೆ.ಎಸ್ ರಮೇಶ್, ನಾಮಿನಿ ಸದಸ್ಯ ತಿರುಮಳಪ್ಪ ಸ್ಥಳೀಯರು ರೈತ ಮುಖಂಡರಾದ ಚೌಡೇಗೌಡ,ಮಂಜುನಾಥ್, ಬೆಸ್ಕಾಂ ಗುತ್ತಿಗೆದಾರ ಸುರೇಶ್,ರಾಜಣ್ಣ, ಗಣೇಶ್, ಕಿಶೋರ್ ಕುಮಾರ್, ಮುನಿರಾಜ್, ಹಲವಾರು ಈ ವ್ಯಾಪ್ತಿಯ ರೈತರು ಹಾಜರಿದ್ದರು.