ಕೋಲಾರ,ನ,೩೦- ನನ್ನ ಮೃದುತ್ವ ನನ್ನ ಬಲಹೀನತೆಯಲ್ಲ, ವಿವಿ ಆಡಳಿತದ ವಿಷಯದಲ್ಲಿ ಆತ್ಮಸಾಕ್ಷಿಗೆ ವಿರುದ್ಧವಾಗಿ ಕೆಲಸ ಮಾಡಿಲ್ಲ, ಅಂತಹ ಪರಿಸ್ಥಿತಿ ಎದುರಾದಾಗ ಗಟ್ಟಿಯಾಗಿ, ಹಠವಾದಿಯಾಗಿ ನಿಂತಿದ್ದೇನೆ, ಬಾಗುವ ಬೆತ್ತವಲ್ಲ, ಮುರಿಯುವ ದೊಣ್ಣೆ ಎಂಬಂತೆ ನಡೆದುಕೊಂಡ ತೃಪ್ತಿ ನನಗಿದೆ ಎಂದು ಬೆಂಗಳೂರು ಉತ್ತರ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ನಿರಂಜನವಾನಳ್ಳಿ ತಿಳಿಸಿದರು.
ಉತ್ತರ ವಿವಿಯ ಮಂಗಸಂದ್ರದ ಸುವರ್ಣಗಂಗೆ ಕ್ಯಾಂಪಾಸ್ನ ಸಭಾಂಗಣದಲ್ಲಿ ನಿವೃತ್ತರಾಗಲಿರುವ ತಮಗೆ ವಿವಿಯ ಬೋಧಕ,ಬೋಧಕೇತರ ನೌಕರರು ನೀಡಿದ ಬೀಳ್ಕೊಡುಗೆ ಸ್ವೀಕರಿಸಿದ ಅವರು,ಜಗತ್ತಿನಲ್ಲಿ ಎಲ್ಲರನ್ನು ತೃಪ್ತಿಪಡಿಸಲು ಸಾಧ್ಯವಿಲ್ಲ ಎಂದರು.
ಕಳೆದ ನಾಲ್ಕು ವರ್ಷಗಳ ಹಿಂದೆ ಕೋಲಾರದ ಉತ್ತರ ವಿವಿಯ ಕುಲಪತಿಯಾಗಲು ನಾನು ಬಯಸಿಯೂ ಇರಲಿಲ್ಲ, ಯಾವುದೇ ಅಧಿಕಾರಿ,ಜನಪ್ರತಿನಿಧಿಗಳ ಮನೆ ಬಾಗಿಲಿಗೆ ಹೋಗಿಯೂ ಇರಲಿಲ್ಲ ಆದರೆ ಅದಾಗಿಯೇ ನನ್ನ ಬಯಸಿ ಬಂತು ಎಂದು ತಿಳಿಸಿದರು.
ಕೋಲಾರದ ಉತ್ತರ ವಿವಿ ಕುಲಪತಿಯ ಆದೇಶವಾದಾಗ ನನ್ನ ಸ್ನೇಹಿತರು ಹೆದರಿಸಿದ್ದರು, ‘ನೀನು ಕುವೆಂಪು ವಿಶ್ವ ವಿದ್ಯಾಲಯಕ್ಕೂ ಅಥವಾ ಮಂಗಳೂರು ವಿಶ್ವ ವಿದ್ಯಾಲಯಕ್ಕೂ ಹೋಗಲು ಮುಂದೆ ಅವಕಾಶ ಸಿಗಬಹುದು, ಕೋಲಾರದಲ್ಲಿ ಕೆಲಸ ಮಾಡಲು ಸಾಧ್ಯವಿಲ್ಲ ಎಂಬ ಮಾತುಗಳೂ ಕೇಳಿಯೂ ಸಹ ಅದೆಲ್ಲವನ್ನು ಮೀರಿ ಈ ಚಿನ್ನದ ನಾಡಿಗೆ ಬಂದೆ ಎಂದರು.
