ತುರ್ತು ಸಂದರ್ಭಗಳಲ್ಲಿ ಹಣ ಕೀಳುವ ಕೆಲ ಆಂಬ್ಯುಲೆನ್ಸ್‌ಗಳು

ಕೋಲಾರ,ಅ,೮- ತುರ್ತು ಸಂದರ್ಭಗಳಲ್ಲಿ ಆರೋಗ್ಯ ಸೇವೆ ಒದಗಿಸುವ ಉದ್ದೇಶ ಹೊಂದಿರಬೇಕಾದ ಕೆಲವು ಆಂಬ್ಯುಲೆನ್ಸ್ ನವರು ಇದೀಗ ತುರ್ತು ಸಂದರ್ಭಗಳನ್ನು ಅಮಾನವೀಯವಾಗಿ ದುರ್ಬಳಕೆ ಮಾಡಿಕೊಂಡು ಮನಬಂದಂತೆ ಹಣ ಕಿತ್ತುಕೊಳ್ಳುವ ದಂಧೆಯಲ್ಲಿ ತೊಡಗಿದ್ದು, ಇದಕ್ಕೆ ತಾಜಾ ಉದಾಹರಣೆಯೊಂದು ಕಳೆದ ಸೋಮವಾರ ರಾತ್ರಿ ಬಂಗಾರಪೇಟೆ ಬಳಿ ನಡೆದ ಭೀಕರ ಅಪಘಾತದ ಬಳಿಕ ಬೆಳಕಿಗೆ ಬಂದಿದ್ದು, ದಂಧೆಗೆ ಕಡಿವಾಣ ಹಾಕಲಿ ಎಂಬುದು ನಾಗರಿಕರ ಆಗ್ರಹವಾಗಿದೆ.


ಬೆಂಗಳೂರು-ಚೆನ್ನೈ ಎಕ್ಸ್‌ಪ್ರೆಸ್ ವೇನಲ್ಲಿ ಸೋಮವಾರ ರಾತ್ರಿ ಟೆಂಪೋಗಳ ನಡುವೆ ನಡೆದಿದ್ದ ಭೀಕರ ಅಪಘಾತದಲ್ಲಿ ಮೂವರು ಮೃತಪಟ್ಟು, ೧೮ ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದರು. ವಿಷಯ ತಿಳಿದ ಕೂಡಲೇ ಬಂಗಾರಪೇಟೆಯಿಂದ ೨ ಖಾಸಗಿ ಆಂಬ್ಯುಲೆನ್ಸ್, ೨ ಸರಕಾರಿ ಆಂಬ್ಯುಲೆನ್ಸ್ ಸ್ಥಳಕ್ಕೆ ತೆರಳಿವೆ. ಅಲ್ಲದೆ ಟೋಲ್‌ಗೆ ಸಂಬಂಧಿಸಿದ ೧ ಆಂಬ್ಯುಲೆನ್ಸ್ ಮತ್ತು ಬೊಲೆರೊ ವಾಹನ ಬಂದಿದ್ದು, ಮೃತ ದೇಹಗಳನ್ನು ಬೊಲೆರೋ ವಾಹನದಲ್ಲಿ ಹಾಕಿಕೊಂಡು ಬಂಗಾರಪೇಟೆ ಸಾರ್ವಜನಿಕ ಆಸ್ಪತ್ರೆಗೆ ತರಲಾಯಿತು.
ಗಾಯಗೊಂಡಿದ್ದವರನ್ನು ಮೊದಲು ಬಂಗಾರಪೇಟೆ ಸಾರ್ವಜನಿಕ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಅಲ್ಲಿಂದ ಕೆಲವರನ್ನು ಕೋಲಾರದ ಎಸ್ಸೆನ್ನಾರ್ ಜಿಲ್ಲಾಸ್ಪತ್ರೆಗೆ ತರಲಾಗಿ, ಹೆಚ್ಚಿನ ಚಿಕಿತ್ಸೆಗೆ ಆರ್.ಎಲ್.ಜಾಲಪ್ಪ ಆಸ್ಪತ್ರೆಗೆ ಕರೆದೊಯ್ಯಲಾಯಿತು.


