
ಯಾದಗಿರಿ:ಫೆ.೨೮: ಬಣ್ಣಗಳ ಹಬ್ಬ ಹೋಳಿ ಸಮೀಪಿಸುತ್ತಿರುವ ಹಿನ್ನೆಲೆ ಜಿಲ್ಲೆಯಲ್ಲಿ ಶಾಂತಿ, ಸೌಹಾರ್ದತೆ ಹಾಗೂ ಕಾನೂನು ಸುವ್ಯವಸ್ಥೆ ಕಾಪಾಡಲು ಸಮಗ್ರ ಸಿದ್ಧತೆ ಕೈಗೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಹರ್ಷಲ್ ಭೋಯರ್ ತಿಳಿಸಿದ್ದಾರೆ.
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆದ ಶಾಂತಿ ಸಮಿತಿ ಸಭೆಗೆ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಮಾರ್ಚ್ ೩ರಂದು ಕಾಮದಹನ ಹಾಗೂ ಮಾರ್ಚ್ ೪ರಂದು ಬಣ್ಣಗಳಾಟ ನಡೆಯಲಿದ್ದು, ಈ ಸಂದರ್ಭದಲ್ಲಿ ಎಲ್ಲ ಧರ್ಮೀಯರು ಪರಸ್ಪರ ಗೌರವ, ಸಹಿಷ್ಣುತೆ ಮತ್ತು ಸಹಕಾರದೊಂದಿಗೆ ಹಬ್ಬ ಆಚರಿಸಬೇಕು ಎಂದು ಮನವಿ ಮಾಡಿದರು. “ಜಿಲ್ಲೆಯಲ್ಲಿ ಹಿಂದಿನಿAದಲೂ ಹಬ್ಬಗಳನ್ನು ಶಾಂತಿ ಮತ್ತು ಭ್ರಾತೃತ್ವದ ವಾತಾವರಣದಲ್ಲಿ ಆಚರಿಸಲಾಗುತ್ತಿದೆ. ಅದೇ ಸಂಪ್ರದಾಯ ಮುಂದುವರಿಯಬೇಕು” ಎಂದು ಹೇಳಿದರು.
ಪಿಯುಸಿ ಪರೀಕ್ಷೆಗಳು ನಡೆಯುತ್ತಿರುವುದರಿಂದ ವಿದ್ಯಾರ್ಥಿಗಳಿಗೆ ತೊಂದರೆ ಉಂಟಾಗದAತೆ ನೋಡಿಕೊಳ್ಳಬೇಕು. ಒತ್ತಾಯಪೂರ್ವಕವಾಗಿ ಬಣ್ಣ ಹಚ್ಚುವುದು, ಅಸಭ್ಯ ವರ್ತನೆ ತೋರಿಸುವುದು, ರಾಸಾಯನಿಕಯುಕ್ತ ಬಣ್ಣ ಬಳಕೆ ಮಾಡುವುದು ಹಾಗೂ ಕುಡಿಯುವ ನೀರಿನ ಮೂಲಗಳಲ್ಲಿ ಬಣ್ಣ ಮಿಶ್ರಣ ಮಾಡುವುದು ನಿಷೇಧಿತವಾಗಿದ್ದು, ಉಲ್ಲಂಘನೆ ಮಾಡಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಎಚ್ಚರಿಸಿದರು. ಬ್ರಿಡ್ಜ್-ಕಮ್-ಬ್ಯಾರೇಜ್ ಪ್ರದೇಶದಲ್ಲಿ ಅಪಾಯಕಾರಿ ರೀತಿಯ ಈಜು ಹಾಗೂ ಸ್ನಾನವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ ಎಂದು ತಿಳಿಸಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪೃಥ್ವಿಕ್ ಶಂಕರ್ ಮಾತನಾಡಿ, ಹೋಳಿ ಹಬ್ಬದ ಸಂದರ್ಭದಲ್ಲಿ ಜಿಲ್ಲೆಯಾದ್ಯಂತ ಸಮಗ್ರ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗುತ್ತಿದೆ ಎಂದರು. ಪ್ರಮುಖ ವೃತ್ತಗಳು, ಧಾರ್ಮಿಕ ಸ್ಥಳಗಳು ಹಾಗೂ ಸಂವೇದನಾಶೀಲ ಪ್ರದೇಶಗಳಲ್ಲಿ ಹೆಚ್ಚುವರಿ ಭದ್ರತೆ ಒದಗಿಸಲಾಗುವುದು. ಸಾಮಾಜಿಕ ಜಾಲತಾಣಗಳ ಮೇಲೆ ನಿಗಾ ವಹಿಸಲಾಗಿದ್ದು, ಶಾಂತಿ ಕದಡುವವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಜರುಗಿಸಲಾಗುವುದು ಎಂದು ಹೇಳಿದರು. ಡಿಜೆ ಹಾಗೂ ಧ್ವನಿವರ್ಧಕಗಳ ಬಳಕೆಯಲ್ಲಿ ನಿಯಮ ಪಾಲನೆ ಕಡ್ಡಾಯವಾಗಿದ್ದು, ಪ್ರಚೋದನಕಾರಿ ಹಾಡುಗಳನ್ನು ಬಳಸದಂತೆ ಸೂಚನೆ ನೀಡಿದರು.