ಕಳೆದ ೪ ವರ್ಷಗಳಿಂದ ನನ್ನ ಕೈಲಾದಷ್ಟು ಉತ್ತಮವಾಗಿ ಕೆಲಸ ಮಾಡಿದ್ದೇನೆ, ಆತ್ಮಗೌರವ ಉಳಿಸಿಕೊಂಡಿದ್ದೇನೆ, ವಿವಿ ವಿರುದ್ದ ಸುದ್ದಿಯಾದಾಗ, ಯಾರೋ ಟೀಕಿಸಿದಾಗ ನನಗೆ ಬೇಸರವಾಗಿಲ್ಲ, ವಿವಿಯಲ್ಲಿ ಕೆಲಸ ನಡೆಯುತ್ತಿದೆ ಆದ್ದರಿಂದಲೇ ಇಂತಹ ಟೀಕೆ,ಟಿಪ್ಪಣಿ ಬರುತ್ತಿದೆ ಎಂದು ಖುಷಿ ಪಟ್ಟಿದ್ದೇನೆ ಎಂದ ಅವರು, ಮಾವಿನ ಮರಕ್ಕೆ ಕಲ್ಲು ಹೊಡೆಯುತ್ತಾರೆಯೇ ಹೊರತೂ ಫಲ ನೀಡದ ಮರಕ್ಕಲ್ಲ ಎಂದರು.
ಜಾತಿ,ಧರ್ಮದ ಬೇಧ ನನ್ನ ರಕ್ತದಲ್ಲಿಲ್ಲ, ಅಂತಹ ಶಾಲೆಯಲ್ಲಿ ನಾನು ಬೆಳೆದಿಲ್ಲ, ಅದು ನನ್ನ ರಕ್ತದಲ್ಲೂ ಇಲ್ಲ, ೨೦ ವರ್ಷಗಳ ಹಿಂದೆ ತಾವೇ ಮಾಸಪತ್ರಿಕೆಯೊಂದಕ್ಕೆ ಬರೆದ ‘ಬೈಯುವವರು ಬೇಕಾಗಿದ್ದಾರೆ’ ಎಂಬ ಪ್ರಬಂಧವನ್ನು ಸ್ಮರಿಸಿಕೊಂಡರು.
ಉತ್ತರ ವಿಶ್ವವಿದ್ಯಾಲಯದ ಆಡಳಿತಕ್ಕೆ ಸಂಬಂಧಿಸಿದಂತೆ ದೃಢ ನಿರ್ಧಾರ ಕೈಗೊಂಡಿದ್ದೇನೆ,ವಿರೋಧ ಎದುರಾದರೂ ಗಟ್ಟಿಯಾಗಿ ನಿಂತಿದ್ದೇನೆ ಇದಕ್ಕೆ ಸಾಕ್ಷಿಯೆಂಬಂತೆ ೪೪ ಲಕ್ಷರೂಗಳ ಪೀಠೋಪಕರಣ ಬಂದಾಗ ಅದು ಕಳಪೆ ಎಂದಾಕ್ಷಣ ವಾಪಸ್ಸು ಕಳುಹಿಸಿದೆ ಆಗ ಎದುರಾದ ಬೆದರಿಕೆ,ಭಯಹುಟ್ಟಿಸಿದ್ದನ್ನು ಮರೆತಿಲ್ಲ ಆದರೆ ಸೋಲಲಿಲ್ಲ ಎಂದರು.
