ಬಾಗಲಕೋಟೆ, ಸೆ10 : ಶಾಲಾ, ಕಾಲೇಜು ವಿದ್ಯಾರ್ಥಿಗಳಿಗೆ ಅನುಗುಣವಾಗಿ ಗ್ರಾಮೀಣ ಭಾಗಕ್ಕೆ ಸಮರ್ಪಕ ಬಸ್ ಸೌಲಭ್ಯ ಒದಗಿಸುವಂತೆ ಬೀಳಗಿ ಶಾಸಕ ಹಾಗೂ ಹಟ್ಟಿ ಚಿನ್ನದ ಗಣಿ ನಿಯಮಿತದ ಅಧ್ಯಕ್ಷ ಜೆ.ಟಿ.ಪಾಟೀಲ ಅಧಿಕಾರಿಗಳಿಗೆ ಸೂಚಿಸಿದರು.
ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ವಿಭಾಗೀಯ ಕಚೇರಿಯಲ್ಲಿ ನಡೆದ ಬೀಳಗಿ ಕ್ಷೇತ್ರದ ಪ್ರಯಾಣಿಕರ ಸಮಸ್ಯೆಗಳ ಕುರಿತು ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ದೂರದ ಊರುಗಳಿಗೆ ಹಾಗೂ ಅಂತರರಾಜ್ಯಗಳಿಗೆ ಬಸ್ಗಳನ್ನು ಬಿಡುವುದಕ್ಕಿಂತ ಮೊದಲು ಸ್ಥಳೀಯ ಮಟ್ಟದಲ್ಲಿ ಸಂಪೂರ್ಣ ಸಾರಿಗೆ ಸೌಲಭ್ಯ ಒದಗಿಸುವುದು ಮುಖ್ಯವಾಗಿದೆ. ಪ್ರತಿ ಹಳ್ಳಿಗೂ ಕೂಡ ಬಸ್ ಸಂಚರಿಸುವಂತೆ ಅಗತ್ಯ ಕ್ರಮಕೈಗೊಳ್ಳಲು ತಿಳಿಸಿದರು.
ಸಭೆಯಲ್ಲಿ ತೆಗೆದುಕೊಂಡ ಪರಿಹಾರಗಳನ್ನು ಕೇವಲ ಚರ್ಚೆಗಳಿಗೆ ಮಾತ್ರ ಸೀಮಿತಗೊಳಿಸದೆ ಅವುಗಳನ್ನು ಕಾರ್ಯರೂಪಕ್ಕೆ ತರುವಂತೆ ಅಧಿಕಾರಿಗಳಿಗೆ ಸೂಚಿಸಿದರು. ವಿಶೇಷವಾಗಿ, ಬಸ್ ಚಾಲಕರಿಗೆ ಸೂಕ್ತ ಅರಿವು ಮೂಡಿಸಿ ಮುಂಜಾನೆಯ ಸಮಯದಲ್ಲಿ ಶಾಲಾ ಹಾಗೂ ಕಾಲೇಜು ವಿದ್ಯಾರ್ಥಿಗಳಿಗೆ ಸರಿಯಾದ ಸಮಯಕ್ಕೆ ಬಸ್ ಸೇವೆಯನ್ನು ಒದಗಿಸಬೇಕು. ಅದರಂತೆ, ಬೀಳಗಿ ಡಿಪೆÇೀದಿಂದ ಎರಡು ದಿನದೊಳಗೆ ವಿಜಯಪುರ ಮಾರ್ಗವಾಗಿ ಸಂಚರಿಸುವ ಎರಡು ಬಸ್ಗಳನ್ನು ಸ್ಥಳೀಯ ಹಳ್ಳಿಗಳಿಗೆ ಸಂಪರ್ಕ ಕಲ್ಪಿಸಲು ಕ್ರಮವಹಿಸಲು ಸೂಚಿಸಿದರು.
ಬೀಳಗಿ ಕ್ರಾಸ್ನಿಂದ ಸರ್ಕಾರಿ ಆಸ್ಪತ್ರೆಗೆ ರಾತ್ರಿ 9 ಗಂಟೆಯವರೆಗೆ ಒಂದು ಬಸ್ ಸೇವೆ ದೊರಕಬೇಕು. ಕ್ಷೇತ್ರದ ಯಾವುದೇ ಗ್ರಾಮದ ವಿದ್ಯಾರ್ಥಿಗಳಿಗೆ ತೊಂದರೆಯಾಗುವ ಸಂದರ್ಭಗಳಲ್ಲಿ ಹಾಗೂ ನಿಗದಿತ ಸ್ಥಳ ಬಿಟ್ಟು ಬೇರೆಕಡೆಗಳಲ್ಲಿ ನಿಲ್ಲುವ ಚಾಲಕರ ಮೇಲೆ ಶಿಸ್ತು ಕ್ರಮ ಕೈಗೊಳ್ಳಬೇಕು. ಹೂಲಗೇರಿ, ಸೊಕನಾದಗಿ, ಶೆಲ್ಲಿಕೇರಿ, ಅನವಾಲ, ನೀರಬೂದಿಹಾಳ, ಗಂಗನಬೂದಿಹಾಳ, ಕೆರಕಲಮಟ್ಟಿ, ಯಳ್ಳಿಗುತ್ತಿ, ಶಿರಗುಪ್ಪಿ, ಕುಂದರಗಿ, ಚಿಕ್ಕಾಲಗುಂಡಿ ಗ್ರಾಮಗಳಿಗೆ ಸಂಬಂಧಿಸಿದ ವಿದ್ಯಾರ್ಥಿಗಳ ಸಾರಿಗೆ ಸಮಸ್ಯೆಗಳಿಗೆ ಪರಿಹಾರ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಲಾಯಿತು.
ಸಭೆಯಲ್ಲಿ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ವಿಭಾಗೀಯ ನಿಯಂತ್ರಣಾಧಿಕಾರಿ ಎನ್.ಟಿ.ಪಾಟೀಲ, ಜಿಲ್ಲಾ ಸಂಚಾರಿ ನಿಯಂತ್ರಣಾಧಿಕಾರಿ ಕೆ.ಕೆ.ಲಮಾಣಿ, ಡಿಎಂಇ ಅಶೋಕ ಡೆಂಗಿ, ಸಹಾಯಕ ಸಂಚಾರಿ ನಿಯಂತ್ರಣಾಧಿಕಾರಿ ಕಲ್ಲೊಳ್ಳಿ, ಬಾಗಲಕೋಟೆ ಡಿಪೋ ಮ್ಯಾನೇಜರ ಕೃಷ್ಣಾ ಚವ್ಹಾಣ, ಬೀಳಗಿ ಡಿಪೋ ಮ್ಯಾನೇಜರ ರಮೇಶ ಖೇಡದ ಸೇರಿದಂತೆ ಇತರ ಅಧಿಕಾರಿಗಳು ಉಪಸ್ಥಿತರಿದ್ದರು.






















