ದಾವೂದ್ ಗ್ಯಾಂಗ್‌ನ ಸದಸ್ಯನ ಹತ್ಯೆ ಪಾತಕಿ ರವಿ ಪೂಜಾರಿ ಖುಲಾಸೆ

ಮುಂಬೈ, ಮೇ ೨೮: ೧೯೯೯ ರಲ್ಲಿ ಭೂಗತ ಪಾತಕಿ ದಾವೂದ್ ಇಬ್ರಾಹಿಂ ಗ್ಯಾಂಗ್‌ನ ಸದಸ್ಯನ ಹತ್ಯೆಗೆ ಸಂಬಂಧಿಸಿದ ಪ್ರಕರಣದಲ್ಲಿ ಪಾತಕಿ ರವಿ ಪೂಜಾರಿಯನ್ನು ನಗರದ ವಿಶೇಷ ನ್ಯಾಯಾಲಯ ಮಂಗಳವಾರ ಖುಲಾಸೆಗೊಳಿಸಿದೆ.


ವಿಶೇಷ ನ್ಯಾಯಾಧೀಶ ಎ.ಎಂ. ಪಾಟೀಲ್ ಪೂಜಾರಿ ಆರ್.ಪಿ.ಟಿ. ಪೂಜಾರಿ ವಿರುದ್ಧ ಭಾರತೀಯ ದಂಡ ಸಂಹಿತೆ (ಐಪಿಸಿ) ಸೆಕ್ಷನ್ ಅಡಿಯಲ್ಲಿ ಕೊಲೆ ಮತ್ತು ಮಹಾರಾಷ್ಟ್ರ ಸಂಘಟಿತ ಅಪರಾಧ ನಿಯಂತ್ರಣ ಕಾಯ್ದೆ (ಎಂಸಿಒಸಿಎ) ಯ ಸಂಬಂಧಿತ ನಿಬಂಧನೆಗಳ ಅಡಿಯಲ್ಲಿ ದಾಖಲಾಗಿದ್ದ ಪ್ರಕರಣದಲ್ಲಿ ಪೂಜಾರಿಯನ್ನು ಖುಲಾಸೆಗೊಳಿಸಿದ್ದಾರೆ.


ದಾವೂದ್ ಇಬ್ರಾಹಿಂ ಗ್ಯಾಂಗ್‌ನ ಸದಸ್ಯ ಎಂದು ಹೇಳಲಾದ ಅನಿಲ್ ಶರ್ಮಾನನ್ನು ೧೯೯೯ ರ ಸೆಪ್ಟೆಂಬರ್ ೨ ರಂದು ಅಂಧೇರಿ ಉಪನಗರದಲ್ಲಿ ದರೋಡೆಕೋರ ಛೋಟಾ ರಾಜನ್ ನ ಜನರು ಗುಂಡಿಕ್ಕಿ ಕೊಂದರು ಎಂದು ಪ್ರಾಸಿಕ್ಯೂಷನ್ ತಿಳಿಸಿದೆ. ೧೯೯೨ ರ ಸೆಪ್ಟೆಂಬರ್ ೧೨ ರಂದು ಮುಂಬೈನ ಜೆಜೆ ಆಸ್ಪತ್ರೆಯ ಆವರಣದಲ್ಲಿ ನಡೆದ ಗುಂಡಿನ ಚಕಮಕಿಯಲ್ಲಿ ಶರ್ಮಾ ಆರೋಪಪಟ್ಟಿಯಲ್ಲಿ ಒಬ್ಬರಾಗಿದ್ದ ಎಂದು ತಿಳಿದು ಬಂದಿದೆ. ಈ ಗುಂಡಿನ ಚಕಮಕಿಯನ್ನು ದಾವೂದ್ ಇಬ್ರಾಹಿಂ ಗ್ಯಾಂಗ್ ಸದಸ್ಯರು ನಡೆಸಿದ್ದಾರೆಂದು ಹೇಳಲಾಗಿದ್ದು, ಆ ಪ್ರಕರಣದಲ್ಲಿ ಶರ್ಮಾ ಜಾಮೀನಿನ ಮೇಲೆ ಹೊರಬಂದಿದ್ದ.