ಬಂಗಾರಪೇಟೆಯಿಂದ ೩ ಖಾಸಗಿ ಆಂಬ್ಯುಲೆನ್ಸ್‌ಗಳು ಎಸ್ಸೆನ್ನಾರ್ ಆಸ್ಪತ್ರೆಗೆ ಬಂದಿದ್ದು, ಇಲ್ಲಿಂದ ಪುನಃ ಕೋಲಾರ ೩ ಆಂಬ್ಯುಲೆನ್ಸ್‌ಗಳಲ್ಲಿ ಆರ್.ಎಲ್. ಜಾಲಪ್ಪ ಆಸ್ಪತ್ರೆಗೆ ಗಾಯಾಳುಗಳನ್ನು ಕರೆದುಕೊಂಡು ಹೋಗಲಾಯಿತು.


ಬಂಗಾರಪೇಟೆಯಿಂದ ಕೋಲಾರದ ಎಸ್.ಎನ್.ಆರ್. ಜಿಲ್ಲಾಸ್ಪತ್ರೆ, ಅಲ್ಲಿಂದ ಆರ್.ಎಲ್. ಜಾಲಪ್ಪ ಆಸ್ಪತ್ರೆಗೆ ಹೋದರೂ ಖಾಸಗಿ ಆಂಬ್ಯುಲೆನ್ಸ್‌ನ ಒಂದು ವಾಹನಕ್ಕೆ ಕನಿಷ್ಟ ೪೦೦೦ ಸಾವಿರರೂ ಬಾಡಿಗೆ ಆಗುತ್ತದೆ. ಮೂರು ವಾಹನಕ್ಕೆ ೧೨,೦೦೦ ಬಾಡಿಗೆ ನೀಡಬೇಕಾಗುತ್ತದೆ. ಇನ್ನು ಕೋಲಾರ ನಗರದಿಂದ ಆರ್.ಎಲ್.ಜಾಲಪ್ಪ ಆಸ್ಪತ್ರೆಗೆ ೩ ವಾಹನ ತೆರಳಿದ್ದು, ಅವುಗಳಿಗೆ ತಲಾ ೧ ಸಾವಿರ ಅಂದರೂ ೧೫ ಸಾವಿರರೂಗಳಲ್ಲೇ ಎಲ್ಲ ವಾಹನಗಳ ಬಾಡಿಗೆ ಮುಗಿದಿರುತ್ತಿತ್ತು.


ಆದರೆ ಕೆಲ ಖಾಸಗಿ ಆಂಬ್ಯುಲೆನ್ಸ್‌ನವರು ಭೀಕರ ಅಪಘಾತದ ಸಂದರ್ಭವನ್ನೇ ಬಂಡವಾಳವಾಗಿಸಿಕೊಂಡು ಅಲ್ಲಿ ಮೃತಪಟ್ಟಿದ್ದವರ ಹಾಗೂ ಗಾಯಗೊಂಡಿದ್ದವರ ಸಂಬಂಧಿಕರು, ಸ್ನೇಹಿತರ ಬಳಿ ಹಣ ಪೀಕಲು ಮುಂದಾಗಿದ್ದಾರೆ. ಅಪಘಾತದ ಸ್ಥಳಕ್ಕೆ ಬಂದಿದ್ದು ೨ ಖಾಸಗಿ ಆಂಬ್ಯುಲೆನ್ಸ್‌ಗಳೇ ಆದರೂ ಸರಕಾರಿ ಆಂಬ್ಯುಲೆನ್ಸ್, ಟೋಲ್ ವಾಹನಗಳು ಲೆಕ್ಕಕ್ಕೆ ಇಲ್ಲವೆಂಬಂತೆ, ಸ್ಥಳಕ್ಕೆ ಎಲ್ಲ ನಮ್ಮ ವಾಹನಗಳೇ ಬಂದಿದ್ದು, ಅಲ್ಲಿಂದ ಬಂಗಾರಪೇಟೆ, ಕೋಲಾರ, ಆರ್.ಎಲ್.ಜಾಲಪ್ಪ ಆಸ್ಪತ್ರೆಗೆ ಕರೆದುಕೊಂಡು ಬಂದಿರುವುದಕ್ಕೆ ೬೯ ಸಾವಿರ ಬಾಡಿಗೆ ಹೇಳಿದ್ದಾರೆ.


