ಜೂ. ೨೨ಕ್ಕೆ ಶುಭಾಂಶು ಅಂತರಿಕ್ಷ ಯಾನ

ನವದೆಹಲಿ,ಜೂ.೧೮:ಭಾರತೀಯ ಗಗನಯಾತ್ರಿ ಶುಭಾಂಶು ಶುಕ್ಲಾ ಅವರ ಆಕ್ಸಿಯಂ-೪ ಮಿಷನ್ ಮತ್ತೆ ಮುಂದೂಡಲಾಗಿದೆ. ಇದೇ ತಿಂಗಳ ಜೂ. ೨೨ ರಂದು ನಡೆಸಲು ತೀರ್ಮಾನಿಸಲಾಗಿದೆ ಎಂದು ಆಕ್ಸಿಯಂ ಬಾಹ್ಯಾಕಾಶ ತಿಳಿಸಿದೆ.


ಜೂ. ೧೧ ರಂದು ಫ್ಲೋರಿಡಾದಲ್ಲಿರುವ ಕೆನಡಿ ಬಾಹ್ಯಾಕಾಶ ಕೇಂದ್ರದಿಂದ ಸ್ಪೇಸ್ ಎಕ್ಸ್‌ನ ಪಾಲ್ಕಾನ್-೯ ರಾಕೆಟ್ ಉಡಾವಣೆಯಾಗಬೇಕಿತ್ತು. ರಾಕೆಟ್‌ನಲ್ಲಿ ಇಂಧನ ಸೋರಿಕೆಯಿಂದಾಗಿ ಕೊನೆಯ ಘಳಿಗೆಯಲ್ಲಿ ಉಡಾವಣೆಯನ್ನು ರದ್ದುಪಡಿಸಲಾಗಿತ್ತು. ಮೇ ೨೯, ಜೂ. ೮ ಮತ್ತು ೧೦ ರಂದು ರಾಕೆಟ್ ಉಡಾವಣೆಗೆ ದಿನಾಂಕ ನಿಗದಿಯಾಗಿತ್ತಾದರೂ ಮುಂದೂಡಲಾಗಿತ್ತು.

ಹಲವು ಭಾರಿ ಉಡಾವಣೆ ಮುಂದೂಡಿದ ಬಳಿಕ ಅಂತಿಮವಾಗಿ ಜೂ. ೧೯ಕ್ಕೆ ಉಡಾವಣಾ ದಿನಾಂಕವನ್ನು ನಿಗದಿ ಮಾಡಿತ್ತು. ಆದರೆ, ರಷ್ಯಾದ ವಿಭಾಗದಲ್ಲಿ ಇತ್ತೀಚೆಗೆ ನಡೆದ ದುರಸ್ಥಿಗಳ ನಂತರ ಕಕ್ಷೆಯ ಪ್ರಯೋಗಾಲಯದಲ್ಲಿ ಕಾರ್ಯಾಚರಣೆ ಮೌಲ್ಯಮಾಪನ ಮಾಡಲು ನಾಸಾಗೆ ಅವಕಾಶ ಕಲ್ಪಿಸುವ ನಿಟ್ಟಿನಲ್ಲಿ ಜೂ. ೧೯ಕ್ಕೆ ನಿಗದಿಯಾಗಿದ್ದ ಸಮಯವನ್ನು ರದ್ದು ಮಾಡಿ ಹೊಸ ದಿನಾಂಕ ಪ್ರಕಟಿಸಲಾಗಿದೆ.


ಅಂತಾರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರಕ್ಕೆ ತಂತ್ರಜ್ಞರನ್ನು ಕಳುಹಿಸುವ ಖಾಸಗಿ ಬಾಹ್ಯಾಕಾಶ ಕೇಂದ್ರವನ್ನು ಆಕ್ಸಿಯಂ-೪ ಮಿಷನ್‌ಪಯಣಕ್ಕೆ ನಾಸಾ, ಆಕ್ಸಿಯಂ ಸ್ಪೇಸ್ ಮತ್ತು ಸ್ಪೇಸ್ ಎಕ್ಸ್ ಸಂಸ್ಥೆಗಳು ಜೂ. ೨೨ ದಿನಾಂಕವನ್ನು ಆಯ್ಕೆ ಮಾಡಿಕೊಂಡಿದೆ.


ಆಕ್ಸಿಯಂ-೪ ವಾಣಿಜ್ಯ ಕಾರ್ಯಾಚರಣೆಯನ್ನು ಕಮಾಂಡರ್ ಪೆಗ್ಗಿವಿಕ್ಸನ್ ನೇತೃತ್ವ ವಹಿಸಿದ್ದು, ಶುಭಾಂಶು ಶುಕ್ಲಾ ಮಿಷನ್ ಪೈಲಟ್ ಆಗಿ ಮತ್ತು ಹಂಗೇರಿಯನ್ ಗಗನಯಾತ್ರಿ ಟಿಬೋರ್‌ಕಾಹು ಮತ್ತು ಪೋಲೆಂಡ್‌ನ ಸ್ಲಾವೋಸ್ಜ್ ಉಜ್ನಾಮ್‌ಸ್ಕಿ ವಿಸ್ನಿವಿಸ್ನಿ ಮಿಷನ್ ತಜ್ಞರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.