
ಕೋಲಾರ,ನ,೨೫-ಭಾರತ ದೇಶದ ಪ್ರಥಮ ಉಪ ಪ್ರಧಾನಿ ಉಕ್ಕಿನ ಮನುಷ್ಯ ಸರ್ದಾರ್ ವಲ್ಲಭಬಾಯ್ ಪಟೇಲ್ ಮಹಾನ್ ಅಪ್ರತಿಮ ದೇಶ ಭಕ್ತ ಎಂದು ನಗರದ ಬಂಗಾರಪೇಟೆ ವೃತ್ತ ಪ್ರವಾಸಿ ಮಂದಿರ ಸಮೀಪ ಏಕತಾ ನಡಿಗೆ ಪಾದಯಾತ್ರೆ ಕಾರ್ಯಕ್ರಮದಲ್ಲಿ ಸಂಸದ ಎಂ.ಮಲ್ಲೇಶ್ ಬಾಬು ಅಭಿಪ್ರಾಯಪಟ್ಟರು.
ನಗರದ ಪ್ರವಾಸಿ ಮಂದಿರದ ವೃತ್ತದ ಬಳಿ ಭಾರತ ಸರ್ಕಾರದ ಯುವಜನ ವ್ಯವಹಾರ ಮತ್ತು ಕ್ರೀಡಾ ಸಚಿವಾಲಯದಿಂದ ಭಾರತದ ಉಕ್ಕಿನ ಮನುಷ್ಯ ಸರ್ದಾರ್ ವಲ್ಲಬಾಯ್ ಪಟೇಲ್ ೧೫೦ನೇ ಜನ್ಮದಿನದ ಅಂಗವಾಗಿ ಆಯೋಜಿಸಿದ್ದ ಏಕತಾ ನಡಿಗೆ ಪಾದಯಾತ್ರೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಭಾರತದ ಏಕೀಕರಣಕ್ಕೆ ಕಾರಣವಾದ ಸರ್ದಾರ್ ವಲ್ಲಬಾಯ್ ಪಟೇಲ್ ಅವರ ಜನ್ಮದಿನಾಚರಣೆ ಪ್ರಯುಕ್ತ ದೇಶಾದ್ಯಂತ ಪಾದಯಾತ್ರೆ ಆಯೋಜಿಸಿದೆ. ಕೇಂದ್ರದ ಯುವಜನ ವ್ಯವಹಾರ ಮತ್ತು ಕ್ರೀಡಾ ಸಚಿವಾಲಯದಿಂದ ಪಾದಯಾತ್ರೆ ದೇಶಾದ್ಯಂತ ಆಯೋಜಿಸಿದೆ ಎಂದು ತಿಳಿಸಿದರು. ದೇಶದ ಪ್ರಧಾನ ಮಂತ್ರಿ ನರೇಂದ್ರ ಮೋದಿ ೨೦೪೭ಕ್ಕೆ ವಿಕಸಿತ ಭಾರತ ಕಟ್ಟುವ ಪರಿಣಾಮವಾಗಿ ದೇಶದ ಯುವಕರನ್ನು ದೇಶದ ಪ್ರಗತಿಯೊಂದಿಗೆ ದೇಶದ ಗೌರವದೊಂದಿಗೆ ಕೊಂಡೊಯ್ಯುವ ನಿಟ್ಟಿನಲ್ಲಿ ಈ ಪಾದಯಾತ್ರೆ ಆಯೋಜಿಸಿದೆ, ಭಾರತ ದೇಶವು ವಿಶ್ವದ ಹಿರಿಯಣ್ಣನಾಗುವ ನಿಟ್ಟಿನಲ್ಲಿ ಯುವಕರು ಶ್ರಮಿಸಬೇಕಾಗಿದೆ ಎಂದು ಅಭಿಪ್ರಾಯಪಟ್ಟರು.
ಅ.೬ರಿಂದ ದೇಶದಲ್ಲಿ ಹಲವಾರು ಕಾರ್ಯಕ್ರಮಗಳನ್ನು ಆಯೋಜಿಸುತ್ತಾ ಬರಲಾಗುತ್ತಿದೆ. ನಾನು ಭಾರತದ ಸೇವಕ ಎನ್ನುವ ಮನೋಭಾವದೊಂದಿಗೆ ವಿದ್ಯಾರ್ಥಿಗಳು ಎನ್.ಸಿ.ಸಿ, ಎನ್ಎಸ್ಎಸ್, ನಿವೃತ್ತ ಸೇನಾಧಿಕಾರಿಗಳು ಸೇರಿದಂತೆ ಎಲ್ಲಾ ಸ್ವಯಂ ಸೇವಕರು ಈ ಏಕತಾ ನಡಿಗೆಯ ಪಾದಯಾತ್ರೆಯಲ್ಲಿ ಪಾಲ್ಗೊಳ್ಳುತ್ತಿದ್ದಾರೆ ಎಂದರು.