ಈ ಹಿಂದೆ, ಸಾಕ್ಷ್ಯಾಧಾರಗಳ ಕೊರತೆಯಿಂದಾಗಿ ನ್ಯಾಯಾಲಯವು ಪ್ರಕರಣದ ೧೧ ಆರೋಪಿಗಳನ್ನು ಖುಲಾಸೆಗೊಳಿಸಿತ್ತು. ಶರ್ಮಾ ಹತ್ಯೆಯ ಪಿತೂರಿಯಲ್ಲಿ ರಾಜನ್ ಕೂಡ ಭಾಗಿಯಾಗಿದ್ದಾನೆ ಎಂದು ಸಾಬೀತುಪಡಿಸಲು ನ್ಯಾಯಾಲಯದ ಮುಂದೆ ಯಾವುದೇ ಪುರಾವೆಗಳು ಲಭ್ಯವಿಲ್ಲದ ಕಾರಣ, ಕೊಲೆಯಲ್ಲಿ ತನ್ನ ಪಾತ್ರದ ಆರೋಪದ ಮೇಲೆ ಛೋಟಾ ರಾಜನ್ ವಿರುದ್ಧ ಪ್ರಕರಣ ದಾಖಲಾಗಿತ್ತು. ಆದರೆ ಆತನನ್ನು ಪ್ರಕರಣದಿಂದ ಮುಕ್ತಗೊಳಿಸಲಾಯಿತು. ರವಿ ಪೂಜಾರಿ ದೇಶ ತೊರೆದು ತಲೆಮರಿಸಿಕೊಂಡಿದ್ದ.


ಕರ್ನಾಟಕ ಪೊಲೀಸರು ೨೦೨೧ ರಲ್ಲಿ ಆತನ್ನು ವಶಕ್ಕೆ ಪಡೆದಿದ್ದರು. ಪೂಜಾರಿ ಪ್ರಸ್ತುತ ಕರ್ನಾಟಕದ ಜೈಲಿನಲ್ಲಿದ್ದಾನೆ. ಅಲ್ಲಿನ ಸ್ಥಳೀಯ ಪೊಲೀಸರಿಂದ ಬಾಕಿ ಇರುವ ಪ್ರಕರಣಗಳಲ್ಲಿ ವಿಚಾರಣೆಯನ್ನು ಎದುರಿಸುತ್ತಿದ್ದಾನೆ.


ರವಿ ಪೂಜಾರಿ ಉಡುಪಿ ಜಿಲ್ಲೆ ಮಲ್ಪೆ ಸಮೀಪದ ಕಲ್ಮಾಡಿ ಬಪ್ಪುತೋಟದ ನಿವಾಸಿಯಾಗಿ ಜನಿಸಿದ್ದ. ಚಿಕ್ಕವಯಸ್ಸಿನಲ್ಲೇ ವಿದ್ಯಾಭ್ಯಾಸವನ್ನು ಮೊಟಕುಗೊಳಿಸಿದ ಈತ ತಂದೆಯ ಜತೆ ಮುಂಬೈಗೆ ಹೋಗಿ ಅಲ್ಲೇ ಕೆಲಸ ಮಾಡಿಕೊಂಡು, ಭೂಗತ ಜಗತ್ತಿಗೆ ಕಾಲಿಟ್ಟ. ಇಂಗ್ಲೀಷ್, ಹಿಂದಿ ಮತ್ತು ಕನ್ನಡ ಸೇರಿ ಹಲವು ಭಾಷೆಗಳನ್ನು ಈತ ಬಲ್ಲವನಾಗಿದ್ದು, ಈತನಿಗೆ ಪತ್ನಿ ಪದ್ಮಾ ಪೂಜಾರಿ, ಓರ್ವ ಮಗ ಮತ್ತು ಇಬ್ಬರು ಪುತ್ರಿಯರಿದ್ದಾರೆ.