ಸಭೆಯಲ್ಲಿ ಡಿವೈಎಸ್ಪಿಗಳಾದ ಶ್ರೀ ಸುರೇಶ್ ಮತ್ತು ಶ್ರೀ ಜಾವೇದ್ ಇನಾಮದಾರ, ಹಿಂದೂ ಸಮಾಜದ ಮುಖಂಡರಾದ ಶರಣಪ್ಪ ಗುಳಿಗಿ, ಮರೆಪ್ಪ ಚಟ್ಟರ್ಕರ್, ಶರಣಪ್ಪ ಜಾಕಾ, ಮಲ್ಲಿಕಾರ್ಜುನ ಕ್ರಾಂತಿ, ಭೀಮು ಪೂಜಾರಿ, ಮುಸ್ಲಿಂ ಸಮಾಜದ ಮುಖಂಡರಾದ ಸಬ್ದಾನ್ ಮೂಸಾ, ಹಾಫೀಜ್ ಪಟೇಲ್, ಜಿಲಾನಿ, ಬಾಬಾ ಸೇರಿದಂತೆ ಹಲವರು ಭಾಗವಹಿಸಿ ತಮ್ಮ ಸಲಹೆ-ಸೂಚನೆಗಳನ್ನು ನೀಡಿದರು.
ಹಬ್ಬದ ದಿನ ಬೆಳಿಗ್ಗೆ ೭ರಿಂದ ಮಧ್ಯಾಹ್ನ ೧ರವರೆಗೆ ಮಾತ್ರ ಬಣ್ಣಗಳಾಟ ನಡೆಸಬೇಕು. ಮಹಿಳೆಯರು, ಹಿರಿಯರು, ಮಕ್ಕಳು ಹಾಗೂ ಅನ್ಯಧರ್ಮೀಯರಿಗೆ ತೊಂದರೆಯಾಗದAತೆ ವರ್ತಿಸಬೇಕು. ಹಬ್ಬದ ಸಂದರ್ಭದಲ್ಲಿ ಮದ್ಯಪಾನ ಹಾಗೂ ಅಕ್ರಮ ಮದ್ಯ ಮಾರಾಟ ತಡೆಯಲು ಕಟ್ಟುನಿಟ್ಟಿನ ಕ್ರಮ ಜಾರಿಯಲ್ಲಿರುತ್ತದೆ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದರು.
ಒಟ್ಟಾರೆ, ಹೋಳಿ ಹಬ್ಬವನ್ನು ಸಂತಸ, ಶಿಸ್ತಿನ ಪಾಲನೆ ಹಾಗೂ ಪರಸ್ಪರ ಸೌಹಾರ್ದತೆಯೊಂದಿಗೆ ಆಚರಿಸುವ ಮೂಲಕ ಜಿಲ್ಲೆಯ ಶಾಂತಿ-ಸಹಿಷ್ಣುತೆಯ ಪರಂಪರೆಯನ್ನು ಕಾಪಾಡಲು ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆ ಸಜ್ಜಾಗಿದೆ.






















