ಸಿದ್ದು ಹುದ್ದೆ ಕಳಕೊಳ್ಳುವುದು ನಿಶ್ಚಿತ: ಅಶೋಕ್ ಭವಿಷ್ಯ

ಬೆಂಗಳೂರು, ಅ. ೩- ಬರುವ ನವೆಂಬರ್, ಡಿಸೆಂಬರ್ ಒಳಗೆ ಸಿದ್ದರಾಮಯ್ಯ ಮುಖ್ಯಮಂತ್ರಿ ಹುದ್ದೆ ಕಳೆದುಕೊಳ್ಳುತ್ತಾರೆ ಎಂದು ವಿಧಾನಸಭೆಯ ಪ್ರತಿಪಕ್ಷ ನಾಯಕ ಆರ್. ಅಶೋಕ್ ಭವಿಷ್ಯ ನುಡಿದಿದ್ದಾರೆ.


ಬೆಳಗಾವಿಯ ಅತಿವೃಷ್ಠಿ ಪ್ರದೇಶಗಳಿಗೆ ಭೇಟಿ ನೀಡಲು ಆಗಮಿಸಿರುವ ಅವರು ಬೆಳಗಾವಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಅಧಿಕಾರ ಹಂಚಿಕೆ ಸಂಬಂಧ ಕಾಂಗ್ರೆಸ್‌ನಲ್ಲಿ ಈಗ ಜಗಳ ಆರಂಭವಾಗಿದೆ. ಈ ಜಗಳದಲ್ಲಿ ಸರ್ಕಾರ ಪತನವಾದರೆ ಬಿಜೆಪಿ ಸರ್ಕಾರ ಮಾಡಲ್ಲ. ಚುನಾವಣೆಗೆ ಹೋಗುತ್ತದೆ ಎಂದು ಸ್ಪಷ್ಟಪಡಿಸಿದರು.
ನವೆಂಬರ್, ಡಿಸೆಂಬರ್ ತಿಂಗಳಲ್ಲಿ ರಾಜ್ಯದಲ್ಲಿ ಕ್ರಾಂತಿ ಆಗುವುದು ನಿಶ್ಚಿತ. ಹೀಗಾಗಿ ಸಿದ್ದರಾಮಯ್ಯ ಮುಖ್ಯಮಂತ್ರಿ ಹುದ್ದೆ ಕಳೆದುಕೊಳ್ಳುವುದು ನೂರಕ್ಕೆ ನೂರರಷ್ಟು ನಿಜ ಎಂದು ಅವರು ಭವಿಷ್ಯ ನುಡಿದರು.


ಕಾಂಗ್ರೆಸ್‌ನಲ್ಲಿ ಅಧಿಕಾರ ಹಂಚಿಕೆ ಸಂಬಂಧ ಒಪ್ಪಂದ ಆಗಿರುವುದೂ ನಿಜ. ಈಗಾಗಲೇ ಒಳ ಜಗಳ ಆರಂಭವಾಗಿದೆ. ಸಿದ್ದರಾಮಯ್ಯ ಅಧಿಕಾರ ಬಿಟ್ಟು ಕೊಡಲ್ಲ, ಡಿ.ಕೆ. ಶಿವಕುಮಾರ್ ಸಹ ಅಧಿಕಾರಕ್ಕೆ ಹಠ ಮಾಡುವುದೂ ನಿಶ್ಚಿತ. ಈ ಗದ್ದಲದಲ್ಲಿ ಕಾಂಗ್ರೆಸ್ ಸರ್ಕಾರ ಪತನವಾದರೆ ನಾವು ಚುನಾವಣೆಗೆ ಹೋಗುತ್ತೇವೆಯೇ ಹೊರತು ಸರ್ಕಾರ ರಚಿಸಲ್ಲ ಎಂದರು.


ಕಾಂಗ್ರೆಸ್ ಪಕ್ಷದ ಶಾಸಕರೇ ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ಯಾವಾಗ ಅಧಿಕಾರದಿಂದ ಇಳಿಯುತ್ತೀರಾ ಎಂದು ಪ್ರಶ್ನಿಸುತ್ತಿದ್ದಾರೆ. ಆದರೆ ಸಿದ್ದರಾಮಯ್ಯ ನಾನೇ ಎರಡೂವರೆ ವರ್ಷ ಮುಖ್ಯಮಂತ್ರಿ ಎಂದು ಹೇಳುತ್ತಿದ್ದಾರೆ. ಇದನ್ನೆಲ್ಲಾ ನೋಡಿದರೆ ಕಾಂಗ್ರೆಸ್‌ನಲ್ಲಿ ಕ್ರಾಂತಿಯಾಗುವುದರಲ್ಲಿ ಸಂದೇಹವಿಲ್ಲ ಎಂದರು.


