ರವಿಕುಮಾರ ಹೇಳಿಕೆ ಹೆಣ್ಣು ಕುಲಕ್ಕೆ ಅವಮಾನ:ಸಚಿವೆ ಲಕ್ಷ್ಮಿ ಹೆಬ್ಬಾಳಕರ್

ಬೀದರ್: ಜು.4:ವಿಧಾನ ಪರಿಷತ್ ಸದಸ್ಯ ಎನ್. ರವಿಕುಮಾರ ಅವರು ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ವಿರುದ್ಧ ನೀಡಿರುವ ಹೇಳಿಕೆ ಇಡೀ ಹೆಣ್ಣು ಕುಲಕ್ಕೆ ಮಾಡಿರುವ ಅವಮಾನ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಲಕ್ಷ್ಮಿ ಹೆಬ್ಬಾಳಕರ್ ಹೇಳಿದರು.
ನಗರದಲ್ಲಿ ಶುಕ್ರವಾರ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಬಿಜೆಪಿಯವರು ರಾಮಾಯಣದ ಬಗ್ಗೆ ಹೇಳುತ್ತಾರೆ. ರಾಮ-ಸೀತೆ ಕುರಿತು ಮಾತನಾಡುತ್ತ ಮಹಿಳೆಯರನ್ನು ಗೌರವಿಸಬೇಕು ಎಂದು ಹೇಳುತ್ತಾರೆ. ಇನ್ನೊಂದು ಕಡೆ ಹಲ್ಕಾ ಮಾತನಾಡುತ್ತಾರೆ. ಇದು ಬಿಜೆಪಿಯವರ ಸಂಸ್ಕøತಿ ತೋರಿಸುತ್ತದೆ. ಇವರಿಗೆ ಮಾನ ಮರ್ಯಾದೆ ಇಲ್ಲ ಎಂದು ಟೀಕಿಸಿದರು.
ರವಿಕುಮಾರ ಅವರಿಗೆ ಮಹಿಳೆಯರ ಬಗ್ಗೆ ಹಗುರ ಮಾತನಾಡುವ ಕೆಟ್ಟ ಚಾಳಿ ಬಿದ್ದಿದೆ. ಮಹಿಳೆಯರಿಗೆ ಅವಮಾನ ಮಾಡುವುದು, ಅವಾಚ್ಯ ಪದಗಳಿಂದ ನಿಂದಿಸಿ ಮಾನಸಿಕ ಹಿಂಸೆ ಕೊಡುವುದು ಚಾಳಿ ಆಗಿದೆ. ನನಗೂ ಇದೇ ರೀತಿ ಸಿ.ಟಿ. ರವಿ ಸದನದಲ್ಲಿ ನಿಂದಿಸಿದ್ದರು. ಇವರಿಗೆ ನೈತಿಕ ಜವಾಬ್ದಾರಿ ಇಲ್ಲ. ಇಂತಹವರು ವಿಧಾನಸಭೆಯಲ್ಲಿ ಇರಕೂಡದು ಎಂದರು.
ನಮ್ಮ ಪಕ್ಷದಲ್ಲಿ ಒಬ್ಬರು ಮಾಸ್ ಲೀಡರ್ ಇದ್ದಾರೆ. ಇನ್ನೊಬ್ಬರು ಸಂಘಟನಾ ಚತುರರಿದ್ದಾರೆ. ಇಬ್ಬರು ಒಟ್ಟಿಗೆ ಸೇರಿಕೊಂಡು ಕರ್ನಾಟಕದ ಜನತೆಗೆ ಭಾಷೆ ಕೊಟ್ಟಂತೆ ಸರ್ಕಾರ ನಡೆಸುತ್ತಾರೆ. ಸರ್ಕಾರ ಭದ್ರವಾಗಿದ್ದು, ಯಾವುದೇ ಗೊಂದಲವಿಲ್ಲ. ಇನ್ನು, ನನ್ನ ಇಲಾಖೆಯಲ್ಲಿ ಭ್ರಷ್ಟಾಚಾರ ಮಾಡಿದರೆ ಸುಮ್ಮನಿರಲ್ಲ ಎಂದು ಪ್ರಶ್ನೆಗೆ ಪ್ರತಿಕ್ರಿಯಿಸಿದರು.