ನಾನು ನಿರೀಕ್ಷಿಸಿದಷ್ಟು ಕೆಲಸ ಮಾಡಲು ಸಾಧ್ಯವಾಗಿಲ್ಲ ಎಂಬುದು ನಿಜ, ಮಂಗಸಂದ್ರ ಸ್ನಾತಕೋತ್ತರ ಕೇಂದ್ರಕ್ಕೆ ಸಿಎಸ್ಆರ್ನಿಧಿ ೪ ಕೋಟಿ ತಂದೆ, ಇಲ್ಲಿ ಸುಂದರ ರಂಗಮಂದಿರ ಕಟ್ಟುವ ಆಶಯವಿತ್ತು ಆದರೆ ಅದಕ್ಕೆ ಅಗತ್ಯ ಸಹಕಾರ ಸಿಗಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ನನ್ನ ಅವಧಿಯಲ್ಲಿ ೪ ವರ್ಷ ವಿವಿಗೆ ಒಳ್ಳೆಯದನ್ನೇ ಮಾಡಿದ್ದೇನೆ,ಮುಂದಿನ ದಿನಗಳಲ್ಲಿ ಇನ್ನೂ ಉತ್ತಮ ಕುಲಪತಿಗಳು ವಿವಿಗೆ ಬರಲಿ, ಇಲ್ಲಿನ ಸಮಸ್ಯೆಗಳಿಗೆ ಪರಿಹಾರ ನೀಡಲಿ ಎಂದ ಅವರು, ಕವಿಯೊಬ್ಬರ ‘ಬೇಕುಬೇಕೆನುವವಾಗಲೇ ಬಿಡಬೇಕು’ ಎಂಬ ಮಾತನ್ನು ಸ್ಮರಿಸಿ ಮಾತು ಮುಗಿಸಿದರು.
ಕಾರ್ಯಕ್ರಮದಲ್ಲಿ ಕುಲಸಚಿವರಾದ (ಆಡಳಿತ ) ಸಿ.ಎನ್.ಶ್ರೀಧರ್, ಮೌಲ್ಯಮಾಪನ ಕುಲಸಚಿವ ಪ್ರೊ.ಎನ್.ಲೋಕನಾಥ್, ವಿತ್ತಾಧಿಕಾರಿ ವಸಂತ ಕುಮಾರ್ ಮತ್ತಿತರರು ಮಾತನಾಡಿ, ಪ್ರಾಮಾಣಿಕತೆ, ಬದ್ದತೆಗೆ ಮತ್ತೊಂದು ಹೆಸರು ನಿರಂಜನವಾನಳ್ಳಿ ಆಗಿದ್ದಾರೆ, ಅವರು ನೋಡಲು ಮೃಧುವಾಗಿದ್ದರೂ, ವಿವಿಯ ಆಡಳಿತ, ಹಣಕಾಸಿನ ವಿಷಯ ಬಂದಾಗ ಯಾರಿಗೂ ತಲೆ ಬಾಗಿಲ್ಲ, ಸರಿಯಿದ್ದರೆ ಮಾತ್ರವೇ ಒಪ್ಪಿಗೆ ನೀಡುತ್ತಿದ್ದರು ಅವರ ಮಾರ್ಗದರ್ಶನದಲ್ಲಿ ಕಳೆದ ೪ ವರ್ಷ ಉತ್ತಮ ಹಾದಿಯಲ್ಲಿ ನಡೆದಿದೆ ಎಂದು ತಿಳಿಸಿ ಶುಭ ಕೋರಿದರು.
ಕಾರ್ಯಕ್ರಮದಲ್ಲಿ ಮಂಗಸಂದ್ರ ಸ್ನಾತಕೋತ್ತರ ಕೇಂದ್ರದ ನಿರ್ದೇಶಕಿ ಪ್ರೊ.ಕುಮುದಾ, ರಾಜ್ಯಶಾಸ್ತ್ರ ಸಹ ಪ್ರಾಧ್ಯಾಪಕ ಡಾ.ಎಂ.ಎನ್.ರಮೇಶ್, ಸಿಂಡಿಕೇಟ್ ಸದಸ್ಯರಾದ ಗೋಪಾಲ್ಗೌಡ, ಅರ್ಬಜ್, ನಿರೂಪ್, ಜೈ ದೀಪ್ ಸೇರಿದಂತೆ ವಿವಿಯ ಅಧಿಕಾರಿಗಳು, ಉಪನ್ಯಾಸಕರು ಹಾಜರಿದ್ದರು.


