ಸರ್ಕಾರದ ವಿರುದ್ಧ ಕಿಡಿ


ಕಾಂಗ್ರೆಸ್ ಸರಕಾರ ಮತ್ತು ಮುಖ್ಯಮಂತ್ರಿಗಳಿಗೆ ಜವಾಬ್ದಾರಿ ಇದ್ದರೆ ಸಮರೋಪಾದಿಯಲ್ಲಿ ಅತಿವೃಷ್ಟಿ ಪೀಡಿತ ಪ್ರದೇಶಕ್ಕೆ ತೆರಳಿ ಪರಿಹಾರ ಕಾರ್ಯ ಒದಗಿಸಬೇಕಿತ್ತು ಎಂದು ವಿಪಕ್ಷ ನಾಯಕ ಆರ್.ಅಶೋಕ್ ಅವರು ತಿಳಿಸಿದ್ದಾರೆ.


ಅತಿವೃಷ್ಟಿಪೀಡಿತ ಪ್ರದೇಶಗಳಿಗೆ ಇಂದು ಭೇಟಿ ನೀಡಲು ಇಲ್ಲಿಗೆ ಆಗಮಿಸಿದ್ದ ಅವರು ಸುದ್ಧಿಗಾರರ ಜೊತೆ ಮಾತನಾಡಿ ರಾಜ್ಯ ಸರಕಾರ ಜನರ ಪಾಲಿಗೆ ಸತ್ತಂತಿದೆ; ಈ ಸರಕಾರ ಬದುಕಿಲ್ಲ ಎಂದು ದೂರಿದರು.


ರಾಜ್ಯದ ಕಾಂಗ್ರೆಸ್ ಸರಕಾರ ಮತ್ತು ಮುಖ್ಯಮಂತ್ರಿಗಳಿಗೆ ಸಾಮಾನ್ಯ ಜ್ಞಾನ ಮತ್ತು ಜವಾಬ್ದಾರಿ ಇದ್ದಲ್ಲಿ ಇವರು ಅತಿವೃಷ್ಟಿಯಿಂದ ತೊಂದರೆಗೆ ಒಳಗಾದ ಪ್ರದೇಶಗಳಿಗೆ ತೆರಳಬೇಕಿತ್ತು ಎಂದು ಆಕ್ಷೇಪಿಸಿದರು.


ಎಷ್ಟು ಮನೆಗಳು ಬಿದ್ದಿದೆ ಎಂಬುದು ಮುಖ್ಯಮಂತ್ರಿಗಳ ಬಾಯಲ್ಲಿ ಬರುತ್ತಿಲ್ಲ. ಅತಿವೃಷ್ಟಿ ಪೀಡಿತ ಪ್ರದೇಶಗಳ ರೈತರು ಹಬ್ಬ ಆಚರಿಸಲಾಗದೆ ಬೀದಿಯಲ್ಲಿದ್ದಾರೆಂದು ಮಾಧ್ಯಮಗಳಲ್ಲಿ ಬರುತ್ತಿದೆ ಎಂದು ಗಮನ ಸೆಳೆದರು. ಇದು ತುಘಲಕ್ ಸರಕಾರ. ಇಂಥ ನೀಚ ಸರಕಾರವನ್ನು ಕರ್ನಾಟಕದಲ್ಲಿ ಯಾವತ್ತೂ ನೋಡಲು ಸಾಧ್ಯವಿಲ್ಲ ಎಂದು ಟೀಕಿಸಿದರು. ನಮ್ಮ ಮೇಲೆ ಶೇ. ೪೦ ಕಮಿಷನ್ ಆರೋಪ ಮಾಡಿದ್ದರು. ಅದು ಸಾಬೀತಾಗಿಲ್ಲ; ಅದರ ದುಪ್ಪಟ್ಟು ಕಮಿಷನ್ ಪಡೆಯುವ ಸರಕಾರ ಎಂದು ಗುತ್ತಿಗೆದಾರರು ಆರೋಪಿಸಿತ್ತಿದ್ದಾರೆ ಎಂದು ಗಮನಕ್ಕೆ ತಂದರು.


ಎಷ್ಟು ಬೆಳೆ ಹಾನಿ ಆಗಿದೆ ಎಂದು ಮುಖ್ಯಮಂತ್ರಿಗಳು ಕೊಟ್ಟ ಅಂಕಿಅಂಶವೂ ಅಪ್ಪಟ ಸುಳ್ಳು. ರೈತರು ಸಂಕಷ್ಟದಲ್ಲಿದ್ದರೆ, ಮುಖ್ಯಮಂತ್ರಿಗಳು ಆರಾಮ್‌ಸೇ ದಸರಾ ಉದ್ಘಾಟನೆ ನೆರವೇರಿಸಿ, ಸಂತೋಷ ಕೂಟದಲ್ಲಿ ಭಾಗಿಯಾಗಿ, ನಾನೇ ಮುಖ್ಯಮಂತ್ರಿ ಎಂದು ಹೇಳಿಕೊಂಡಿದ್ದಾರೆ ಎಂದು ಟೀಕಿಸಿದರು.