೪೦ ಸಾವಿರ ನಗದು ಪಡೆದು, ೪ ಸಾವಿರ ಫೋನ್ ಫೇ ನಲ್ಲಿ ಹಾಕಿಸಿಕೊಂಡಿದ್ದಾರೆ. ಇಷ್ಟು ಸಾಲದ್ದಕ್ಕೆ ಉಳಿದ ೨೫ ಸಾವಿರ ನೀಡುವಂತೆ ಆರ್.ಎಲ್. ಜಾಲಪ್ಪ ಆಸ್ಪತ್ರೆ ಬಳಿ ಡಿಮ್ಯಾಂಡ್ ಮಾಡಿ ಪೀಡಿಸಿದ್ದಾರೆ.


ಘಟನೆ ವಿಚಾರ ತಿಳಿಯುತ್ತಿದ್ದಂತೆ ಆಸ್ಪತ್ರೆ ಬಳಿ ನೂರಾರು ಮಂದಿ ಬರಲಾರಂಭಿಸಿದರು. ಖಾಸಗಿ ಆಂಬ್ಯುಲೆನ್ಸ್‌ನವರ ಈ ಕಳ್ಳಾಟ ತಿಳಿಯುತ್ತಿದ್ದಂತೆಯೇ ರೊಚ್ಚಿಗೆದ್ದ ಗಾಯಾಳುಗಳ ಸಂಬಂಧಿಕರು ನಾವೂ ಸಹ ಸ್ಥಳೀಯರೇ ನಮಗೂ ಎಲ್ಲ ಗೊತ್ತಿದೆ, ನಿಮಗೆ ಸ್ವಲ್ಪವೂ ಕರುಣೆ ಎನ್ನುವುದು ಇಲ್ಲವೇ ? ಇಷ್ಟ ಬಂದಂತೆ ಹಣ ವಸೂಲಿಗೆ ಇಳಿದಿದ್ದೀರಿ ಎಂದು ಆಕ್ರೋಶ ವ್ಯಕ್ತಪಡಿಸಲು ಮುಂದಾಗುತ್ತಿದ್ದಂತೆಯೇ ಸ್ಥಳಕ್ಕಾಗಮಿಸಿದ ಗಲ್‌ಪೇಟೆ ಪೊಲೀಸರು ಪರಿಸ್ಥಿತಿ ತಿಳಿಗೊಳಿಸಲು ಮುಂದಾಗಿದ್ದಾರೆ, ಅಲ್ಲದೆ ಚಾಲಕರುಗಳು ಆಂಬ್ಯುಲೆನ್ಸ್‌ಗಳ ಸಮೇತ ಆಸ್ಪತ್ರೆ ಬಳಿಯಿಂದ ಪರಾರಿಯಾಗಿದ್ದಾರೆ.


ತುರ್ತು ಸಂದರ್ಭದಲ್ಲಿ ಜೀವ ಉಳಿಸುವ ಸೇವೆಯಲ್ಲಿರುವ ಖಾಸಗಿ ಆಂಬ್ಯುಲೆನ್ಸ್‌ನವರು ಹಣ ಮಾಡುವ ದಂಧೆಯಲ್ಲಿ ತೊಡಗಿ ಅಮಾಯಕ ಜನರಿಗೆ ತೊಂದರೆ ನೀಡುತ್ತಿರುವುದರಿಂದಾಗಿ ಉತ್ತಮ ಸೇವೆ ನೀಡುವ ಕೆಲ ಆಂಬ್ಯುಲೆನ್ಸ್ ಮಾಲೀಕರಿಗೂ ಕೆಟ್ಟ ಹೆಸರು ಬರುವಂತಾಗಿದೆ. ಹೀಗಾಗಿ ಆರೋಗ್ಯ ಇಲಾಖೆಯವರು ಎಚ್ಚೆತ್ತು ಖಾಸಗಿ ಆಂಬ್ಯುಲೆನ್ಸ್‌ನವರ ಕಳ್ಳಾಟ, ಹಣ ದಂಧೆಗೆ ಕಡಿವಾಣ ಹಾಕಬೇಕಿದೆ.