ಭಕ್ತರ ಇಷ್ಟಾರ್ಥ ಈಡೇರಿಸುವ ಸಿದ್ಧೇಶ್ವರ

ಬೀದರ್: ನ.10:ಹೊನ್ನಿಕೇರಿ ಸಿದ್ಧೇಶ್ವರ ಭಕ್ತಿಯಿಂದ ಪೂಜಿಸುವವರ ಎಲ್ಲ ಇಷ್ಟಾರ್ಥಗಳನ್ನು ಈಡೇರಿಸುತ್ತಾನೆ ಎಂದು ಹೈದರಾಬಾದ್-ಹಲಬರ್ಗಾ-ಶಿವಣಿ ಮಠದ ಪೀಠಾಧಿಪತಿ ಹಾವಗಿಲಿಂಗೇಶ್ವರ ಶಿವಾಚಾರ್ಯ ನುಡಿದರು.
ತಾಲ್ಲೂಕಿನ ಹೊನ್ನಿಕೇರಿ ಗ್ರಾಮದಲ್ಲಿ ಸಿದ್ಧೇಶ್ವರ ಮಂದಿರ ಗೋಪುರದ ಕಳಸಾರೋಹಣ ಹಾಗೂ ಲಕ್ಷ ದೀಪೆÇೀತ್ಸವ ನಿಮಿತ್ತ ಹಮ್ಮಿಕೊಳ್ಳಲಾದ ಜೀವನ ದರ್ಶನ ಪ್ರವಚನವನ್ನು ಶುಕ್ರವಾರ ಉದ್ಘಾಟಿಸಿ ಅವರು ಮಾತನಾಡಿದರು.
ಅಹಂಕಾರ ತೊರೆದು, ಶುದ್ಧ ಭಾವದಿಂದ ತನ್ನ ಸನ್ನಿಧಿಗೆ ಬರುವವರ ಮೇಲೆ ಸಿದ್ಧೇಶ್ವರನ ಒಲುಮೆ ಆಗುತ್ತದೆ ಎಂದು ತಿಳಿಸಿದರು.
ಸಿದ್ಧೇಶ್ವರ ಲಿಂಗ ಉದ್ಭವ ಲಿಂಗವಾಗಿದೆ. ಹೊನ್ನಿಕೇರಿ ಸಿದ್ಧೇಶ್ವರರಿಗೆ ಕರ್ನಾಟಕ, ಮಹಾರಾಷ್ಟ್ರ, ತೆಲಂಗಾಣ, ಆಂಧ್ರಪ್ರದೇಶ ಸೇರಿ ವಿವಿಧೆಡೆ ಲಕ್ಷಾಂತರ ಭಕ್ತರು ಇದ್ದಾರೆ ಎಂದು ಹೇಳಿದರು.
ಗಂಗಾಧರ ಸ್ವಾಮಿ ಬಾಳೂರ, ಶಿವಾನಂದ ಸ್ವಾಮಿ ಬಾಳೂರ, ನಾಗಯ್ಯ ಸ್ವಾಮಿ, ಸಂಗಮೇಶ ಪಾಟೀಲ, ಸಂತೋಷ್ ಭಟ್, ಪ್ರೇಮಸಾಗರ್ ಪಾಟೀಲ, ರೇವಣಸಿದ್ದಯ್ಯ ಸ್ವಾಮಿ, ಬಾಬುರಾವ್ ಮುತ್ತ್ಯಾ, ಬಾಳು ಪಾಟೀಲ ಮತ್ತಿತರರು ಇದ್ದರು.
ಜೀವನ ದರ್ಶನ ಪ್ರವಚನ ನ. 11 ರ ವರೆಗೆ ನಡೆಯಲಿದೆ.


ರಂಭಾಪುರಿ ಶ್ರೀ ಸಾನಿಧ್ಯದಲ್ಲಿ ಕಳಸಾರೋಹಣ ಸಮಾರಂಭ

ಹೊನ್ನಿಕೇರಿ ಸಿದ್ಧೇಶ್ವರ ದೇಗುಲದ ನೂತನ ಗೋಪುರ ಕಳಸಾರೋಹಣ ಸಮಾರಂಭ ರಂಭಾಪುರಿ ಜಗದ್ಗುರು ವೀರಸೋಮೇಶ್ವರ ಶಿವಾಚಾರ್ಯ ಭಗತ್ಪಾದರ ದಿವ್ಯ ಸಾನಿಧ್ಯದಲ್ಲಿ ನಡೆಯಲಿದೆ ಎಂದು ಹಾವಗಿಲಿಂಗೇಶ್ವರ ಶಿವಾಚಾರ್ಯ ತಿಳಿಸಿದರು.
12 ರಂದು ಬೆಳಿಗ್ಗೆ 10.30ಕ್ಕೆ ಮಹಾದ್ವಾರದಿಂದ ಸಿದ್ಧೇಶ್ವರ ಮಂದಿರ ವರೆಗೆ ಕುಂಭ ಕಳಸ, ಕಲಾ ತಂಡಗಳೊಂದಿಗೆ ರಂಭಾಪುರಿ ಶ್ರೀಗಳ ಅದ್ಧೂರಿ ಮೆರವಣಿಗೆ ನಡೆಯಲಿದೆ. ಮಧ್ಯಾಹ್ನ 1.30ಕ್ಕೆ ಕಳಸಾರೋಹಣ, ಮಧ್ಯಾಹ್ನ 2.30ಕ್ಕೆ ಧರ್ಮಸಭೆ, ನಂತರ ಮಹಾ ಪ್ರಸಾದ, ಸಂಜೆ ಲಕ್ಷ ದೀಪೆÇೀತ್ಸವ ಜರುಗಲಿದೆ ಎಂದು ಹೇಳಿದರು.