ಸ್ವಾತಂತ್ರದ ನಂತರ ಹರಿದು ಹಂಚಿ ಹೋಗಿದ್ದ ೫೬೫ ವಿವಿಧ ರಾಜರ ಸಂಸ್ಥಾನಗಳನ್ನು ಒಗ್ಗೂಡಿಸಿ ಅವರ ಮನವೊಲಿಸುವ ಮೂಲಕ, ಅಲ್ಲದೇ ಮೊಂಡುತನ ಮಾಡುವರನ್ನು ಬಗ್ಗು ಬಡಿದು ವಿಲೀನ ಮಾಡಿ ಭಾರತವನ್ನು ಏಕೀಕರಣ ರಾಷ್ಟ್ರವನ್ನಾಗಿ ಮಾಡುವಲ್ಲಿ ಸರ್ದಾರ್ ವಲ್ಲಭಬಾಯ್ ಪಟೇಲ್ ಅವರ ಪಾತ್ರ ಮಹತ್ತರವಾದದ್ದು ಎಂದು ಸ್ಮರಿಸಿದರು.
ಭಾರತದಲ್ಲಿ ಸರ್ದಾರ್ ವಲ್ಲಬಾಯ್ ಪಟೇಲರು ಹಂಚಿ ಹೋಗಿದ್ದ ರಾಜ್ಯಗಳನ್ನು ಒಗ್ಗೂಡಿಸುವ ಮೂಲಕ ಭಾರತ ರಾಷ್ಟ್ರವನ್ನು ನಿರ್ಮಿಸಿದ ರೀತಿಯಲ್ಲಿ ಅವರ ಕನಸುಗಳನ್ನು ನನಸು ಮಾಡುವ ನಿಟ್ಟಿನಲ್ಲಿ ನಾವೆಲ್ಲರೂ ಸಾಗಬೇಕಾಗಿದೆ. ಯುವಕರು ದೇಶದ ಘನತೆ, ಗೌರವ ಮತ್ತು ಐಕ್ಯತೆಗಳನ್ನು ಎತ್ತಿ ಹಿಡಿಯುವ ಮೂಲಕ ವಿಶ್ವದ ಹಿರಿಯಣ್ಣನನ್ನಾಗಿ ಭಾರತವನ್ನು ಮಾಡಬೇಕಾಗಿದೆ ಎಂದರು.
ಮೈ ಭರತ್ ಜಿಲ್ಲಾ ಯುವಜನ ಅಧಿಕಾರಿ ರಾಜೇಶ್ ಕಾರಂತ್, ಕ್ರೀಡಾ-ಯುವ ಸಬಲೀಕರಣ ಇಲಾಖೆ ಸಹಾಯಕ ನಿರ್ದೇಶಕಿ ಗೀತಾ, ಗ್ರೇಡ್-೨ ತಹಸೀಲ್ದಾರ್ ಹಂಸಮರಿಯಾ, ಶ್ರೀ ದೇವರಾಜ ಅರಸು ಉನ್ನತ ಶಿಕ್ಷಣ ಮತ್ತು ಸಂಶೋಧನಾ ಸಂಸ್ಥೆಯ ರಿಜಿಸ್ಟರ್ ಡಾ.ಮುನಿನಾರಾಯಣ, ಮೈ ಭಾರತ್ ಕಚೇರಿಯ ಪ್ರವೀಣ್ ಕುಮಾರ್, ರಾಷ್ಟ್ರೀಯ ಸೇವಾ ಯೋಜನೆಯ ಜಿಲ್ಲಾ ನೋಡಲ್ ಅಧಿಕಾರಿ ಶ್ರೀಧರ್, ಆಯೋಜಕರಾದ ಸುಮನ್ ಎ.ವಿ, ಮುಖಂಡರಾದ ಓಂಶಕ್ತಿ ಚಲಪತಿ, ಸಿಎಂಆರ್ ಶ್ರೀನಾಥ್, ಬಿ.ವಿ.ಮಹೇಶ್, ಪುರ ನಾರಾಯಣಸ್ವಾಮಿ, ರಾಜೇಶ್ ಸಿಂಗ್, ಶಿವಕುಮಾರ್, ವಡಗೂರು ರಾಕೇಶ್, ಮಾಗೇರಿ ನಾರಾಯಣಸ್ವಾಮಿ ಇದ್ದರು.

























